ಛತ್ತೀಸ್ ಘಡ ಎನ್ಕೌಂಟರ್: ಪೊಲೀಸರ ಸಾವಿನ ಸಂಖ್ಯೆ 26ಕ್ಕೆ ಏರಿಕೆ
ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಸಿಆರ್ಪಿಎಫ್ ಜವಾನರು ಮತ್ತು ನಕ್ಸಲರು ನಡುವೆ ಇಂದು ಬೆಳಿಗ್ಗೆ ಎನ್ಕೌಂಟರ್ ಆರಂಭವಾಗಿತ್ತು. ಇದರಲ್ಲಿ 11 ಸಿಆರ್ಪಿಎಫ್ ಪೊಲೀಸರು ಜೀವ ಕಳೆದುಕೊಂಡಿದ್ದಾರೆ.
ಛತ್ತೀಸ್ ಘಡ, ಏಪ್ರಿಲ್ 24: ಛತ್ತೀಸ್ ಘಡದಲ್ಲಿ ನಕ್ಸಲರ ಜತೆ ನಡೆದ ಭೀಕರ ಸಂಘರ್ಷದಲ್ಲಿ ಸಾವಿಗೀಡಾದ ಸಿಆರ್ಪಿಎಫ್ ಪೊಲೀಸರ ಸಂಖ್ಯೆ ಏರುತ್ತಿದ್ದು 26ಕ್ಕೆ ತಲುಪಿದೆ. ಇನ್ನೂ ಹಲವಾರು ಜನ ಜೀವನ್ಮರಣ ಹೋರಾಟದಲ್ಲಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇಲ್ಲಿನ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಸಿಆರ್ಪಿಎಫ್ ಜವಾನರು ಮತ್ತು ನಕ್ಸಲರು ನಡುವೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಎನ್ಕೌಂಟರ್ ಆರಂಭವಾಗಿತ್ತು. ಇದರಲ್ಲಿ 26 ಸಿಆರ್ಪಿಎಫ್ ಪೊಲೀಸರು ಸಾವನ್ನಪ್ಪಿದ್ದಾರೆ. ಹಲವಾರು ಪೊಲೀಸರು ಗಂಭೀರ ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.[ಭಯೋತ್ಪಾದಕರ ಗುಂಡಿಗೆ ಕಾಶ್ಮೀರದಲ್ಲಿ ಪಿಡಿಪಿ ನಾಯಕ ಘನಿ ಬಲಿ]
ಇನ್ನು ಘಟನೆಯಲ್ಲಿ 7 ಜನ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಎನ್ಕೌಂಟರ್ ನಡೆದ ಸ್ಥಳಕ್ಕೆ ಐಜಿಪಿ ವಿವೇಕಾನಂದ ಸಿನ್ಹಾ ಹಾಗೂ ಡಿಐಜಿ ಸುಂದರ್ ರಾಜ್ ಭೇಟಿ ನೀಡಲಿದ್ದು ಈಗಾಗಲೇ ಅತ್ತ ಪ್ರಯಾಣಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಇದೇ ಭಾಗದಲ್ಲಿ ನಕ್ಸಲರ ಜತೆ ಸಂಘರ್ಷ ನಡೆದಿತ್ತು. ಇದರಲ್ಲಿ 24 ಪೊಲೀಸರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.[ಆಧಾರ್ ಬಳಕೆ ಹಾಗೂ ಅದರ ಸುತ್ತ ಇರುವ ವಿವಾದಗಳು...]
ಎಲ್ಲಿ ನಡೆಯಿತು?
ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಮತ್ತು ಚಿಂತಾಗುಫಾ ಸ್ಥಳದ ಮಧ್ಯದಲ್ಲಿ ಈ ಎನ್ಕೌಂಟರ್ ನಡೆದಿದೆ. ಇದು ನಕ್ಸರ ಹಿಡಿತ ಇರುವ ಪ್ರದೇಶವಾಗಿದ್ದು ಇಲ್ಲಿ ಹಲವು ಬಾರಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಸಂಘರ್ಷಗಳು ನಡೆದಿವೆ. ಸಾವನ್ನಪ್ಪಿದ್ದವರು ಸಿಆರ್ಪಿಎಫ್ ನ 74ನೇ ಬೆಟಾಲಿಯನ್ನಿಗೆ ಸೇರಿದವರಾಗಿದ್ದಾರೆ.
ನಡೆದಿದ್ದು ಹೇಗೆ?
ಆರಂಭದಲ್ಲಿ ನಕ್ಸಲರು ಸಿಆರ್'ಪಿಎಫ್ ಪೊಲೀಸರ ಚಲನ ವಲನ ಬೆನ್ನಟ್ಟಲು ಇಲ್ಲಿನ ಗ್ರಾಮಸ್ಥರನ್ನು ಕಳುಹಿಸಿದ್ದರು. ಇದಾದ ನಂತರ ಸುಮಾರು 150 ಜನರಿದ್ದ ಪೊಲೀಸರ ಮೇಲೆ ಮರೆಯಲ್ಲಿ ನಿಂತು 300ಕ್ಕೂ ಹೆಚ್ಚಿದ್ದ ನಕ್ಸಲರು ಗುಂಡಿನ ಮಳೆಗರೆದರು ಎಂಬುದಾಗಿ ಎನ್ಕೌಂಟರಿನಲ್ಲಿ ಪಾಲ್ಗೊಂಡ ಸಿಆರ್'ಪಿಎಫ್ ಪೊಲೀಸ್ ಶೇರ್ ಮೊಹಮ್ಮದ್ ಹೇಳಿದ್ದಾರೆ.
ಘಟನೆಯಲ್ಲಿ ಹಲವು ನಕ್ಸಲರೂ ಸತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಎನ್ಕೌಂಟರಿನಲ್ಲಿ ಪೊಲೀಸರನ್ನು ಹೊಡೆದುರುಳಿಸಿರುವ ನಕ್ಸಲರು ಅವರ ಶಸ್ತ್ರಾಸ್ತ್ರಗಳನ್ನೂ ಹೊತ್ತೊಯ್ದಿದ್ದಾರೆ.
|
ಸದ್ಯದಲ್ಲೇ ತುರ್ತು ಸಭೆ - ಮುಖ್ಯಮಂತ್ರಿ
ಘಟನೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಲಿದ್ದೇನೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇನೆ ಎಂದು ಛತ್ತಿಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ಜತೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜತೆಗೂ ಈ ಸಂಬಂಧ ಚರ್ಚೆ ನಡೆಸುವುದಾಗಿ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಹಲವು ಕಾರ್ಯಕ್ರಮಗಳಿದ್ದರೂ ಎಲ್ಲವನ್ನೂ ರದ್ದುಗೊಳಿಸಿ ಅವರು ರಾಯಪುರದತ್ತ ತೆರಳಿದ್ದಾರೆ. ರಾಯಪುರದಲ್ಲಿ ಈ ತುರ್ತು ಸಭೆ ನಡೆಯಲಿದೆ, ಗೃಹ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
|
ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ – ಗುಡುಗಿದ ಪ್ರಧಾನಿ
ಸಿಆರ್'ಪಿಎಫ್ ಪೊಲೀಸರ ಮೇಲೆ ದಾಳಿ ಮಾಡಿದ್ದು ಒಂದು ಹೇಡಿ ಕೃತ್ಯ. ಇದನ್ನು ಕಟುವಾಗಿ ಖಂಡಿಸುತ್ತೇವೆ. ದಾಳಿಯಲ್ಲಿ ಹುತಾತ್ಮರಾದವರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ನರೇಂದ್ರ ಮೋದಿ ನಕ್ಸಲರ ವಿರುದ್ಧ ಗುಡುಗಿದ್ದಾರೆ.
ಸಾವಿಗೀಡಾದವರ ಕುಟುಂಬಕ್ಕೆ ಸಾಂತ್ವನಗಳು. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
|
ತುಂಬಾ ನೋವಾಗಿದೆ -ರಾಜನಾಥ್
ಸುಕ್ಮಾದಲ್ಲಿ ಸಿಆರ್'ಪಿಎಫ್ ಪೊಲೀಸರ ಸಾವಿನಿಂದ ತುಂಬಾ ನೋವಾಗಿದೆ. ಗುತಾತ್ಮರಾದವರಿಗೆ ನನ್ನ ನಮನಗಳನ್ನು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದೇನೆ. ಈ ಕುರಿತು ಗೃಹ ಇಲಾಖೆ ರಾಜ್ಯ ಸಚಿವರಾದ ಹನ್ಸರಾಜ್ ಅಹಿರ್ ಜತೆ ಮಾತನಾಡಿದ್ದೇನೆ. ಅವರು ಛತ್ತೀಸ್ ಘಡಕ್ಕೆ ತೆರಳಲಿದ್ದಾರೆ ಎಂದು ರಾಜನಾಥ್ ಮಾಹಿತಿ ನೀಡಿದ್ದಾರೆ.
|
ಪೊಲೀಸರ ತ್ಯಾಗಕ್ಕೆ ಸೆಲ್ಯೂಟ್
ಸುಕ್ಮಾ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದ ಸಿಆರ್.ಪಿಎಫ್ ಪೊಲೀಸರ ಕುಟುಂಬಸ್ಥರಿಗೆ ನನ್ನ ಸಾಂತ್ವನಗಳು. ನಮ್ಮ ಪೊಲೀಸರ ತ್ಯಾಗಕ್ಕೆ ಸೆಲ್ಯುಟ್ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
|
ಖಂಡಿಸುತ್ತೇನೆ - ರಾಷ್ಟ್ರಪತಿ
ದಾಳಿಯನ್ನು ಕಟುವಾಗಿ ಖಂಡಿಸುತ್ತೇನೆ. ಕುಟುಂಬಸ್ಥರಿಗೆ ನನ್ನ ಸಾಂತ್ವನಗಳು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ. ಗಾಯಗೊಂಡವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.