ತೆಲಂಗಾಣ ಚುನಾವಣೆ: ಅಮಿತ್ ಶಾಗೆ ಭರ್ಜರಿ ಆಫರ್ ನೀಡಿದ ಓವೈಸಿ
Recommended Video

ಹೈದರಾಬಾದ್, ನ 29: ತೆಲಂಗಾಣ ಅಸೆಂಬ್ಲಿ ಚುನಾವಣೆಗೆ ಪ್ರಚಾರದ ಭರಾಟೆ ತಾರಕಕ್ಕೇರಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ, ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಭರ್ಜರಿ ಆಫರ್ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ, ಬಿಜೆಪಿ ಮುಖಂಡರನ್ನು ಕೆಣಕುವ ಹೇಳಿಕೆ ನೀಡುತ್ತಿರುವ ಓವೈಸಿ, ತೆಲಂಗಾಣದ ಹಂಗಾಮಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ನನ್ನದೊಂದು ಮನವಿ. ಅವರು, ಅಮಿತ್ ಶಾ ಅವರಿಗೆ ಕಲ್ಯಾಣಿ (ಬೀಫ್) ಬಿರಿಯಾನಿ ಕಳುಹಿಸಿ ಕೊಡಲಿ ಎಂದು ಓವೈಸಿ ಕೆಣಕಿದ್ದಾರೆ.
ಎಂಐಎಂ ಕಾರ್ಯಕರ್ತರಿಗೆ TRS ಮುಖಂಡರು ಬಿರಿಯಾನಿ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಅಮಿತ್ ಶಾ ನೀಡಿದ್ದ ಹೇಳಿಕೆಗೆ, ಓವೈಸಿ ನೀಡಿದ ತಿರುಗೇಟು ಇದಾಗಿದೆ.

ಕೂಕಟಪಲ್ಲಿಯಲ್ಲಿ ಗುರುವಾರ (ನ 29) ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಓವೈಸಿ, ನಾನು ಈಗಿಂದೀಗಲೇ ಕೆಸಿಆರ್ ಅವರಿಗೆ ಫೋನ್ ಮಾಡಿ, ಬೀಫ್ ಬಿರಿಯಾನಿ ಶಾಗೆ ಕಳುಹಿಸಿ ಕೊಡುವಂತೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಹೈದರಾಬಾದ್ ಬಿರಿಯಾನಿ ಹೇಗೆ ಹೆಸರುವಾಸಿಯೋ, ಹಾಗೆಯೇ, ದನ ಅಥವಾ ಕೋಣದ ಮಾಂಸದಿಂದ ತಯಾರು ಮಾಡುವ ಕಲ್ಯಾಣಿ ಬಿರಿಯಾನಿ ಕೂಡಾ ತೆಲಂಗಾಣದಲ್ಲಿ ಅಷ್ಟೇ ಹೆಸರುವಾಸಿ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮಗಳ ಮದುವೆಗೆ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋಗಿದ್ದಾಗ, ಅಲ್ಲಿ ಅವರ ಊಟೋಪಚಾರ ಯಾವ ರೀತಿ ಇತ್ತು ಎಂದು ಈ ಹಿಂದೆ, ಓವೈಸಿ, ಬಿಜೆಪಿಯನ್ನು ಕೆಣಕ್ಕಿದ್ದರು.












Click it and Unblock the Notifications