ಅಪಘಾತದಲ್ಲಿ ಸತ್ತ ಮಗು ಹುಟ್ಟು ಹಬ್ಬದಂದು ಪ್ರತ್ಯಕ್ಷ!
ಹೈದರಾಬಾದ್, ಜು. 25 : ರೈಲು ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ನಂಬಿ ಅಂತಿಮ ಸಂಸ್ಕಾರ ಮಾಡಿಯಾಗಿತ್ತು. ಅಷ್ಟರಲ್ಲೇ ಮನೆಯ ಮುದ್ದಿನ ಮಗ ಬದುಕಿದ್ದಾನೆ ಎಂಬ ಸುದ್ದಿ ಬಂತು. ಗುರುವಾರ ತೆಲಂಗಾಣದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಡೆದ ಗೊಂದಲದ ಕತೆ ಇದು.
ಗುರುವಾರ ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್ ಬಳಿ ಶಾಲಾ ಬಸ್ಸು ಮತ್ತು ರೈಲಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ವರ್ಷದ ದರ್ಶನ್ ಗೌಡ್ ಕೂಡ ಸತ್ತಿದ್ದಾನೆ ಎಂದು ಭಾವಿಸಲಾಗಿತ್ತು. ಆಸ್ಪತ್ರೆಯವರು ನೀಡಿದ ಮಗುವಿನ ಶವವನ್ನು ತಂದು ಕುಟುಂಬದವರು ತಮ್ಮ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರವನ್ನು ಗುರುವಾರ ಸಂಜೆ ನೆರವೇರಿಸಿದ್ದರು.

ಆದರೆ, ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ದರ್ಶನ್ ಗೆ ಶುಕ್ರವಾರ ಬೆಳಗ್ಗೆ ಪ್ರಜ್ಞೆ ಬಂದಿದೆ. ಆಗ ಆತ ತನ್ನ ತಂದೆಯ ಹೆಸರು ಹೇಳಿದ್ದಾನೆ. ತಕ್ಷಣ ಅಧಿಕಾರಿಗಳು ಆತನ ತಂದೆ ಸ್ವಾಮಿ ಗೌಡ್ ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ಮಗ ಸತ್ತಿಲ್ಲ, ಬದುಕಿದ್ದು ಸುರಕ್ಷಿತವಾಗಿದ್ದಾನೆ ಎಂಬ ಸಿಹಿ ಸುದ್ದಿ ಕೇಳಿ ಕುಟುಂಬದವರು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ. [ತೆಲಂಗಾಣ ರೈಲ್ವೆ ಅಪಘಾತದ ದುರಂತ ಚಿತ್ರಗಳು]
ಶುಕ್ರವಾರ ದರ್ಶನ್ ಜನ್ಮ ದಿನ : ಅಂದದಾಗೆ ಅಪಘಾತದಲ್ಲಿ ಸತ್ತು ಬದುಕಿದ ದರ್ಶನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮಗನನ್ನು ನೋಡಲು ಆಸ್ಪತ್ರೆಗೆ ಬಂದ ಕುಟುಂಬದವರು, ಮುದ್ದಿನ ಕಂದನನ್ನು ತಬ್ಬಿಕೊಂಡು ಜನ್ಮದಿನದ ಶುಭಾಶಯ ಕೋರಿದರು. ಮೃತ ದೇಹ ಗುರುತಿಸುವಲ್ಲಿ ಉಂಟಾದ ಗೊಂದಲದಿಂದಾಗಿ ದರ್ಶನ್ ಸತ್ತಿದ್ದಾನೆ ಎಂದು ಮಾಹಿತಿ ನೀಡಲಾಗಿತ್ತು. ಈಗ ಕುಟುಂಬದವರು ಅಂತ್ಯ ಸಂಸ್ಕಾರ ಮಾಡಿದ ಶವ ಯಾರದ್ದು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.












Click it and Unblock the Notifications