ದೆಹಲಿಯಲ್ಲಿ ಒಂದೇ ಕುಟುಂಬದ 11 ಶವಗಳ ಜೊತೆ ಸಿಕ್ಕ ಡೈರಿಯಲ್ಲೇನಿತ್ತು?
Recommended Video

ನವ ದೆಹಲಿ, ಜುಲೈ 02: ದೆಹಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ನಿನ್ನೆ ಒಂದೇ ಕುಟುಂಬದ 11 ಶವಗಳು ಪತ್ತೆಯಾಗಿದ್ದವು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದು ಕೊಲೆಯೋ, ಆತ್ಮಹತ್ಯೆಯೋ ಅನುಮಾನಗಳು ಮೂಡಿದ್ದವು. ಸಾವಿನ ಕಾರಣ ಕೆದಕಿದಾಗ ವಿಚಿತ್ರವಾದ ಅಂಶಗಳು ಬೆಳಕಿಗೆ ಬರುತ್ತಿವೆ.
ನಿನ್ನೆ ಬೆಳಿಗ್ಗೆ ಆ ಮನೆಯಲ್ಲಿ 10 ಜನರ ಶವ ಛಾವಣಿಗೆ ಹಾಕಿದ್ದ ಕಬ್ಬಿಣದ ಸರಳೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಒಂದು ಶವ ಮಾತ್ರ ಕೊಠಡಿಯೊಂದರಲ್ಲಿ ನೆಲದ ಮೇಲೆ ಬಿದ್ದಿತ್ತು. ಕೆಲವು ಶವಗಳ ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು, ಬಾಯಿಗೆ ಬಟ್ಟೆ ತುರುಕಲಾಗಿತ್ತು. ಕೈ, ಕಾಲು ಕಟ್ಟಲಾಗಿತ್ತು. ಆದ್ದರಿಂದ ಇದು ಕೊಲೆಯೊ ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ.
ಸಾವಿಗೀಡಾಗಿರುವ ಆ ಕುಟುಂಬದ ಬಗ್ಗೆ ಆ ಪ್ರದೇಶದಲ್ಲಿ ಬಹಳ ಗೌರವ ಇದೆ. ಕಿರಾಣಿ ಅಂಗಡಿ ನಡೆಸುತ್ತಿದ್ದ ಅವರಿಗೆ ಯಾವ ಸಾಲವೂ ಇರಲಿಲ್ಲ. ಸ್ಥಿತಿವಂತ ಕುಟುಂಬವೇ ಅದು. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಆರ್ಥಿಕ ಒತ್ತಡಗಳು ಅವರಿಗೆ ಇರಲಿಲ್ಲವೆಂದೇ ಹೇಳಲಾಗುತ್ತಿದೆ.

ಡೈರಿಯೊಂದು ಸಿಕ್ಕಿದೆ
ಆದರೆ ಆ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸಾವಿನ ಬಗ್ಗೆ ಮಹತ್ವದ ಸುಳಿವು ಲಭ್ಯವಾಗಿದೆ. ಡೈರಿಯಲ್ಲಿ ಹಲವು ವಿಚಿತ್ರ ಸಂಕೇತಗಳು, ಜೊತೆಗೆ ಆಚರಣೆಯೊಂದನ್ನು ಮಾಡುವ ಬಗ್ಗೆ ಬರೆಯಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ 'ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಇಚ್ಛಾಶಕ್ತಿಯನ್ನು ತೋರಬೇಕು' ಎಂದು ಬರೆದಿರುವುದು ಇದು ಸಾಮೂಹಿಕ ಆತ್ಮಹತ್ಯೆ ಇರಬಹುದೇ ಎಂಬ ಅನುಮಾನವನ್ನು ಬಲಪಡಿಸಿದೆ. ದೇಹ ಕ್ಷಣಿಕವಾದುದು ಎಂದೂ ಸಹ ಡೈರಿಯಲ್ಲಿ ಬರೆಯಲಾಗಿದೆಯಂತೆ.

ಒಬ್ಬರು ಕೊಂದಿರಬಹುದಾ?
10 ಜನರನ್ನು ಒಬ್ಬರೇ ಕೊಂದು ಕೊನೆಗೆ ಅವರೂ ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಸಾಧ್ಯತೆಯೂ ಈ ಕೇಸಿನಲ್ಲಿ ಇದೆ. ಹಲವು ಸತ್ತ ಹಲವು ವ್ಯಕ್ತಿಗಳ ಕೈಗೆ, ಕಾಲಿಗೆ ಹಗ್ಗ ಕಟ್ಟಲಾಗಿತ್ತು, ಬಾಯಿಗೆ ಬಟ್ಟೆ ತುರುಕಲಾಗಿತ್ತು, ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು. ಹಾಗಾಗಿ ಯಾರೋ ಒಬ್ಬರು ಅವರನ್ನೆಲ್ಲಾ ಬಲವಂತದಿಂದ ನೇಣಿಗೇರಿಸಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.

ಮಗಳ ಮದುವೆ ಫಿಕ್ಸ್ ಮಾಡಿದ್ದು ಏಕೆ?
ಆ ಕುಟುಂಬದ ಪ್ರಿಯಾಂಕ ಎಂಬುವರ ಮದುವೆ ಇದೇ ವರ್ಷಾಂತ್ಯಕ್ಕೆ ನಿಗದಿ ಮಾಡಲಾಗಿತ್ತು. ಕೇವಲ 10 ದಿನಗಳ ಹಿಂದೆಯಷ್ಟೆ ನಿಶ್ಚಿತಾರ್ಥ ಸಹ ಮಾಡಲಾಗಿತ್ತು. ಸಾಯುವುದು ಆ ಕುಟುಂಬಕ್ಕೆ ಮೊದಲೇ ಗೊತ್ತಿದ್ದರೆ ಮದುವೆ ಫಿಕ್ಸ್ ಏಕೆ ಮಾಡುತ್ತಿದ್ದರು. ಕೇವಲ 10 ದಿನಗಳ ಹಿಂದೆಯಷ್ಟೆ ನಿಶ್ಚಿತಾರ್ಥ ಏಕೆ ಮಾಡುತ್ತಿದ್ದರು? ಈ ಪ್ರಶ್ನೆ ಸಹ ಅತಿ ಮುಖ್ಯವಾದುದು.

ಸಾಮೂಹಿಕ ಮೋಕ್ಷಕ್ಕಾಗಿ ಕೃತ್ಯ
ಸಾಮೂಹಿಕ ಮೋಕ್ಷ ಪಡೆಯಲೆಂದು ಕುಟುಂಬ ಸದಸ್ಯರು ಹೀಗೆ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಡೈರಿಯಲ್ಲಿ ಸಿಕ್ಕ ವಿವಿಧ ಆಚರಣೆಗಳು ಹಾಗೂ ಅದಕ್ಕಿಂತ ಮುಖ್ಯವಾಗಿ ಆ ಮನೆಯ ಗೋಡೆಗೆ ಸರಿಯಾಗಿ 11 ತೂತು ಮಾಡಿ ಸಣ್ಣ ಪೈಪ್ಗಳನ್ನು ಜೋಡಿಸಲಾಗಿತ್ತು. ಎಲ್ಲರೂ ಸಾಮೂಹಿಕವಾಗಿ ಮೋಕ್ಷ ಪಡೆಯಲೆಂದು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

ಒಬ್ಬರ ಕತ್ತು ಹಿಸುಕಿ ಸಾಯಿಸಲಾಗಿದೆ
ಮನೆಯ ಹಿರಿಯ ಸದಸ್ಯೆ ವೃದ್ಧೆ ನಾರಾಯಣ ದೇವಿ ಅವರ ಕತ್ತು ಹಿಸುಕಿ ಸಾಯಿಸಲಾಗಿದೆ. 10 ದೇಹಗಳು ಛಾವಣಿಗೆ ನೇತು ಬಿದ್ದಿದ್ದರೆ ಆ ವೃದ್ಧೆಯ ದೇಹ ಮಾತ್ರ ಪಕ್ಕದ ರೂಮಿನಲ್ಲಿ ನೆಲದ ಮೇಲೆ ಬಿದ್ದಿತ್ತು. ಸಾಯುವ ಮುಂಚೆ ಒದ್ದಾಡಿರುವುದು ಬಿದ್ದಿರುವ ರೀತಿಯಿಂದಲೇ ಗೊತ್ತಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆ ವೃದ್ಧೆಗೆ ಟೇಬಲ್ ಏರಲು ಸಾಧ್ಯವಿಲ್ಲದ ಕಾರಣ ಆಕೆಯ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಅನುಮಾನಿಸಲಾಗಿದೆ.

ಸತ್ತವರ ಹೆಸರು ಮತ್ತು ವಯಸ್ಸು
ಕುಟುಂಬದ ಹಿರಿಯ ಸದಸ್ಯೆ ನಾರಾಯಣ ದೇವಿ (77), ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಇಷ್ಟು ಜನ ನಿನ್ನೆ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಡೆಲಿವರಿ ಬಾಯ್ ಬಿಟ್ಟು ಯಾರೂ ಬಂದಿಲ್ಲ ಮನೆಗೆ
ಶನಿವಾರ ರಾತ್ರಿ ಎಂದರೆ ಆ ಕುಟುಂಬ ಆತ್ಮಹತ್ಯೆ (?) ಮಾಡಿಕೊಂಡಿರಬಹುದಾದ ದಿನ ರಾತ್ರಿ ಸುಮಾರು 10:30ಕ್ಕೆ ಫೂಡ್ ಡೆಲಿಯರಿ ಹುಡುಗನೊಬ್ಬ ಅವರ ಮನೆಗೆ ಬಂದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಅದಾದ ನಂತರ ಬೇರೆ ಯಾರೂ ಆ ಮನೆಗೆ ಹೋಗಿಲ್ಲ ಅಥವಾ ಹೊರಗೆ ಬಂದಿಲ್ಲ.

ದೈವ ಭಕ್ತರೇ ಆದರೆ ಅಂಧ ಭಕ್ತರಲ್ಲ
ಆ ಕುಟುಂಬ ದೈವ ಭಕ್ತರೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಾಯತ್ರಿ ಮಂತ್ರ ಪಠಣ ಸೇರಿದಂತೆ ಸರಳ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದರು ಆದರೆ ಅಂಧ ಭಕ್ತರಾಗಿರಲಿಲ್ಲ ಎನ್ನುತ್ತಾರೆ ನೆರೆ-ಹೊರೆಯವರು. ಯಾವುದಾದರೂ ಬಾಬಾ ಅಥವಾ ಮಠಗಳ ಸಾಂಗತ್ಯ ಕುಟುಂಬಕ್ಕಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.












Click it and Unblock the Notifications