ಹೈದರಾಬಾದ್; ಎನ್ಕೌಂಟರ್ ಅಫಿಷಿಯಲ್ ಅಕೌಂಟ್
Recommended Video
ಹೈದರಾಬಾದ್, ಡಿಸೆಂಬರ್ 6 : "ಸ್ಥಳ ಪರಿಶೀಲನೆಗೆ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದ ವೇಳೆ ಪೊಲೀಸರಿಂದಲೇ ಗನ್ ಕಿತ್ತುಕೊಂಡು ಗುಂಡು ಹಾರಿಸಲು ಆರಂಭಿಸಿದರು. ಇದರಿಂದಾಗಿ ಎನ್ಕೌಂಟರ್ ನಡೆಸಬೇಕಾಯಿತು..."
ಇದು ಸದ್ಯ ದೇಶಾದ್ಯಂತ ಚರ್ಚೆಗೆ ಒಳಗಾಗಿರುವ ಪಶುವೈದ್ಯ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್ಕೌಂಟರ್ ವಿಚಾರದಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಮಾಧ್ಯಮಗಳಿಗೆ ಶುಕ್ರವಾರ ನೀಡಿದ ಸ್ಪಷ್ಟೀಕರಣ.
ನ. 28ರಂದು ಬೆಳಕಿಗೆ ಬಂದ ತೆಲಂಗಾಣದ ಪಶು ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಎನ್ಕೌಂಟರ್ ಹಿನ್ನೆಲೆಯಲ್ಲಿ ಸುದ್ದಿ ಕೇಂದ್ರದಲ್ಲಿದೆ. ಇಂತಹದೊಂದು ಪೈಶಾಚಿಕ ಕೃತ್ಯದ ಆರೋಪಿಗಳ ಕುರಿತು ಭಾರಿ ಜನಾಕ್ರೋಶವೂ ವ್ಯಕ್ತವಾಗಿತ್ತು.
ಹೀಗಿರುವಾಗಲೇ ಪೊಲೀಸರು ಇಂದು ಮುಂಜಾನೆ ಸ್ಥಳ ಪರಿಶೀಲನೆ ನಡೆಸಲು ಆರೋಪಿಗಳನ್ನು ಕರೆದುಕೊಂಡು ಹೋದ ಸಮಯದಲ್ಲಿ ಹೊಡೆದುರುಳಿದ್ದರು. ಇದಕ್ಕೆ ಒಂದು ವರ್ಗ 'ನ್ಯಾಯ ಸಿಕ್ಕಿದ' ತೃಪ್ತಿ ವ್ಯಕ್ತಪಡಿಸಿದರೆ, ಪೊಲೀಸರೇ ಕಾನೂನು ಕೈಗೆತ್ತಿಕೊಂಡು ಬಗೆ ಟೀಕೆಗೂ ಒಳಗಾಗಿದೆ. ದೇಶದ ಎರಡು ಭಿನ್ನ ಅಭಿಪ್ರಾಯಗಳನ್ನು ತಳೆದಿದೆ.
ಈ ಹಿನ್ನೆಲೆಯಲ್ಲಿ, ಘಟನಾ ಸ್ಥಳದ ವಿವರಗಳ ಕುರಿತು ಪೊಲೀಸ್ ಆಯುಕ್ತ ವಿಶ್ವನಾಥ್ ನೀಡಿದ ವಿವರಣೆ ಮಹತ್ವ ಪಡೆದುಕೊಳ್ಳುತ್ತದೆ. ಎನ್ ಕೌಂಟರ್ ನಡೆದ ಸ್ಥಳದಲ್ಲೇ ಆಯುಕ್ತರು ಪತ್ರಿಕಾಗೋಷ್ಠಿ ನಡೆಸಿದರು.
"ಆರೋಪಿ 1 ಹಾಗೂ 4 ಘಟನಾ ಸ್ಥಳಕ್ಕೆ ಹೋಗುತ್ತಿದ್ದಂತೆ ಕಲ್ಲು ತೂರಲು ಶುರುಮಾಡಿದರು. ಈ ಸಮಯದಲ್ಲಿ ಇಬ್ಬರು ಪೊಲೀಸರಿಂದ ಗನ್ ಕಿತ್ತುಕೊಂಡು ಗುಂಡು ಹಾರಿಸಲು ಆರಂಭಿಸಿದರು. ಅವರಿಬ್ಬರನ್ನು ತಡೆಯಲು ಮುಂದಾದರೂ ಸಾಧ್ಯವಾಗಲಿಲ್ಲ. ಕೊನೆಗೆ ಗುಂಡು ಹಾರಿಸಿ ನಾಲ್ವರನ್ನು ಹತ್ಯೆ ಮಾಡಬೇಕಾಯಿತು,'' ಎಂದು ಅಧಿಕಾರಿ ಸಮಜಾಯಿಷಿ ನೀಡಿದರು.

ದೊಣ್ಣೆಯಿಂದ ಹಲ್ಲೆ ಮಾಡಿದರು
"ಪಶುವೈದ್ಯೆಯ ಮೊಬೈಲ್ ಮತ್ತು ಇತರ ವಸ್ತುಗಳನ್ನು ಆರೋಪಿಗಳು ಇಲ್ಲಿ ಬಚ್ಚಿಟ್ಟಿದ್ದರು. ಅಲ್ಲಿವೆ, ಇಲ್ಲಿವೆ ಎಂದು ನಮ್ಮ ದಾರಿ ತಪ್ಪಿಸಲು ನೋಡಿದರು. ಕೊನೆಗೆ ದೊಣ್ಣೆಯಿಂದ ನಮ್ಮ ಮೇಲೆ ಹಲ್ಲೆ ಮಾಡಿ ಗನ್ ಕಸಿದುಕೊಂಡರು, ಕಲ್ಲು ತೂರಾಟ ನಡೆಸಲು ಆರಂಭಿಸಿದರು" ಎಂದು ವಿಶ್ವನಾಥ್ ಸಜ್ಜನರ್ ಮಾಹಿತಿ ನೀಡಿದರು.

2 ಗನ್ ಕಿತ್ತುಕೊಂಡರು
"ಪ್ರಕರಣದ ಮೊದಲ ಆರೋಪಿ ಮೊಹಮ್ಮದ್ ಆರಿಫ್ ಮತ್ತು 4ನೇ ಆರೋಪಿ ಚಿಂತಕುಂಟಾ ಕೇಶವುಲು ನಮ್ಮಿಂದ ಗನ್ ಕಿತ್ತುಕೊಂಡು ಗುಂಡು ಹಾರಿಸಲು ಪ್ರಯತ್ನ ಮಾಡಿದರು. ನಾವು ಎಚ್ಚರಿಕೆ ನೀಡಿದರೂ ಅವರು ಕೇಳಲಿಲ್ಲ. ಆತ್ಮರಕ್ಷಣೆಗಾಗಿ ನಾವು ಗುಂಡು ಹಾರಿಸುವುದು ಅನಿವಾರ್ಯವಾಯಿತು" ಎಂದು ಪೊಲೀಸ್ ಆಯುಕ್ತರು ಮಾಹಿತಿ ಕೊಟ್ಟರು.

ಪೊಲೀಸ್ ಕಾನ್ಸ್ಟೇಬಲ್ಗೆ ಗಾಯ
"ಆರೋಪಿಗಳು ಗುಂಡು ಹಾರಿಸಲು ಪ್ರಯತ್ನ ನಡೆಸಿದರು, ಕಲ್ಲು ತೂರಾಟ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರು. ಗುಂಡಿನ ದಾಳಿಯಿಂದ ಎಸ್ಐ ವೆಂಕಟೇಶ್, ಕಾನ್ಸ್ಟೇಬಲ್ ಅರವಿಂದ್ ಗಾಯಗೊಂಡರು. ಆಗ ಪೊಲೀಸರು ಪ್ರತಿದಾಳಿ ಆರಂಭಿಸಿದರು. 10 ಸುತ್ತು ಗುಂಡು ಹಾರಿಸಲಾಯಿತು" ಎಂದು ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಹೇಳಿದರು.

ನಾಲ್ವರು ಆರೋಪಿಗಳ ಹತ್ಯೆ
ನವೆಂಬರ್ 27ರಂದು ರಾತ್ರಿ ಪಶುವೈದ್ಯೆಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಡಲು ಪ್ರಯತ್ನ ನಡೆಸಿದ ಆರೋಪಿಗಳು ಶುಕ್ರವಾರ ಮುಂಜಾನೆ ಪೊಲೀಸ್ ಎನ್ ಕೌಂಟರ್ನಲ್ಲಿ ಹತ್ಯೆಯಾಗಿದ್ದರು.












Click it and Unblock the Notifications