ಜನಾರ್ದನ ರೆಡ್ಡಿ ಜಾಮೀನಿಗೆ 40 ಕೋಟಿ ಆಮಿಷ; ಸಿಬಿಐ ಮಾಜಿ ಜಡ್ಜ್ ಸಾಕ್ಷ್ಯ
ಹೈದರಾಬಾದ್, ಆಗಸ್ಟ್ 27: "ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಂತೆ ನನಗೆ ನಲವತ್ತು ಕೋಟಿ ರುಪಾಯಿ ಆಮಿಷ ಒಡ್ಡಲಾಗಿತ್ತು" ಎಂದು ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶ ಬಿ. ನಾಗ ಮಾರುತಿ ಶರ್ಮಾ ಅವರು ಸೋಮವಾರದಂದು ಎಸಿಬಿ ಕೋರ್ಟ್ ನ ಪ್ರಿನ್ಸಿಪಾಲ್ ಸ್ಪೆಷಲ್ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆ ನಂತರ ಶರ್ಮಾ ಸ್ಥಾನಕ್ಕೆ ಬಂದ ಟಿ. ಪಟ್ಟಾಭಿರಾಮ ರಾವ್ ಮತ್ತು ಹೈ ಕೋರ್ಟ್ ನ ನ್ಯಾಯಾಂಗ ಅಧಿಕಾರಿ ಇಬ್ಬರನ್ನೂ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಲಂಚ ಪಡೆದ ಆರೋಪದಲ್ಲಿ ತನಿಖಾ ಸಂಸ್ಥೆಗಳು ಬಲೆಗೆ ಬೀಳಿಸಿದ್ದವು.
ಆಂಧ್ರಪ್ರದೇಶದ ಆಗಿನ ಹೈ ಕೋರ್ಟ್ ರಿಜಿಸ್ಟ್ರಾರ್ (ವಿಚಾರಣೆ) ಕೆ. ಲಕ್ಷ್ಮೀ ನರಸಿಂಹ ರಾವ್ ಅವರು ಗಾಲಿ ಜನಾರ್ದನ ರೆಡ್ಡಿ ಪರವಾಗಿ 2012ರ ಏಪ್ರಿಲ್ ನಲ್ಲಿ ಲಂಚದ ಆಮಿಷ ಒಡ್ಡಿದ್ದರು ಎಂದು ವರದಿ ಆಗಿತ್ತು. ಆ ವೇಳೆಯಲ್ಲಿ ಚಂಚಲಗೂಡ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಜನಾರ್ದನ ರೆಡ್ಡಿ ಇದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿಯನ್ನು 2011ರ ಸೆಪ್ಟೆಂಬರ್ ನಲ್ಲಿ ಸಿಬಿಐ ಬಂಧಿಸಿತ್ತು.

"ಅವರ ಆಮಿಷವನ್ನು ಸಾರಾಸಗಟಾಗಿ ತಳ್ಳಿಹಾಕಿದೆ ಮತ್ತು ರಿಜಿಸ್ಟ್ರಾರ್ ಅವರ ಮನೆಯಿಂದ ಹೊರನಡೆದೆ" ಎಂದು ಶರ್ಮಾ ಅವರು ಸಾಕ್ಷ್ಯ ನುಡಿದಿದ್ದಾರೆ. ಆ ನಂತರ ತಮ್ಮ ಮುಂದೆ ಬಂದ ಜನಾರ್ದನ ರೆಡ್ಡಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು ಶರ್ಮಾ.
ಇದೀಗ ಜಾಮೀನಿಗಾಗಿ ಹಣದ ಪ್ರಕರಣವು ವಿಚಾರಣೆ ಹಂತ ತಲುಪಿದೆ ಹಾಗೂ ಎಸಿಬಿಯ ವಿಶೇಷ ಕೋರ್ಟ್ (ಹೈದರಾಬಾದ್) ಶರ್ಮಾ ಅವರ ಸಾಕ್ಷ್ಯವನ್ನು ದಾಖಲಿಸಿದೆ. ಮುಂದಿನ ವಿಚಾರಣೆಯು ಸೆಪ್ಟೆಂಬರ್ ಹದಿಮೂರರಂದು ನಡೆಯಲಿದೆ. ಶರ್ಮಾ ಅವರು ಸಾಕ್ಷ್ಯ ನುಡಿಯುವ ವೇಳೆಯಲ್ಲಿ ಕೋರ್ಟ್ ನಲ್ಲಿ ಜನಾರ್ದನ ರೆಡ್ಡಿ ಹಾಜರಿದ್ದರು. ಮುಂದಿನ ವಿಚಾರಣೆಯಲ್ಲಿ ರೆಡ್ಡಿ ಪರ ವಕೀಲರು ಶರ್ಮಾ ಅವರನ್ನು ಪ್ರಶ್ನೆ ಕೇಳಲಿದ್ದಾರೆ.
ನರಸಿಂಹ ರಾವ್ ಅವರು ನನ್ನನ್ನು ಭೇಟಿಯಾಗಬೇಕು ಅಂದರು. ನನಗಿಂತ ಹುದ್ದೆಯಲ್ಲಿ ಮೇಲಿದ್ದ ಅವರ ಮನೆಗೆ ಭೇಟಿಗೆಂದು ಹೋಗಿದ್ದೆ. ಕುಶಲೋಪರಿ ವಿಚಾರಿಸಿದ ಮೇಲೆ ಗಾಲಿ ಜನಾರ್ದನ ರೆಡ್ಡಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಬಗ್ಗೆ ಪ್ರಸ್ತಾಪ ಇಟ್ಟರು. ಅವರ ಪ್ರಸ್ತಾವ ನಿರಾಕರಿಸಿದೆ. ಕಾನೂನಿನ ಹಾದಿ ತಪ್ಪಿ ನಡೆಯುವುದು ನನ್ನ ಪಾಲಿಗೆ ಸಾವಿಗೆ ಸಮಾನ ಎಂದೆ. ಈ ಅನುಕೂಲ ಮಾಡಿಕೊಟ್ಟರೆ ಜನಾರ್ದನ ರೆಡ್ಡಿ ಪರ ಇರುವ ಜನ ನಲವತ್ತು ಕೋಟಿ ಕೊಡಲು ಸಿದ್ಧರಿದ್ದಾರೆ ಎಂದು ಅವರು ತಿಳಿಸಿದರು. ಆದರೆ ಅದನ್ನು ಸಾರಾ ಸಗಟಾಗಿ ತಿರಸ್ಕರಿಸಿ, ಅವರ ಮನೆಯಿಂದ ಹೊರಟುಬಂದೆ ಎಂದು ಶರ್ಮಾ ಹೇಳಿದ್ದಾರೆ.
ಆ ನಂತರ ಸಿಬಿಐ ಕೋರ್ಟ್ ಗೆ ಶರ್ಮಾ ಅವರ ಸ್ಥಾನಕ್ಕೆ ಪಟ್ಟಾಭಿರಾಮ ರಾವ್ ಬಂದರು. ಜನಾರ್ದನ ರೆಡ್ಡಿಗೆ ಜಾಮೀನು ನೀಡಿದರು. ಲಂಚ ಪಡೆದ ಆರೋಪದ ಮೇಲೆ ಸಿಬಿಐ ಹಾಗೂ ಎಸಿಬಿಯಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರು. ಅದೇ ವರ್ಷ ಜುಲೈನಲ್ಲಿ ಪಟ್ಟಾಭಿ ರಾಮ ರಾವ್ ಅವರನ್ನು ಬಂಧಿಸಿ, ಜೈಲಿಗೆ ಕಳಿಸಿದರು. ಜತೆಗೆ ಎಸಿಬಿ ಅಧಿಕಾರಿಗಳು ಲಕ್ಷ್ಮೀ ನರಸಿಂಹ ರಾವ್ ಅವರನ್ನೂ ಬಂಧಿಸಲಾಗಿತ್ತು.












Click it and Unblock the Notifications