ಸತ್ಯಂ ಹಗರಣ: ರಾಮಲಿಂಗ ರಾಜುಗೆ 7 ವರ್ಷ ಜೈಲು ಶಿಕ್ಷೆ
ಹೈದರಾಬಾದ್, ಏ.9: ದೇಶದ ಅತಿದೊಡ್ಡ ಕಾರ್ಪೊರೇಟ್ ವಂಚನೆ ಪ್ರಕರಣ ಎನಿಸಿರುವ ಸತ್ಯಂ ಕಂಪ್ಯೂಟರ್ಸ್ ಹಗರಣದ ತೀರ್ಪು ಹೊರಬಿದ್ದಿದೆ. ಸತ್ಯಂ ಸಂಸ್ಥೆ ಸ್ಥಾಪಕ ರಾಮಲಿಂಗ ರಾಜು ಸೇರಿ 10 ಜನ ಆರೋಪಿಗಳನ್ನು ಅಪರಾಧಿಗಳು ಎಂದು ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಬೆಳಗ್ಗೆ ಘೋಷಿಸಿದೆ.
ಪ್ರಮುಖ ಆರೋಪಿ ರಾಮಲಿಂಗ ರಾಜು ಹಾಗೂ ಇತರೆ 9 ಆರೋಪಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಎಲ್ಲರಿಗೂ 25 ಲಕ್ಷ ರು ದಂಡ ವಿಧಿಸಲಾಗಿದೆ.[ಸತ್ಯಂ ಹಗರಣ: 2009ರಿಂದ 2015 ರ ತನಕ ಟೈಮ್ ಲೈನ್]
ಸತ್ಯ ಹಗರಣದ ಐದೂವರೆ ವರ್ಷಗಳ ನಂತರ ತನಿಖೆ ಮುಕ್ತಾಯ ಕಂಡಿತ್ತು. ಮಾ.9ರಂದು ಪ್ರಕರಣದ ವಿಚಾರಣೆ ನಡೆಸಿದ ಜಡ್ಜ್ ಬಿವಿಎಲ್ ಎನ್ ಚಕ್ರವರ್ತಿ ಅವರು ಏ.9ರಂದು ತೀರ್ಪು ಪ್ರಕಟಿಸುತ್ತೇನೆ. ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡುವುದಿಲ್ಲ ಎಂದಿದ್ದರು. ಅದರಂತೆ ಏ.9ರಂದು ಜಡ್ಜ್ ಚಕ್ರವರ್ತಿ ಅವರು ತೀರ್ಪು ಪ್ರಕಟಿಸಿ, ರಾಜು ಸೇರಿದಂತೆ ಎಲ್ಲಾ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿದ್ದಾರೆ.

ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗರಾಜು ಹಾಗೂ ಅವರ ಸೋದರ ರಾಮರಾಜು ಸೇರಿದಂತೆ ಎಲ್ಲಾ ಆರೋಪಿಗಳು ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದು ಚಂಚಲಗೂಡ ಜೈಲಿನಿಂದ ಹೊರ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.[ಸೆಬಿಯಿಂದ 'ಸತ್ಯಂ' ರಾಜುಗೆ 14 ವರ್ಷ ನಿಷೇಧ]
2009ರಲ್ಲಿ ಸೆಬಿಗೆ ರಾಮಲಿಂಗರಾಜು ಕಳಿಸಿದ್ದ ಇಮೇಲ್ ನಿಂದಾಗಿ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.ನಂತರ ಹೂಡಿಕೆದಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಸರ್ಕಾರ ಕಂಪನಿಯನ್ನು ಹರಾಜು ಹಾಕಿತ್ತು. ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯನ್ನು ಟೆಕ್ ಮಹೀಂದ್ರಾ ಖರೀದಿಸಿತ್ತು.
ಇತ್ತೀಚೆಗೆ ರಾಮಲಿಂಗರಾಜು ಹಾಗೂ ಇತರೆ 4 ಜನರಿಗೆ ಷೇರು ಮಾರುಕಟ್ಟೆಯಿಂದ 14 ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಸುಮಾರು 12,318 ಕೋಟಿ ರುಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಸೆಬಿ ಹೇಳಿದ್ದನ್ನು ನೆನಪಿಸಿಕೊಳ್ಳಿ.(ಒನ್ ಇಂಡಿಯಾ ಸುದ್ದಿ)












Click it and Unblock the Notifications