ಜೆಎನ್ಯು ವಿವಾದ : ರಾಹುಲ್, ಕೇಜ್ರಿವಾಲ್ ವಿರುದ್ಧ ಎಫ್ಐಆರ್
ಹೈದರಾಬಾದ್, ಫೆಬ್ರವರಿ 29 : ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಕೀಲ ಜನಾರ್ದನ್ ಗೌಡ್ ಎಂಬುವವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಹೈದರಾಬಾದ್ ಕೋರ್ಟ್ 9 ಜನರ ವಿರುದ್ಧ ರಾಜದ್ರೋಹದ ಆರೋಪದಡಿ ಎಫ್ಐಆರ್ ದಾಖಲು ಮಾಡುವಂತೆ ಸೂಚಿಸಿದೆ. 'ಕೋರ್ಟ್ ಆದೇಶದ ಅನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ' ಎಂದು ಸರೂನ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಲಿಂಗಯ್ಯ ಹೇಳಿದ್ದಾರೆ. [ಜೆಎನ್ ಯು ಗಲಭೆ : ಖಾಲಿದ್ ಗೆ 5 ಪ್ರಶ್ನೆಗಳು]

ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಕಾಂಗ್ರೆಸ್ ನಾಯಕರಾದ ಆನಂದ್ ಶರ್ಮಾ, ಅಜೇಯ್ ಮಾಕೇನ್, ಸಿಪಿಐ ಮುಖಂಡ ಡಿ.ರಾಜಾ, ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ, ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ವಿರುದ್ಧ ಎಫ್ಐಆರ್ ದಾಖಲಾಗಿದೆ. [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]
ಜೆಎನ್ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ಅವರ ವಿರುದ್ಧ ದೆಹಲಿ ಪೊಲೀಸರು ರಾಜದ್ರೋಹದ ಪ್ರಕರಣ ದಾಖಲು ಮಾಡಿದ್ದರು. ಇದು ತಿಳಿದಿದ್ದರೂ ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರು ಜೆಎನ್ಯು ಕ್ಯಾಂಪಸ್ಗೆ ಭೇಟಿ ನೀಡಿ ಅವರಿಗೆ ಬೆಂಬಲ ನೀಡಿರುವುದು ರಾಜದ್ರೋಹಕ್ಕೆ ಸಮ ಎಂದು ಜನಾರ್ದನ್ ಹೈದರಾಬಾದ್ ಮೆಟ್ರೋ ಪಾಲಿಟನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.[ಅಫ್ಜಲ್ ಗುರು ಈತನ ಹೃದಯಕ್ಕೆ ಹತ್ತಿರವಾಗಿದ್ದನಂತೆ!]
ಈಗಾಗಲೇ ಬಂಧನದಲ್ಲಿರುವ ಕನ್ಹಯ್ಯ ಕುಮಾರ್ ಮತ್ತು ಜೆಎನ್ಯು ಸಂಶೋಧನಾ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಹೈದರಾಬಾದ್ನಲ್ಲಿಯೂ ಎಫ್ಐಆರ್ ದಾಖಲಾಗಿದೆ. ಮಾರ್ಚ್ 4ರಂದು ಈ ಅರ್ಜಿಯ ಮುಂದಿನ ವಿಚಾರಣೆ ಹೈದರಾಬಾದ್ ಕೋರ್ಟ್ನಲ್ಲಿ ನಡೆಯಲಿದೆ. [ಪಿಟಿಐ ಚಿತ್ರ]












Click it and Unblock the Notifications