TRS ಜೊತೆ ಡೀಲ್ ಓಕೆ, ಕೈ ಪಡೆ ಜೊತೆ ಜೂಟಾಟ ಏಕೆ?
ಹೈದರಾಬಾದ್, ಏಪ್ರಿಲ್ 25: ಮುಂದಿನ ವರ್ಷಾಂತ್ಯಕ್ಕೆ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ಆದರೆ, ಇದಕ್ಕೆ ಪೂರಕ ತಯಾರಿ, ಪಕ್ಷಗಳಲ್ಲಿ ಚರ್ಚೆ, ಅಭ್ಯರ್ಥಿ ಅಯ್ಕೆ, ರಾಜಕೀಯ ನಿಪುಣರ ಆಯ್ಕೆ ಎಲ್ಲವೂ ಭರ್ಜರಿಯಾಗಿ ಸಾಗಿದೆ.
ಹಾಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಮ್ಮ ರಾಜಕೀಯ ನೆಲೆಯನ್ನು ಬಲಪಡಿಸಲು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಹಾಗೂ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪಿಎಸಿ) ಯೊಂದಿಗೆ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಸಂಸ್ಥೆ ಐ ಪ್ಯಾಕ್ ಹಾಗೂ ತೆಲಂಗಾಣದ ಪಿಂಕ್ ಪಾರ್ಟಿ ಡೀಲ್ ಕುದುರಿಸಿಕೊಂಡಿವೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಸತತ ಎರಡು ದಿನಗಳ ಕಾಲ ಕಿಶೋರ್ ಅವರು ಸತತವಾಗಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆಸಿದೆ. ಈ ನಡುವೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರಶಾಂತ್ ಕಿಶೋರ್ ಯಾವುದೇ ಸುಳಿವು ಕೊಟ್ಟಿಲ್ಲ, ಈ ಬಗ್ಗೆ ಕಾಂಗ್ರೆಸ್ಸಿಗರು ಚರ್ಚೆ ನಿಲ್ಲಿಸಿಲ್ಲ.
ಟಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಟಿಆರ್ಎಸ್ ಐ-ಪಿಎಸಿಯೊಂದಿಗೆ ಕೆಲಸ ಮಾಡಲಿದೆ ಎಂದು ಸುದ್ದಿಯನ್ನು ಖಚಿತಪಡಿಸಿದ್ದಾರೆ. ಆದರೆ ಇದಕ್ಕೂ ಕಿಶೋರ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. "ಪಿಕೆ (ಕಿಶೋರ್ ಜನಪ್ರಿಯವಾಗಿ ತಿಳಿದಿರುವಂತೆ) ಸಂಸ್ಥಾಪಕರಾಗಿದ್ದಾರೆ ಆದರೆ ಅದನ್ನು ಯಾರು ನಡೆಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. PK ನಮ್ಮನ್ನು I-PAC ಗೆ ಪರಿಚಯಿಸಿದ್ದು, ಆ ಸಂಸ್ಥೆಯವರು ನಮ್ಮೊಂದಿಗೆ ಕೆಲಸ ಮಾಡಲಿದ್ದಾರೆ, "ಎಂದು ಅವರು ಹೇಳಿದರು.

ದೇಶಾದ್ಯಂತ ಅನೇಕ ಪಕ್ಷಗಳೊಂದಿಗೆ ಕೆಲಸ ಮಾಡುತ್ತಿರುವ ಐ-ಪಿಎಸಿಯಿಂದ ಕಿಶೋರ್ ತನ್ನನ್ನು ತಾನು ಬೇರ್ಪಡಿಸಿಕೊಂಡಿದ್ದಾರೆ ಎಂದು ಜ್ಯೂನಿಯರ್ ರಾವ್ ಹೇಳಿದ್ದಾರೆ. "ಇದು ಕೇವಲ PK ಅಲ್ಲ ನಾವು ಸಂವಹನ ನಡೆಸಿದ್ದೇವೆ. ನಾವು ಹಲವಾರು ಇತರರೊಂದಿಗೆ ಅನೇಕ ಪುನರಾವರ್ತನೆಗಳ ಚರ್ಚೆಗಳನ್ನು ನಡೆಸಿದ್ದೇವೆ. ಸುನೀಲ್ ಮತ್ತು ಇತರರೊಂದಿಗೆ ಮಾತನಾಡಿದೆವು. I-PAC ಅನ್ನು ನಾವು ಸಂಕುಚಿತಗೊಳಿಸಿದ್ದೇವೆ, "ಎಂದು ಅವರು ಹೇಳಿದರು.
ಪ್ರಶಾಂತ್ ಕಿಶೋರ್ ಜೊತೆ ಟಿಆರ್ಎಸ್ ಒಡನಾಟ?
2023 ರ ಅಸೆಂಬ್ಲಿ ಚುನಾವಣೆ ಅಥವಾ 2024 ರ ಲೋಕಸಭೆ ಚುನಾವಣೆಗೆ ಮಾತ್ರವೇ ಮತ್ತು ಚುನಾವಣಾ ತಂತ್ರಗಾರರೊಂದಿಗೆ ದೀರ್ಘಕಾಲ ಒಪ್ಪಂದವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಇನ್ನೂ ಹೊರ ಬಂದಿಲ್ಲ. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ನಮಗೆ ಸಿಗುವ ಎಲ್ಲಾ ಸಲಹೆಗಳನ್ನು ಸ್ವೀಕರಿಸಿ ಮುನ್ನಡೆಯುತ್ತೇವೆ ಎಂದು ಕೆಟಿ ರಾಮರಾವ್ ಹೇಳಿದರು.
ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಸುದ್ದಿ ಬಂದಿದೆ. ಇದರಿಂದ ಹಿತಾಸಕ್ತಿ ಸಂಘರ್ಷ ಉಂಟಾಗುವುದಿಲ್ಲವೇ? ಎಂಬ ಪ್ರಶ್ನೆಗೆ ರಾಮರಾವ್ ಪ್ರತಿಕ್ರಿಯಿಸಲಿಲ್ಲ, ನನಗೆ ಈ ಬಗ್ಗೆ ಏನು ಗೊತ್ತಿಲ್ಲ ಎಂದಷ್ಟೇ ಹೇಳಿದರು.

ಪ್ರಶಾಂತ್ ಕಿಶೋರ್ ಸಾಧನೆ, ಸಂಕ್ಷಿಪ್ತ ವಿವರ:
ತಮಿಳುನಾಡಿನಲ್ಲಿ ದಶಕದ ಬಳಿಕ ದ್ರಾವಿಡ ಮುನ್ನೇತ್ರ ಕಳಗಂ ಅಧಿಕಾರಕ್ಕೇರಲು ಕೂಡಾ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ನೆರವಾಗಿದೆ. ಬೆಂಗಾಳದಲ್ಲಿ ಸುಮಾರು 30ಕ್ಕೂ ಅಧಿಕ ಹಿರಿಯ ನಾಯಕರನ್ನು ತೃಣಮೂಲ ಕಾಂಗ್ರೆಸ್ ಕಳೆದುಕೊಂಡ ಅವಧಿಯಲ್ಲಿ ಮಮತಾ ಬಳಿ ಬಂದ ಪ್ರಶಾಂತ್ ಉತ್ತಮ ಫಲಿತಾಂಶ ತಂದುಕೊಟ್ಟಿದ್ದರು.
2014ರಲ್ಲಿ ಬಿಜೆಪಿ, 2015ರಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಗೆಲುವಿಗೆ ಪ್ರಶಾಂತ್ ಕಾರಣರಾಗಿದ್ದರು. ಆದರೆ, ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. 2019ರಲ್ಲಿ ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಜಗನ್ ಮೋಹನ್ ರೆಡ್ಡಿ ಗೆಲ್ಲಲು ನೆರವಾದರು. ಮೋದಿ ಗೆಲ್ಲಿಸಲು 'ಚಾಯ್ ಪೇ ಚರ್ಚಾ', ನಿತೀಶ್ ಗೆಲುವಿಗೆ 'ಸಾರಾಯಿ ಮುಕ್ತ' ಮಂತ್ರ ಜಪಿಸಿದ್ದ ಪ್ರಶಾಂತ್ ಕಿಶೋರ್, ಉತ್ತರಪ್ರದೇಶ ಜಾತಿ ಸಂಕೀರ್ಣತೆಯ ಮರ್ಮ ಅರಿಯದೆ 'ಮೇಲ್ವರ್ಗದ ಸಿಎಂ' ಎಂದು ಬ್ರಾಹ್ಮಣರಿಗೆ ಮಣೆ ಹಾಕಲು ಹೋಗಿ ಮಗಚಿ ಬಿದ್ದರು. ಶೀಲಾ ದೀಕ್ಷಿತ್ ಕರೆ ತರಲಾಯಿತು, ಕೊನೆಗೆ ಪ್ರಿಯಾಂಕಾ ಹೆಸರು ಕೇಳಿ ಬಂದಿತ್ತು. ಆಂಧ್ರದಲ್ಲಿ ಪ್ರಜಾ ಸಂಕಲ್ಪ ಪಾದಯಾತ್ರೆ, 'ರಾವಾಲಿ ಜಗನ್ ಕಾವಾಲಿ ಜಗನ್' ಎಂಬ ಘೋಷವಾಕ್ಯ ಕೋಟ್ಯಂತರ ಜನರನ್ನು ತಲುಪಿತು. ಚಂದ್ರಬಾಬು ವಿರುದ್ಧ 'ಬೈ ಬೈ ಬಾಬು' ಅಭಿಯಾನವು ಯಶಸ್ವಿಯಾಯಿತು. ನವ್ಯಾ ಆಂಧ್ರ ಯೋಜನೆಗೆ ಬೆಲೆ ಸಿಕ್ಕಿತು.. ಮುಂದಿನದ್ದು ಇತಿಹಾಸ.












Click it and Unblock the Notifications