ತೆಲಂಗಾಣದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡ ಚಂದ್ರಬಾಬು ನೇತೃತ್ವದ ಟಿಡಿಪಿ
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ನಾರಾ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷದ ಬುಡವನ್ನೇ ಅಲುಗಾಡಿಸಲಾರಂಭಿಸಿದೆ.
ಇದುವರೆಗಿನ ತಮ್ಮ ರಾಜಕೀಯ ಜೀವನದಲ್ಲಿ ಪಕ್ಷದ ಇಂಥ ಅಧಃಪತನವನ್ನು ನಿರೀಕ್ಷಿಸದ ಚಂದ್ರಬಾಬು ನಾಯ್ಡು, ತೆಲುಗು ಭಾಷಿಗರ ಎರಡೂ ರಾಜ್ಯಗಳಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದೆ. ಜೊತೆಗೆ ಹೊಸಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ.
ರಾಜಕೀಯದಲ್ಲಿ ಏರಿಳಿತ ನಿರೀಕ್ಷಿತವಾಗಿದ್ದರೂ, ವಿರೋಧಿಗಳ ರಾಜಕೀಯದ ಮುಂದೆ ಟಿಡಿಪಿ ಸದ್ಯ ಮಂಕಾದಂತೆ ಕಾಣುತ್ತಿದೆ. ಒಂದು ಕಡೆ ಜಗನ್ಮೋಹನ್ ರೆಡ್ಡಿ ಇನ್ನೊಂದು ಕಡೆ ಕೆ.ಚಂದ್ರಶೇಖರ್ ರಾವ್ ಅವರ ಗೇಂ ಪ್ಲ್ಯಾನ್ ಮುಂದೆ ನಾಯ್ಡು ತಬ್ಬಿಬ್ಬಾಗುತ್ತಿದ್ದಾರೆ.
ಒಂದರ ಮೇಲೊಂದು ಹಿನ್ನಡೆ ಅನುಭವಿಸುತ್ತಿರುವ ಚಂದ್ರಬಾಬು ನಾಯ್ಡುಗೆ, ಸ್ವಪಕ್ಷೀಯ ಸದಸ್ಯರಿಬ್ಬರು ಭರ್ಜರಿ ಶಾಕ್ ನೀಡಿದ್ದು, ತೆಲುಗುದೇಶಂ ಪಕ್ಷ ಅಸ್ತಿತ್ವವನ್ನೇ ಕಳೆದುಕೊಳ್ಳುವಂತೆ ಮಾಡಿದೆ.

2018ರ ಅಸೆಂಬ್ಲಿ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಕೆಸಿಆರ್
ಕಳೆದ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಕೆಸಿಆರ್ ನೇತೃತ್ವದ ಟಿಆರ್ಎಸ್ ಪಕ್ಷ 88 ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. ಕೇವಲ ಹದಿಮೂರು ಕ್ಷೇತ್ರದಲ್ಲಿ ಟಿಡಿಪಿ ಸ್ಪರ್ಧಿಸಿದ್ದರೂ ಎರಡು ಕ್ಷೇತ್ರದಲ್ಲಿ ನಾಯ್ಡು ಪಕ್ಷ ಗೆಲುವನ್ನು ಸಾಧಿಸಿತ್ತು. ಆದರೆ, ಎರಡು ವರ್ಷದಲ್ಲಿ ನಡೆಯ ಬೇಕಾಗಿರುವ ಅಸೆಂಬ್ಲಿ ಚುನಾವಣೆಗೆ ಮುನ್ನ ಪಕ್ಷದ ಬೇರನ್ನು ಬಲಪಡಿಸಲು ರಣತಂತ್ರವನ್ನು ಚಂದ್ರಬಾಬು ನಾಯ್ಡು ರೂಪಿಸಲು ಆರಂಭಿಸಿದ್ದರು. ಆದರೆ..

ಇಬ್ಬರು ಟಿಡಿಪಿ ಶಾಸಕರ ರಾಜೀನಾಮೆ
ಆದರೆ, ಪಕ್ಷದ ಇಬ್ಬರು ಶಾಸಕರು ಕೆಸಿಆರ್ ನೇತೃತ್ವದ ಟಿಆರ್ಎಸ್ ಪಕ್ಷಕ್ಕೆ ನಿಯತ್ತು ತೋರಿ ತೆಲುಗುದೇಶಂ ಪಕ್ಷಕ್ಕೆ ರಾಜೀನಾಮೆ ನೀಡಿರುವುದರಿಂದ ಟಿಡಿಪಿ, ತೆಲಂಗಾಣ ಅಸೆಂಬ್ಲಿಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸ್ಪೀಕರ್ ಪಿ. ಶ್ರೀನಿವಾಸ ರೆಡ್ಡಿಯವರಿಗೆ ಇಬ್ಬರು ಟಿಡಿಪಿ ಶಾಸಕರು ರಾಜೀನಾಮೆ ಸಲ್ಲಿಸಿರುವುದನ್ನು ಸ್ಪೀಕರ್ ಕಚೇರಿ ಧೃಡೀಕರಿಸಿದೆ. ಎಸ್.ವೆಂಕಟ ವೀರಯ್ಯ ಮತ್ತು ಎಂ.ನಾಗೇಶ್ವರ ರಾವ್ ರಾಜೀನಾಮೆ ನೀಡಿದ ಇಬ್ಬರು ಶಾಸಕರು.

ಚಂದ್ರಬಾಬು ನಾಯ್ಡು ಅನುಮತಿ ಇಲ್ಲದೇ ರಾಜೀನಾಮೆ
ಇಬ್ಬರು ಶಾಸಕರು ರಾಜೀನಾಮೆ ನೀಡಿದ ವಿದ್ಯಮಾನಕ್ಕಿಂತಲೂ, ಟಿಡಿಪಿಯನ್ನು ಕಟ್ಟಿ ಬೆಳೆಸಿದ ಚಂದ್ರಬಾಬು ನಾಯ್ಡು ಅವರ ಅನುಮತಿಯನ್ನು ಪಡೆಯದೇ ತೆಲುಗುದೇಶಂ ಪಕ್ಷವನ್ನು ಟಿಆರ್ಎಸ್ ಪಕ್ಷದ ಜೊತೆಗೆ ವಿಲೀನಗೊಳಿಸಲು ಇಬ್ಬರು ಶಾಸಕರು ಸ್ಪೀಕರ್ ಅವರಿಗೆ ಪತ್ರ ಬರೆದಿರುವುದು ನಾಯ್ಡು ಅವರನ್ನು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ.

ಸಿಎಂ ಜಗನ್, ಮೋದಿ ಮತ್ತು ಅಮಿತ್ ಶಾ ಜೊತೆಗೆ ಉತ್ತಮ ಸಂಬಂಧ
ಬಿಜೆಪಿ ಜೊತೆಗೆ ದೂರವಾದ ನಂತರ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ದೇಶವ್ಯಾಪಿ ಸಂಚರಿಸಿ ಮೋದಿ ವಿರುದ್ದ ಪ್ರಚಾರ ನಡೆಸಿದ್ದರು. ಬದಲಾದ ರಾಜಕೀಯದಲ್ಲಿ ಮತ್ತೆ ಎನ್ಡಿಎ ಮೈತ್ರಿಕೂಟಕ್ಕೆ ಹತ್ತಿರವಾಗುವ ಸೂಚನೆಯನ್ನು ನೀಡಿದ್ದರು ಕೂಡಾ. ಆದರೆ, ಸಿಎಂ ಜಗನ್, ಮೋದಿ ಮತ್ತು ಅಮಿತ್ ಶಾ ಜೊತೆಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವುದರಿಂದ ನಾಯ್ಡು ಅವರ ಈ ಗೇಂ ಪ್ಲ್ಯಾನ್ ವರ್ಕೌಟ್ ಆಗುತ್ತಿಲ್ಲ.












Click it and Unblock the Notifications