ಅಬ್ಬಾ..! ಎಸಿಬಿ ದಾಳಿಯಲ್ಲಿ ಸಿಕ್ಕಿದ್ದು ಮನೆ ತುಂಬ ಬೆಳ್ಳಿ, ಬಂಗಾರ!
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಸೋಮವಾರ ಎಸಿಬಿ ಅಧಿಕಾರಿಗಳು ಆರ್ ಟಿ ಓ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಾಂತರ ರು ಅಕ್ರಮ ಆಸ್ತಿ ಪತ್ತೆಯಾಗಿದೆ.
ಹೈದರಾಬಾದ್, ಅಕ್ಟೋಬರ್. 26: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರದ ನೌಕರ ಪೂರ್ಣಚಂದ್ರ ರಾವ್ ಅವರ ಮನೆ ಮೇಲೆ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ಮಾಡಿದೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪೂರ್ಣಚಂದ್ರ ರಾವ್ ಅವರ ಹೆಸರಿನಲ್ಲಿರುವ ಕನಿಷ್ಠ 14 ಮನೆಗಳು, ಮನೆ ತುಂಬಾ 60 ಕೆಜಿ ಬೆಳ್ಳಿ ಮತ್ತು 1 ಕೆಜಿ ಬಂಗಾರದ ವಸ್ತುಗಳು ಮತ್ತು 20 ಲಕ್ಷ ರು. ಪತ್ತೆಯಾಗಿವೆ.
1981ರಲ್ಲಿ ಮೋಟರ್ ವಾಹನದ ಇನ್ಸ್ ಪೆಕ್ಟರ್ ಆಗಿ ಸೇವೆಗೆ ಸೇರಿದ್ದ ಪೂರ್ಣಚಂದ್ರ ರಾವ್ ಅವರು, 7 ಅಪಾರ್ಟ್ ಮೆಂಟ್ಗಳು, ವಿನುಕೊಂಡದಲ್ಲಿ ಎರಡು ಮನೆಗಳು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಎರಡು ಪ್ಲಾಟ್ಗಳು ಮತ್ತು ಮಿಲ್ಗಳ ಮಾಲೀಕತ್ವ ಹೊಂದಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ಣಚಂದ್ರ ರಾವ್ 3 ಕೋಟಿ ವೌಲ್ಯದ ಆಸ್ತಿ ಇದೆ ಎಂದು ಹೇಳುತ್ತಿದ್ದಾರೆ. ಆದರೆ, ಮಾರುಕಟ್ಟೆ ವೌಲ್ಯದ ಪ್ರಕಾರ ರಾವ್ ಆಸ್ತಿ 25 ಕೋಟಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ಇನ್ನೂ ಹೆಚ್ಚಿನ ಆಸ್ತಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ಭ್ರಷ್ಟಾಚಾರ ನಿಗ್ರಹ ಅಧಿಕಾರಿ ದೇವಾನಂದ್ ಸಂತೊ ಹೇಳಿದ್ದಾರೆ.