ಜಿಎಚ್ಎಂಸಿ; ಬಿಜೆಪಿ ಅಬ್ಬರದ ಪ್ರಚಾರ ಮತವಾಗಲಿಲ್ಲ!
ಹೈದರಾಬಾದ್, ಡಿಸೆಂಬರ್ 04: ಅಬ್ಬರದ ಪ್ರಚಾರ, ಘಟಾನುಘಟಿ ನಾಯಕರ ಭೇಟಿ, ಹೈದರಾಬಾದ್ ಹೆಸರು ಬದಲಾವಣೆ, ಟಿಆರ್ಎಸ್ ಪಕ್ಷದ ವಿರುದ್ಧ ಬಿಜೆಪಿ ಮಾಡಿದ ಆರೋಪ ಜಿಎಚ್ಎಂಸಿ ಚುನಾವಣೆ ಕಾವನ್ನು ಹೆಚ್ಚಿಸಿತ್ತು. ಆದರೆ, ಅವು ಮತವಾಗಿ ಪರಿವರ್ತನೆಯಾಗಿಲ್ಲ.
ಶುಕ್ರವಾರ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಚುನಾವಣೆ ಮತ ಎಣಿಕೆ ನಡೆಯುತ್ತಿದೆ. 150 ಸ್ಥಾನಗಳ ಪೈಕಿ ಬಿಜೆಪಿ 31 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಟಿಆರ್ಎಸ್ 64, ಓವೈಸಿ ಪಕ್ಷ 34ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

150 ವಾರ್ಡ್ಗಳಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದೆ. ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಸಂಜೆಯ ವೇಳೆಗೆ ಸ್ಪಷ್ಟ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ. ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆದಿತ್ತು, ಈಗ ಟಿಆರ್ಎಸ್ ಮುಂದಿದೆ.
ಜಿಎಚ್ಎಂಸಿ ಚುನಾವಣೆ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ಚುನಾವಣೆಯನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಬಿಜೆಪಿ. ಪಕ್ಷ ನಡೆಸಿದ ಅಬ್ಬರದ ಪ್ರಚಾರ ನಿರೀಕ್ಷಿತ ಫಲಕೊಡಲಿಲ್ಲ ಎಂಬುದು ಫಲಿತಾಂಶದಲ್ಲಿ ತಿಳಿಯುತ್ತಿದೆ.
ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪಕ್ಷದ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ವಿವಿಧ ಸಂಸದರು, ಕೇಂದ್ರ ಸಚಿವರು ಹೈದರಾಬಾದ್ನಲ್ಲಿ ಪ್ರಚಾರ ಮಾಡಿದ್ದರು.
ಹೈದರಾಬಾದ್ ಹೆಸರನ್ನು 'ಭಾಗ್ಯ ನಗರ' ಎಂದು ಬದಲಾವಣೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಜನರು ಸಹ ಇದಕ್ಕೆ ಬೆಂಬಲ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಜಿಎಚ್ಎಂಸಿ ಚುನಾವಣೆಯಲ್ಲಿ ಶೇ 46.55ರಷ್ಟು ಮತದಾನವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಮತದಾನದ ಪ್ರಮಾಣದ ಮೇಲೆ ಅನುಮಾನ ವ್ಯಕ್ತಪಡಿಸಿದ್ದವು. ಸಂಜೆ 5 ರಿಂದ 6 ಗಂಟೆ ನಡುವೆ ಹೆಚ್ಚಿನ ಮತದಾನ ನಡೆದಿದೆ ಎಂಬುದು ಅನುಮಾನಕ್ಕೆ ಕಾರಣವಾಗಿತ್ತು.
ಟಿಆರ್ಎಸ್ ಪಕ್ಷ ಶುಕ್ರವಾರ ಮತ ಎಣಿಕೆ ಆರಂಭವಾದಾಗಲೇ 100 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿತ್ತು. ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಟಿಆರ್ಎಸ್ ಹೈದರಾಬಾದ್ನಲ್ಲಿ ಅಧಿಕಾರ ಪಡೆಯಲು ಮುನ್ನಡೆಯುತ್ತಿದೆ. ಅಂತಿಮವಾಗಿ ಯಾರಿಗೆ ಎಷ್ಟು ಸೀಟು? ಎಂದು ಕಾದು ನೋಡಬೇಕಿದೆ.











Click it and Unblock the Notifications