'ತೆಲಂಗಾಣದ ಬಗ್ಗೆ ಸೊಲ್ಲೆತ್ತಿದರೆ ಹೂತುಬಿಡ್ತೀನಿ'
ಹೈದರಾಬಾದ್,ಸೆ. 10: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮಿತಿ ಮೀರಿ ಮಾತನಾಡಿದ್ದಾರೆ. ಹೊಸದಾಗಿ ಉದಯವಾಗಿರುವ ತೆಲಂಗಾಣ ರಾಜ್ಯದ ಬಗ್ಗೆ ಅವಹೇಳನಕಾರಿ ಲೇಖನ ಬರೆದರೆ ಮಾಧ್ಯಮಗಳನ್ನು ಹೂತು ಬಿಡುತ್ತೇನೆ ಎಂದು ಆರ್ಭಟಿಸಿದ್ದಾರೆ. ಕೆಸಿಆರ್ ಹೇಳಿಕೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಗಿದೆ.
ತೆಲಂಗಾಣದ ಗೌರವಕ್ಕೆ ಧಕ್ಕೆ ತರುವಂತೆ ಕೆಲ ಮಾಧ್ಯಮದವರು ವರ್ತಿಸುತ್ತಿದ್ದಾರೆ ಅಂಥವರನ್ನು ಭೂಮಿಯಿಂದ ಹತ್ತು ಅಡಿ ಆಳದೊಳಗೆ ಹೂತು ಹಾಕುತ್ತೇವೆ. ದೆಹಲಿಯಲ್ಲಿ ಎಲ್ಲಾ ಸಣ್ಣ ವಿಚಾರವನ್ನೂ ವಿವಾದ ಮಾಡುತ್ತೀರಿ. ಆದರೆ, ಇಲ್ಲಿ ಯಾವುದೇ ರೀತಿಯ ತೆಲಂಗಾಣ ವಿರೋಧಿ ನಡೆಯನ್ನು ನಾವು ಸಹಿಸುವುದಿಲ್ಲ ಎಂದು ಕೆ ಚಂದ್ರಶೇಖರ್ ಅವರು ಮಂಗಳವಾರ ರಾತ್ರಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.[ತೆಲಂಗಾಣ ಉದಯ, ಸಿಂಗಾರಗೊಂಡ ಹೈದರಾಬಾದ್]

ಕೆಸಿಆರ್ ತೆಲಂಗಾಣದ ಸಂಸ್ಕೃತಿ ಹಾಗೂ ವ್ಯಕ್ತಿಯನ್ನು ಕೀಳಾಗಿ ಬಿಂಬಿಸುವ ಮಾಧ್ಯಮಕ್ಕೆ ರಾಜ್ಯದಲ್ಲಿ ಸ್ಥಾನವಿಲ್ಲ ಎಂದಿದ್ದಾರೆ. ಕೇವಲ ಮಾಧ್ಯಮಕ್ಕಾಗಿ ರಾಜ್ಯ ರಚನೆಯಾಗಿಲ್ಲ, ಸಾವಿರಾಗು ಜನರ ಪರಿಶ್ರಮದಿಂದ ರಾಜ್ಯ ಉದಯಿಸಿದೆ. ಇಂತಹ ರಾಜ್ಯವನ್ನು ಮಾಧ್ಯಮಗಳು ಮನಬಂದಂತೆ ಅವಹೇಳನಕಾರಿಯಾಗಿ ಚಿತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ಜೂನ್.16ರಂದು ತೆಲಂಗಾಣ ಅಸೋಸಿಯೇಷನ್ ಆಫ್ ಸಿಸ್ಟಮ್ ಆಪರೇಟರ್ಸ್(ಕೇಬಲ್ ಆಪರೇಟರ್ಸ್) ಗಳು ಎಬಿಎನ್ ಆಂಧ್ರಜ್ಯೋತಿ ಹಾಗೂ ಟಿವಿ 9 ತೆಲುಗು ಚಾನೆಲ್ ಗಳ ಪ್ರಸಾರವನ್ನು ನಿಲ್ಲಿಸಿದ್ದರು. ಇದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಕೆಸಿಆರ್, ಚಾನೆಲ್ ಗಳು ಬುದ್ಧಿ ಕಲಿಯದಿದ್ದರೆ, ಅವರಿಗೆ ಇದೇ ರೀತಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದಿದ್ದಾರೆ.[ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]
ಟಿವಿ ಚಾನೆಲ್ ಗಳ ನಿಷೇಧ ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಸುಮಾರು 25ಕ್ಕೂ ಅಧಿಕ ಪತ್ರಕರ್ತರನ್ನು ಬಂಧಿಸಿದ ಸುಬೇದಾರಿ ಠಾಣೆ ಪೊಲೀಸರು ನಂತರ ಎಲ್ಲರನ್ನು ಬಿಡುಗಡೆ ಮಾಡಿದರು. ತೆಲಂಗಾಣ ವಿರುದ್ಧ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಟಿವಿ 9 ಹಾಗೂ ಇತರೆ ಚಾನೆಲ್ ಗಳ ಮೇಲೆ ನಿರ್ಬಂಧ ಹೇರುವಂತೆ ಇತ್ತೀಚೆಗೆ ಅಸೆಂಬ್ಲಿಯಲ್ಲಿ ನಿರ್ಣಯ ಮಂಡನೆ ಮಾಡಲಾಗಿದೆ.












Click it and Unblock the Notifications