ಬಿಜೆಪಿ ಶೀಘ್ರವೇ ಸಾವರ್ಕರ್ನನ್ನು 'ರಾಷ್ಟ್ರಪಿತ' ಎಂದು ಘೋಷಿಸುತ್ತೆ: ಓವೈಸಿ
ಹೈದರಾಬಾದ್, ಅಕ್ಟೋಬರ್ 13: "ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್ಗೆ ಹೇಳಿದ್ದು ಮಹಾತ್ಮ ಗಾಂಧಿ," ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ಧೀನ್ ಓವೈಸಿ, "ಬಿಜೆಪಿಯು ಶೀಘ್ರದಲ್ಲೇ ಸಾವರ್ಕರ್ ಅನ್ನು ರಾಷ್ಟ್ರಪಿತ ಎಂದು ಘೋಷಣೆ ಮಾಡುತ್ತದೆ," ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ಧೀನ್ ಓವೈಸಿ, "ಬಿಜೆಪಿಯು ತನ್ನದೇ ಆದ, ವಿಕೃತವಾದ ಇತಿಹಾಸವನ್ನು ಪ್ರಸ್ತುತ ಪಡಿಸುತ್ತಿದೆ. ಹೀಗೆಯೇ ಮುಂದುವರಿದರೆ ಇನ್ನು ಬಿಜೆಪಿಯವರು ಶೀಘ್ರದಲ್ಲೇ, ರಾಷ್ಟ್ರಪಿತ ಮಹಾತ್ಮ ಗಾಂಧಿಯ ಬದಲಾಗಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಆರೋಪವನ್ನು ಹೊತ್ತಿರುವ ಸಾವರ್ಕರ್ ಅನ್ನು ದೇಶದ ಪಿತಾಮಹ ಎಂದು ಹೇಳುತ್ತಾರೆ," ಎಂದು ಓವೈಸಿ ದೂರಿದ್ದಾರೆ.
"ಹಿಂದುತ್ವದ ಐಕಾನ್ ಆದ ವೀರ ಸಾರ್ವಕರ್ ಅಂಡಮಾನ್ ಜೈಲಿನಲ್ಲಿ ಇದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್ಗೆ ಹೇಳಿದ್ದು ಮಹಾತ್ಮ ಗಾಂಧಿಜಿ," ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿಕೊಂಡಿದ್ದರು.

ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ ಎಂಬ ಪುಸ್ತಕವನ್ನು ಉದಯ್ ಮಹೂರ್ಕರ್ ಮತ್ತು ಚಿರಾಯು ಪಂಡಿತ್ ಬರೆದಿದ್ದಾರೆ ಮತ್ತು ರೂಪಾ ಪ್ರಕಟಣೆಯು ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕವನ್ನು ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ್ದ ರಕ್ಷಣಾ ಸಚಿವರು, "ಸಾವರ್ಕರ್ಗೆ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರ್ ನೀಡಿದ ಕೊಡುಗೆಯನ್ನು ಕೆಲವು ಸಿದ್ಧಾಂತವನ್ನು ಅನುಸರಿಸುವವರು ನಿಂದಿಸಿದ್ದಾರೆ. ಅದನ್ನು ಇನ್ನು ಮುಂದೆ ಸಹಿಸಲಾಗದು," ಎಂದು ಕೂಡಾ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.
"ಸಾವರ್ಕರ್ ವಿರುದ್ಧವಾಗಿ ಹಲವಾರು ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. ಬ್ರಿಟಿಷ್ ಸರ್ಕಾರದ ಮುಂದೆ ಸಾವರ್ಕರ್ ಎರಡು ಬಾರಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಪದೇ ಪದೇ ಹೇಳಲಾಗುತ್ತದೆ. ಆದರೆ ನಿಜವಾಗಿ ಸಾವರ್ಕರ್ ತನ್ನ ಬಿಡುಗಡೆಗಾಗಿ ಈ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿಲ್ಲ. ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳು ಕ್ಷಮಾದಾನ ಅರ್ಜಿಯನ್ನು ಸಲ್ಲಿಕೆ ಮಾಡಬಹುದು," ಎಂದು ರಕ್ಷಣಾ ಸಚಿವರು ರಾಜನಾಥ್ ಸಿಂಗ್ ಹೇಳಿದ್ದರು.
"ಮಹಾತ್ಮ ಗಾಂಧಿಜಿ ಅವರು ಸಾವರ್ಕರ್ ಬಳಿಕ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದರು. ಸಾವರ್ಕರ್ ಜೀ ಅನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ಮಹಾತ್ಮ ಗಾಂಧಿ ಮನವಿ ಮಾಡಿದ್ದರು. ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ಜನರಿಗೆ ಸಾವರ್ಕರ್ ಪ್ರೇರಣೆ ನೀಡಿದರು. ಸಾವರ್ಕರ್ ಮಹಿಳಾ ಹಕ್ಕುಗಳು ಸೇರಿದಂತೆ ಇತರ ಸಾಮಾಜಿಕ ಸಮಸ್ಯೆಗಳ ನಡುವೆ ಅಸ್ಪೃಶ್ಯತೆಯ ವಿರುದ್ಧ ಆಂದೋಲನ ಮಾಡಿದರು. ಆದರೆ ಸಾವರ್ಕರ್ ಅವರು ದೇಶದ ಸಾಂಸ್ಕೃತಿಕ ಏಕತೆಗಾಗಿ ನೀಡಿದ ಕೊಡುಗೆಯನ್ನು ಕಡೆಗಣಿಸಲಾಗುತ್ತಿದೆ," ಎಂದು ಕೂಡಾ ರಕ್ಷಣಾ ಸಚಿವರು ತಿಳಿಸಿದ್ದರು.
ಇನ್ನು ಸಾವರ್ಕರ್ ಅವರನ್ನು ನಾಝಿ ಅಥವಾ ಫ್ಯಾಸಿಸ್ಟ್ ಎಂದು ಟೀಕೆ ಮಾಡುವುದು ಕೂಡಾ ಸರಿಯಲ್ಲ ಎಂದು ರಕ್ಷಣಾ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. "ನಿಜ ಸಂಗತಿ ಎಂದರೆ ಸಾವರ್ಕರ್ ಹಿಂದುತ್ವದ ಮೇಲೆ ನಂಬಿಕೆ ಇದ್ದವರು. ಆದರೆ ನಿಜವಾಗಿ ಸಾವರ್ಕರ್ ವಾಸ್ತವವಾದಿ. ಜನರಲ್ಲಿ ಏಕತೆ ಇರಬೇಕಾದರೆ ಸಂಸ್ಕೃತಿಯಲ್ಲಿಯೂ ಏಕತೆ ಇರಬೇಕು, ಒಂದೇ ರೀತಿಯ ಸಂಸ್ಕೃತಿ ಇರಬೇಕು ಎಂದು ಸಾವರ್ಕರ್ ನಂಬಿದ್ದರು," ಎಂದಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications