ಹೈದರಾಬಾದ್ : ಅವಳಿ ಸ್ಫೋಟ ಪ್ರಕರಣದಲ್ಲಿ ಇಬ್ಬರು ದೋಷಿ, ಇಬ್ಬರಿಗೆ ಖುಲಾಸೆ
ಹೈದರಾಬಾದ್, ಸೆಪ್ಟೆಂಬರ್ 04: ಇಲ್ಲಿನ ಗೋಕುಲ್ ಚಾಟ್ ಹಾಗೂ ಲುಂಬುನಿ ಪಾರ್ಕ್ ಬಳಿ 2007ರಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳು ಎಂದು ಘೋಷಿಸಲಾಗಿದ್ದು, ಇಬ್ಬರಿಗೆ ಖುಲಾಸೆಯಾಗಿದೆ. ಅನೀಕ್ ಶಫೀಕ್ ಸೈಯದ್, ಅಕ್ಬರ್ ಇಸ್ಮಾಯಿಲ್ ಚೌಧರಿ ಇಬ್ಬರನ್ನು ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಫರೂಕ್ ಶರ್ಫುದ್ದೀನ್ ತರ್ಕಶ್ ಹಾಗೂ ಮೊಹಮ್ಮದ್ ಸಾದಿಕ್ ಇಸ್ರಾಸ್ ಅಹ್ಮದ್ ಶೈಕ್ ಅವರಿಗೆ ಖುಲಾಸೆಯಾಗಿದೆ.
ಪ್ರಕರಣ ಉಳಿದ ಐವರು ಆರೋಪಿಗಳನ್ನು ಭದ್ರತಾ ಕಾರಣಗಳಿಂದ ಕೋರ್ಟಿಗೆ ಇಂದು ಕರೆ ತರಲಾಗಿರಲಿಲ್ಲ. ಇಂಡಿಯನ್ ಮುಜಾಹೀದ್ದೀನ್ ಸ್ಥಾಪಕರಾದ ಕರ್ನಾಟಕ ಮೂಲದ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಅವರ ವಿರುದ್ಧ ಕೂಡಾ ತೆಲಂಗಾಣ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರು ಸದ್ಯ ನಾಪತ್ತೆಯಾಗಿದ್ದಾರೆ. ಮತ್ತೊಬ್ಬ ಆರೋಪಿ ತಾರೀಖ್ ಅಂಜುಮ್ ವಿರುದ್ಧದ ತೀರ್ಪನ್ನು ಸೆಪ್ಟೆಂಬರ್ ರಂದು ನೀಡಲಾಗುತ್ತದೆ.
ಅವಳಿ ಸ್ಫೋಟದ ದಿನದ CCTV ದೃಶ್ಯಾವಳಿ
ಅವಳಿ ಸ್ಫೋಟದಲ್ಲಿ ಬಾಂಬ್ ಇಟ್ಟವರ ಪೈಕಿ ಒಬ್ಬ ಕರ್ನಾಟಕದ ಸಯ್ಯದ್ ಅಹಮದ್ ಝರಾರ್ ಸಿದ್ದಿಬಪ್ಪಾ ಅಲಿಯಾಸ್ ಯಾಸಿನ್ ಭಟ್ಕಳನೇ ಎಂದು CCTV ದೃಶ್ಯಾವಳಿಗಳನ್ನು ಆಧರಿಸಿ NIA ತಿಳಿಸಿತ್ತು.
ವ್ಯಕ್ತಿಯೊಬ್ಬ ಬಾಂಬ್ ತುಂಬಿರುವ ಚೀಲವನ್ನು ಕೈಯಲ್ಲಿ ಹಿಡಿದುರುವುದು CCTVಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ಮತ್ತೊಂದು ಸ್ಫೋಟದಲ್ಲಿ ಸೈಕಲಿನಲ್ಲಿ ಬಾಂಬ್ ಸಾಗಿಸಿಟ್ಟವನು ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಎಂದೂ ಹೇಳಿದ್ದರು. ಅಸಾದುಲ್ಲಾ ಅಖ್ತರ್ ಅಜಂನಗರದ ನಿವಾಸಿ. 2008 ರಲ್ಲಿ ಇವನು ಪರಾರಿಯಾಗಿದ್ದ.
ತೆಲಂಗಾಣ ಪೊಲೀಸರು ಕೈಗೊಂಡಿದ್ದ ತನಿಖೆ
2007ರಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಒಂದು ಬಾಂಬ್ ಸ್ಫೋಟದಲ್ಲಿ 32 ಮಂದಿ ಮೃತಪಟ್ಟರೆ, ಮತ್ತೊಂದರಲ್ಲಿ 11 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ತೆಲಂಗಾಣ ಪೊಲೀಸ್ ಇಲಾಖೆಯ ದಿ ಕೌಂಟರ್ ಆಫ್ ಇಂಟಲಿಜೆನ್ಸ್ ತಂಡವು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿತು.
ಭಟ್ಕಳ ಸೋದರರು ಸೇರಿದಂತೆ ಐವರ ಮೇಲೆ ಚಾರ್ಜ್ ಶೀಟ್
ಭಟ್ಕಳ ಸೋದರರು ಸೇರಿದಂತೆ ಐವರ ಮೇಲೆ ಮೂರು ಚಾರ್ಜ್ಶೀಟ್ಗಳನ್ನು ಸಲ್ಲಿಸಲಾಗಿತ್ತು. 2008 ಅಕ್ಟೋಬರ್ನಲ್ಲಿ ಆರೋಪಿಗಳನ್ನು ಮಹಾರಾಷ್ಟ್ರ ಎಟಿಎಸ್ ಪಡೆ ಬಂಧಿಸಿತ್ತು. ಆರೋಪಿಗಳನ್ನು ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಲ್ಲಿರಿಸಲಾಗಿದೆ.
ಸೆಷನ್ಸ್ ಕೊರ್ಟ್ ನಿಂದಲೂ ಶಿಕ್ಷೆ ಪ್ರಕಟ
2013 ಆಗಸ್ಟ್ನಲ್ಲಿ ಎರಡನೇ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ ನಲ್ಲಿ ಅನೀಕ್ ಶಾಫಿಕ್ ಸೈಯದ್, ಮೊಹ್ಮದ್ ಸಾದಿಕ್, ಅಕ್ಬರ್ ಇಸ್ಮಾಯಿಲ್ ಚೌಧರಿ ಹಾಗೂ ಅನ್ಸರ್ ಅಹ್ಮದ್ ಬಾದ್ಶಹ ಶೇಖ್ರನ್ನು ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರೆಂದು ಪ್ರಕಟಿಸಿ, ಶಿಕ್ಷೆ ನೀಡಿತ್ತು.
ಬೆಂಗಳೂರು ಸ್ಫೋಟದ ರೂವಾರಿ ಮದನಿ
ಬೆಂಗಳೂರು ಮತ್ತು ಹೈದರಾಬಾದ್ ಸ್ಫೋಟದ ರೂವಾರಿಗಳು ಹತ್ತಿರದ ಸಂಬಂಧಿಗಳು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಹಾಗೂ ಹೈದರಾಬಾದ್ ಸ್ಫೋಟದ ಆರೋಪಿ ಅಬು ಉಸ್ತಾದ್ ನಡುವೆ ಸಂಪರ್ಕವಿರುವುದು ಖಾತ್ರಿಯಾಗಿತ್ತು. ಮದನಿಯಂತೆ ಉಸ್ತಾದ್ ಕೂಡಾ ಮದರಸಾಗಳಲ್ಲಿ ಉಗ್ರ ಭಾಷಣ ಮಾಡಿದ್ದು ಪತ್ತೆಯಾಗಿತ್ತು.
ಹೈದರಾಬಾದ್ ಅವಳಿ ಸ್ಫೋಟದ ಆರೋಪಿಗಳಾದ ಸೈನುದ್ದೀನ್ ಮತ್ತು ಅವನ ಪುತ್ರ ಷಫಾರುದ್ದೀನ್ ಅಬು ಉಸ್ತಾದನ ಮಾವನ ಮನೆಯವರು. ಈ ನಿಟ್ಟಿನಲ್ಲಿ ಎನ್ಐಎ ತನಿಖೆ ನಡೆಸಿತ್ತು.