ಸುಂದರ ಚಾರ್ಮಿನಾರ್ಗೆ ಮಳೆಯ ನೀರೇ ಕನ್ನಡಿ
ಹೈದರಾಬಾದ್ ಮಹಾ ನಗರವು ಶತಮಾನದ ಭೀಕರ ಮಳೆಗೆ ತತ್ತರಿಸಿದೆ.ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಆದರೆ ಈ ಭೀಕರತೆ ನಡುವೆಯೂ ಜಗದ್ವಿಖ್ಯಾತ ಚಾರ್ ಮಿನಾರ್ ಎಲ್ಲರ ಗಮನ ಸೆಳೆಯುತ್ತಿದೆ. ಚಾರ್ ಮಿನಾರ್ ಸುತ್ತ ನೀರು ತುಂಬಿಕೊಂಡಿರುವಾಗ ಛಾಯಾಗ್ರಾಹಕರೊಬ್ಬರು ತೆಗೆದ ಪ್ರತಿಬಿಂಬದ ಚಿತ್ರವು ಈಗ ಎಲ್ಲರ ಗಮನ ಸೆಳೆದಿದೆ.
ಪ್ರವಾಹದಂಥಾ ಮಳೆಗೆ ಸಿಲುಕಿ ತೆಲಂಗಾಣದಲ್ಲಿ 30 ಮಂದಿ ಸಾವು
ತಮಿಳು, ತೆಲುಗು, ಹಿಂದಿ ಚಿತ್ರ ರಂಗದ ಸಾಕಷ್ಟು ರೊಮ್ಯಾಂಟಿಕ್ ಸೀನ್ಗಳು ಈ ಚಾರ್ ಮಿನಾರ್ ಮುಂದೆ ಚಿತ್ರೀಕರಣಗೊಂಡಿವೆ. ಆದರೆ ಈಗ ಹೈದರಾಬಾದ್ ರೋಧನೆಯಲ್ಲಿರುವಾಗ ಚಾರ್ಮಿನಾರ್ ಮತ್ತೆ ಮಿನುಗುತ್ತಿದೆ. ನಿಂತ ನೀರೇ ಕನ್ನಡಿಯಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತೆಲಂಗಾಣದಲ್ಲಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳಲ್ಲಿ ಪ್ರವಾಹದಂಹತ ಪರಿಸ್ಥಿತಿ ಉಂಟಾಗಿದೆ ಮತ್ತು ಕೆಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.
ವರುಣನ ಆರ್ಭಟಕ್ಕೆ ಬಂಡಲಗುಡದ ಮೊಹಮ್ಮದಿಯಾ ಬೆಟ್ಟದಲ್ಲಿ ಕಾಂಪೌಂಡ್ ಗೋಡೆಯೊಂದು ಕುಸಿದು 9 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ ಭಾರಿ ಮಳೆಯಿಂದ ಇಬ್ರಾಹಿಂಪಟ್ಟಣಂ ಪ್ರದೇಶದಲ್ಲಿ ಹಳೆಯ ಮನೆಯ ಸೀಲಿಂಗ್ ಕುಸಿದು 40 ವರ್ಷದ ಮಹಿಳೆ ಮತ್ತು ಅವರ 15 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಪ್ರದೇಶಗಳು ಜಲಾವೃತಗೊಂಡ ನಂತರ ರಾಜ್ಯ ವಿಪತ್ತು ದಳ ಮತ್ತು ಅಗ್ನಿಶಾಮಕ ಇಲಾಖೆ ಟೋಲಿ ಚೌಕಿ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ತೆಲಂಗಾಣದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡಬಾರದು ಎಂದು ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ 100 ವರ್ಷಗಳಲ್ಲಿ ಒಂದೇ ದಿನ ಸುರಿದ ಅತ್ಯಧಿಕ ಮಳೆಯಲ್ಲಿ ಹೈದರಾಬಾದ್ನ ನಿನ್ನೆ ಮಳೆ ಎರಡನೇ ಸ್ಥಾನ ಪಡೆದಿದೆ.