ರಾಮ್ ಚರಣ್ ಟ್ರೂ ಜೆಟ್ ದೂರು ಪಟ್ಟಿಯಲ್ಲಿ ಟಾಪ್!
ಹೈದರಾಬಾದ್, ಅ.10: ನಟ ಕಮ್ ರಾಜಕಾರಣಿ ಚಿರಂಜೀವಿ ಅವರ ಪುತ್ರ ನಟ ರಾಮ್ ಚರಣ್ ತೇಜ ಹೊಸ ಸಾಹಸಕ್ಕೆ ಆರಂಭದಲ್ಲೆ ತೊಡಕು ಉಂಟಾಗಿದೆ. ವಿಮಾನಯಾನ ಕ್ಷೇತ್ರಕ್ಕೆ ಜಿಗಿದ ಮೂರು ತಿಂಗಳಲ್ಲೇ 'ಬ್ರೂಸ್ ಲೀ' ಯ ಟ್ರೂಜೆಟ್ ವಿಮಾನ ಸಂಸ್ಥೆ ನೂರಾರು ದೂರುಗಳನ್ನು ಎದುರಿಸಿ ಹೈರಾಣಾಗಿದೆ.
ಕಡಿಮೆ ಬಜೆಟ್ ವಿಮಾನಯಾನವನ್ನು ಸಾಕಾರಗೊಳಿಸಿದ ಟರ್ಬೋ ಮೆಗಾ ಏರ್ ವೇಸ್ ಪ್ರೈ ಲಿಮಿಟೆಡ್ ನ ಭಾಗವಾಗಿರುವ ಟ್ರೂಜೆಟ್ ಸಂಸ್ಥೆಗೆ ಪ್ರಯಾಣಿಕರನ್ನು ತೃಪ್ತಿ ಪಡಿಸುವಲ್ಲಿ ವಿಫಲವಾಗಿರುವ ಸುದ್ದಿ ಬಂದಿದೆ.
ಕಳೆದ ವಾರ ಔರಂಗಾಬಾದ್-ಹೈದರಾಬಾದ್-ತಿರುಪತಿ ಮಾರ್ಗದ ಟ್ರೂಜೆಟ್ 2ಟಿ 106 ವಿಮಾನ ಕೊನೆ ಗಳಿಗೆಯಲ್ಲಿ ಕ್ಯಾನ್ಸಲ್ ಆಗಿತ್ತು. ಇದರಿಂದ ಜಿಎಂಆರ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ ಎದುರಿಸಬೇಕಾಯಿತು.[ಚಿರಂಜೀವಿ ಪುತ್ರನ ಹೊಸ ಸಾಹಸ, ಗಗನದಲ್ಲಿ ಹಾರಾಟ]

ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದ ವರದಿ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಏರ್ ಪೆಗಸಾಸ್ ಹಾಗೂ ಟ್ರೂಜೆಟ್ ವಿಮಾನಯಾನ ಸಂಸ್ಥೆಗಳ ವಿರುದ್ಧವೇ ಅತಿ ಹೆಚ್ಚು ದೂರುಗಳು ಕೇಳಿ ಬಂದಿವೆ. ಶೇ 5ಕ್ಕಿಂತ ಅಧಿಕ ಪ್ರಯಾಣ ರದ್ದು ಪಟ್ಟಿಯಲ್ಲಿ ಟ್ರೂಜೆಟ್ ಮುಂದಿದೆ.
ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರೂಜೆಟ್, ಪ್ರತಿಕೂಲ ಹವಾಮಾನದ ಹಿನ್ನಲೆಯಲ್ಲಿ ವಿಮಾನ ಹಾರಾಟ ಸಾಧ್ಯವಾಗಲಿಲ್ಲ. ತಕ್ಷಣಕ್ಕೆ ಬೇರೆ ವಿಮಾನವನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಪ್ರತಿಭಟನಾ ನಿರತರನ್ನು ಪಾರ್ಕಿಂಗ್ ಲಾಟ್ ನಿಂದ ವಿಮಾನ ನಿಲ್ದಾಣದೊಳಗೆ ಕರೆ ತರಲು ಸಿಐಎಸ್ ಎಫ್ ಯೋಧರನ್ನು ಕರೆಸಿಕೊಳ್ಳಬೇಕಾಯಿತು ಎಂದಿದೆ.
ಅಗ್ಗದ ದರದಲ್ಲಿ ವಿಮಾನ ಏರಿ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡುವ ಯೋಜನೆ ಹಾಕಿಕೊಂಡಿದ್ದ ಭಕ್ತಾದಿಗಳಿಗೆ ಸಹಜವಾಗೇ ಟ್ರೂಜೆಟ್ ವಿರುದ್ಧ ಸಿಟ್ಟು ಬಂದಿದೆ.,
ಟ್ರೂಜೆಟ್ ವಿಮಾನ ಸದ್ಯಕ್ಕೆ ಎಟಿಅರ್ 72-500 ಏರ್ ಕ್ರಾಫ್ಟ್ ಗಳನ್ನು ಹೊಂದಿದೆ. ಐರಿಷ್ ಮೂಲದ ಕಂಪನಿಯಿಂದ ಭೋಗ್ಯಕ್ಕೆ ಎರಡು ವಿಮಾನಗಳನ್ನು ಪಡೆದುಕೊಳ್ಳಲಾಗಿದೆ. 2016ರ ಅಂತ್ಯಕ್ಕೆ ಇನ್ನೂ 3 ವಿಮಾನಗಳನ್ನು ಖರೀದಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಹೈದರಾಬಾದ್ ಮೂಲದ ಟ್ರೂಜೆಟ್ ಏರ್ ವೇಸ್ ರಾಜಮಂಡ್ರಿ, ಬೆಂಗಳೂರು, ಚೆನ್ನೈನಲ್ಲೂ ತನ್ನ ಕಚೇರಿಯನ್ನು ಹೊಂದಿದೆ. ಸುಮಾರು 20 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯೊಂದಿಗೆ ಹೊಸ ಸಾಹಸಕ್ಕೆ ರಾಮ್ ಚರಣ್ ಹಾಗೂ ಅವರ ತಂಡ ಕೈ ಹಾಕಿದೆ.












Click it and Unblock the Notifications