ಭವಿಷ್ಯದಲ್ಲಿ ನಕ್ಸಲಿಸಂ ಅಂತ್ಯಗೊಳ್ಳಲಿದೆ: ರಾಮ್ ಮಾಧವ್ ಹೇಳಿಕೆ
ಹೈದರಾಬಾದ್, ಆಗಸ್ಟ್ 31: ನಕ್ಸಲರನ್ನು ಬೆಂಬಲಿಸುವವರು ಈಗ ಬಂಧನಕ್ಕೆ ಒಳಗಾಗುವ ಭೀತಿ ಎದುರಿಸುತ್ತಿದ್ದಾರೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ನಕ್ಸಲಿಸಂ ಸಂಪೂರ್ಣ ಅಂತ್ಯಗೊಳ್ಳಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ಕೆಲವು ಹೋರಾಟಗಾರರು ಈಗ ಜೈಲಿಗೆ ಹೋಗುವ ಬಗ್ಗೆ ಭಯಗೊಂಡಿದ್ದಾರೆ. ಹೀಗಾಗಿ ತಮ್ಮನ್ನು ಗೃಹಬಂಧನದಲ್ಲಿ ಇರಿಸುವಂತೆ ಮನವಿ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ನಕ್ಸಲಿಸಂ ಕೊನೆಗೊಳ್ಳಲಿದೆ.
ಪೊಲೀಸರು ಮತ್ತು ಸರ್ಕಾರಗಳ ಪ್ರಯತ್ನದ ಫಲವಾಗಿ ಈಗಾಗಲೇ ನಕ್ಸಲರು ಜಿಲ್ಲೆಗಳಿಂದ ಹೊರಬರುತ್ತಿದ್ದಾರೆ. ಆದರೆ, ನಗರಗಳಲ್ಲಿ ನೆಲೆಸಿರುವ ಕೆಲವು ಕಾರ್ಯಕರ್ತರು ನಕ್ಸಲಿಸಂಅನ್ನು ಬೆಂಬಲಿಸುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಮಾಧವ್ ಹೇಳಿದ್ದಾರೆ.

ನಕ್ಸಲರು ಶತ್ರುಗಳು. ಅವರ ಬೆಂಬಲಿಗರು ಪ್ರೊಫೆಸರ್ಗಳು ಮತ್ತು ಮಾನವ ಹಕ್ಕುಗಳ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಾದ ವರವರ ರಾವ್, ಅರುಣ್ ಫೆರೀರಾ, ಗೌತಮ್ ನವಲಖಾ, ಸುಧಾ ಭಾರದ್ವಾಜ್ ಮತ್ತು ವೆರ್ನಾನ್ ಗೊನ್ಸಾಲ್ವಿಸ್ ಅವರನ್ನು ಸೆಪ್ಟೆಂಬರ್ ಐದರವರೆಗೂ ಗೃಹಬಂಧನದಲ್ಲಿ ಇರಿಸುವಂತೆ ಪುಣೆ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ಈ ಘಟನೆಯ ಹಿನ್ನೆಲೆಯಲ್ಲಿ ರಾಮ್ ಮಾಧವ್ ಈ ಹೇಳಿಕೆ ನೀಡಿದ್ದಾರೆ.












Click it and Unblock the Notifications