ಕೊರೊನಾ ನಡುವೆಯೇ ಶಾಲೆಗಳನ್ನು ತೆರೆಯಲು 14 ರಾಜ್ಯಗಳಲ್ಲಿ ಸಿದ್ಧತೆ
ನವದೆಹಲಿ, ಆಗಸ್ಟ್ 11: ಸುಮಾರು 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದೇ ತಿಂಗಳು ಶಾಲಾ-ಕಾಲೇಜುಗಳನ್ನು ತೆರೆಯಲು ಸಿದ್ಧತೆ ನಡೆಸಿವೆ.
ಬಹುತೇಕ ಎಲ್ಲಾ ಶಿಕ್ಷಕರಿಗೂ ಲಸಿಕೆ ನೀಡಲಾಗಿದ್ದು, ಶಿಕ್ಷಕರಲ್ಲಿ ಸೋಂಕು ತಗುಲಿರುವ ಪ್ರಮಾಣ ಕೂಡ ಕಡಿಮೆ ಇರುವ ಕಾರಣದಿಂದಾಗಿ ಶಾಲೆಗಳನ್ನು ತೆರೆಯಲು ಮುಂದಾಗಿದ್ದಾರೆ.
ಮಂಗಳವಾರ ನಡೆದ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಮಾತನಾಡಿ, ದೇಶಾದ್ಯಂತ ಶೇ.50ರಷ್ಟು ಶಿಕ್ಷಕರಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದರು.
ಲಸಿಕೆಯಲ್ಲಿ ಮೊದಲ ಆದ್ಯತೆಯನ್ನು ಪಡೆದ ಮುಂಚೂಣಿ ಕೆಲಸಗಾರರಲ್ಲಿ ಶಿಕ್ಷಕರು ಇಲ್ಲದಿದ್ದರೂ, ಕೆಲವು ರಾಜ್ಯಗಳು ಶಾಲೆಗಳನ್ನು ಮತ್ತೆ ತೆರೆಯಲು ಶಿಕ್ಷಕರು ಲಸಿಕೆ ಪಡೆಯಲೇಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಶಾಲೆಗಳನ್ನು ಮುಚ್ಚಿದ್ದರಿಂದ ಬಾಲ್ಯ ವಿವಾಹ ಹಾಗೂ ಮಕ್ಕಳನ್ನು ಮನೆಗೆಲಸಕ್ಕೆ ತೆರಳುವಂತೆ ಮಾಡಿದೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ.
ಮಾರ್ಚ್ 2020ರಲ್ಲಿ ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಶಾಲೆಗಳು ಬಾಗಿಲು ಮುಚ್ಚಿದ್ದವು, ಮತ್ತು ಕೆಲವು ಕೊರೊನಾ ಎರಡನೇ ಅಲೆ ಮುಗಿದ ಬಳಿಕ ಮತ್ತೆ ತೆರೆಯಲ್ಪಟ್ಟಿದ್ದವು.
ಅಂದಿನಿಂದ ಇಂದಿನವರೆಗೆ 25 ಕೋಟಿಗೂ ಅಧಿಕ ಮಕ್ಕಳು ಆನ್ಲೈನ್ ಅಥವಾ ದೂರಶಿಕ್ಷಣದ ಮೇಲೆ ಅವಲಂಬಿತರಾಗಿದ್ದಾರೆ. ಬಡವರು ಅಥವಾ ಹಿಂದುಳಿದ ಸಮುದಾಯದ ಮಕ್ಕಳು ಕಳೆದ ಒಂದು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಯಾವ್ಯಾವ ರಾಜ್ಯಗಳಲ್ಲಿ ಶಾಲೆಗಳು ಆರಂಭ
ಹರ್ಯಾಣದಲ್ಲಿ ಜುಲೈ 16 ರಿಂದ 9 ರಿಂದ 12ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಪಂಜಾಬ್, ಉತ್ತರಾಖಂಡ್, ಹಿಮಾಚಲಪ್ರದೇಶ, ಪುದುಚೇರಿ, ಲಕ್ಷದ್ವೀಪದಲ್ಲಿ ಆಗಸ್ಟ್ ಮೊದಲ ವಾರದಿಂದಲೇ ಶಾಲೆಗಳು ಆರಂಭಗೊಂಡಿವೆ. ಆಂಧ್ರಪ್ರದೇಶದಲ್ಲಿ ಆಗಸ್ಟ್ 16ರಿಂದ ಆರಂಭಗೊಳ್ಳಲಿದೆ. ಇನ್ನು ಕರ್ನಾಟಕದಲ್ಲಿ ಆಗಸ್ಟ್ 23ರಿಂದ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ತಮಿಳುನಾಡಿನಲ್ಲಿ ಸೆಪ್ಟೆಂಬರ್ 1 ರಿಂದ 9-12ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ಆಗಸ್ಟ್ 23ರಿಂದ ಶಾಲೆಗಳು ಆರಂಭ
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಶಾಲಾ ಕಾಲೇಜು ಆರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿ ನೂತನ ಶಿಕ್ಷಣ ಸಚಿವ ಡಿ.ಸಿ.ನಾಗೇಶ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಆಗಸ್ಟ್ 23 ರಿಂದ ಒಂಬತ್ತನೇಯ ತರಗತಿಯಿಂದ ಹಿಡಿದು ಹನ್ನೆರಡನೇಯ ತರಗತಿವರೆಗೆ ಆರಂಭ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ತಜ್ಞರ ವರದಿಯನ್ನ ಪರಾಮರ್ಷಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣವನ್ನ ಆರಂಭಿಸುವ ಬಗ್ಗೆ ಮತ್ತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಸಚಿವರು ಹೇಳಿದರು.

ಶಾಲೆ ತೆರೆಯುವ ಆತುರ ಬೇಡ
ಕರ್ನಾಟಕಲ್ಲಿ ಶಾಲೆಗಳನ್ನು ಆರಂಭಿಸಲು ದುಡುಕುವುದು ಬೇಡ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಆಗಸ್ಟ್ 15ರವರೆಗೂ ಶಾಲೆ ಆರಂಭಕ್ಕೆ ಕಾಯುವುದು ಸೂಕ್ತ. ಇನ್ನೆರಡು ವಾರ ಕಾದು ನೋಡಿ ಶಾಲೆ ಆರಂಭಿಸಿದರೆ ಒಳಿತು. ಶಾಲೆಗಳನ್ನ ಆರಂಭಿಸಲು ದುಡುಕಿನ ನಿರ್ಧಾರ ಒಳ್ಳೆಯದಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೇರಳ-ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳ ಆದಾಗ ಕರ್ನಾಟಕದಲ್ಲಿ 2 ವಾರದ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಳವಾಗಿತ್ತು. ಹೀಗಾಗಿ, ಈ ಬಾರಿಯೂ ಇದೇ ಮಾದರಿ ಏರಿಕೆ ಸಾಧ್ಯತೆಯಿದೆ. ಶಾಲೆಗಳನ್ನು ಆರಂಭಿಸುವ ವಿಚಾರ ಬಹಳ ಸೂಕ್ಷ್ಮ ನಿರ್ಧಾರವಾಗಿದೆ. ಇದರ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕಾಗಿದೆ. ಕೇರಳ ಗಡಿ ಭಾಗದ ಮಂಗಳೂರಿನಲ್ಲಿ ಕೇಸ್ ಹೆಚ್ಚಳವಾಗಿದೆ ಎಂದಿದ್ದಾರೆ.

ಆಫ್ಲೈನ್ ತರಗತಿಗಳು
ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಈಗಾಗಲೇ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜುಲೈ 26ರಿಂದ ಈಗಾಗಲೇ ಪದವಿ ಕಾಲೇಜುಗಳಲ್ಲಿ ಆಫ್ಲೈನ್ ತರಗತಿ ಆರಂಭಿಸಲಾಗಿದ್ದು, ಶಾಲಾ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ತಜ್ಞರು ಸದ್ಯಕ್ಕೆ ಶಾಲಾ ಆರಂಭ ಬೇಡ ಎಂದಿದ್ದಾರೆ.











Click it and Unblock the Notifications