ಮರ್ಯಾದಾ ಹತ್ಯೆಗೆ ತಿರುವು; ಅಮೃತಾ ತಂದೆ ಆತ್ಮಹತ್ಯೆ
ಹೈದರಾಬಾದ್, ಮಾರ್ಚ್ 08 : ದೇಶಾದ್ಯಂತ ಸುದ್ದಿಯಾಗಿದ್ದ ಆಂಧ್ರಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆಗೆ ಮತ್ತೊಂದು ತಿರುವು ಸಿಕ್ಕಿದೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಅಮೃತಾ ತಂದೆ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Recommended Video
ಪ್ರಣಯ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾರುತಿ ರಾವ್ ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಹೈದರಾಬಾದ್ನ ಆರ್ಯವೈಶ್ಯ ಭವನದಲ್ಲಿ ಉಳಿದುಕೊಂಡಿದ್ದರು. ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾರುತಿರಾವ್ ಪತ್ನಿ ಎಷ್ಟು ಬಾರಿ ಕರೆ ಮಾಡಿದರೂ ಅವರು ಸ್ವೀಕಾರ ಮಾಡಿರಲಿಲ್ಲ. ಈ ಹಿನ್ನಲೆಯಲ್ಲಿ ಭವನದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸಿಬ್ಭಂದಿಗಳು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಸಿಬ್ಬಂದಿಗಳು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾರುತಿ ರಾವ್ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಳಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ವಾರಂಗಲ್ ಜೈಲು ಸೇರಿದ್ದ ಮಾರುತಿ ರಾವ್ ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದರು.

2018ರಲ್ಲಿ ಹತ್ಯೆ ಮಾಡಿಸಿದ್ದರು
ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿ ಮಾರುತಿರಾವ್. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅವರು ಕೋಟಿ-ಕೋಟಿ ಆಸ್ತಿಗಳಿಸಿದ್ದರು. ಮಾರುತಿರಾವ್ ಪುತ್ರಿ ಅಮೃತಾ ದಲಿತ ಯುವಕ ಪ್ರಣಯ್ರನ್ನು ಪ್ರೀತಿಸಿ ವಿವಾಹವಾಗಿದ್ದರು.

ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದರು
2018ರ ಸೆಪ್ಟೆಂಬರ್ 15ರಂದು ಪ್ರಣಯ್ ಐದು ತಿಂಗಳ ಗರ್ಭಿಣಿಯಾಗಿದ್ದ ಅಮೃತಾ ಜೊತೆ ಆಸ್ಪತ್ರೆಗೆ ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಪ್ರಣಯ್ ಹತ್ಯೆಯಾಗಿತ್ತು. ಮಾರುತಿರಾವ್ ಸುಪಾರಿ ಕೊಟ್ಟು ಪ್ರಣಯ್ ಹತ್ಯೆ ಮಾಡಿಸಿದ್ದರು. ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.

ಮರ್ಯಾದಾ ಹತ್ಯೆ
ಪುತ್ರಿ ಅಮೃತಾ ದಲಿತ ಯುವಕನ ಜೊತೆ ವಿವಾಹವಾಗಿದ್ದರಿಂದ ಅಸಮಾಧಾನಗೊಂಡಿದ್ದ ಮಾರುತಿರಾವ್ ತಮ್ಮ ಮರ್ಯಾದೆ ಹೋಯಿತು ಎಂದು ಪ್ರಣಯ್ ಹತ್ಯೆ ಮಾಡಿಸಿದ್ದರು. ನಾಲ್ಕು ಬಾರಿ ಹತ್ಯೆಗೆ ಯತ್ನಿಸಿ 5ನೇ ಬಾರಿ ಹತ್ಯೆ ಮಾಡಲಾಗಿತ್ತು. ಬಳಿಕ ಮಾರುತಿರಾವ್ ಬಂಧನವಾಗಿತ್ತು.

ಗಂಡು ಮಗುವಿನ ತಾಯಿ
2019ರ ಫೆಬ್ರವರಿಯಲ್ಲಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪ್ರಣಯ್ ಅವರ ತಾಯಿ ಅಮೃತಾಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅಮೃತಾಗೆ ಪರಿಹಾರವನ್ನು ನೀಡಿದ್ದ ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗವನ್ನು ನೀಡಿತ್ತು.












Click it and Unblock the Notifications