ಮತ್ತೊಂದು ಚುನಾವಣೆಗೆ ಸಜ್ಜು: ಜಿಲ್ಲಾ,ತಾಲೂಕು ಪಂಚಾಯತ್ ಟಿಕೆಟ್ಗಾಗಿ ಅಭ್ಯರ್ಥಿಗಳ ಲಾಭಿ
ಹುಬ್ಬಳ್ಳಿ, ಮೇ 23: ಕಳೆದ ಎರಡು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗಳಲ್ಲಿ ಅಧಿಕಾರಿಗಳೇ ಆಡಳಿತ ನಡೆಸುವಂತಾಗಿದೆ. ಹೀಗಾಗಿ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಕಸರತ್ತು ನಡೆದಿದ್ದು, ಚುನಾವಣೆಗೆ ಕಾಲ ಸನ್ನಿಹಿತವಾಗಲಿದೆ.
ವಿಧಾನಸಭೆ ಚುನಾವಣೆ ಈಗಷ್ಟೇ ಮುಗಿದಿದೆ. ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ನಾಲ್ವರು ಹಾಗೂ ಬಿಜೆಪಿ ಮೂವರು ಚುನಾಯಿತರಾಗಿದ್ದಾರೆ. ಇದರ ಬೆನ್ನಲ್ಲೇ, ಶಾಸಕರ ಬೆಂಬಲಿಗರು ಮತ್ತೊಂದು ಸುತ್ತಿನ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಜರುಗಲಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯತ್ತ ದೃಷ್ಟಿ ನೆಟ್ಟಿರುವ ಕಾರ್ಯಕರ್ತರು, ಈಗಿನಿಂದಲೇ ತಯಾರಿ ನಡೆಸಿ, ಟಿಕೆಟ್ಗಾಗಿ ರಾಜಕೀಯ ಪಕ್ಷಗಳ ಮುಖಂಡರ ಮೇಲೆ ಪ್ರಭಾವ ಬೀರುವ ಯತ್ನದಲ್ಲಿ ತೊಡಗಿದ್ದಾರೆ.

ಜಿಲ್ಲಾ ಪಂಚಾಯಿತಿ ಹಿಂದಿನ ಸದಸ್ಯರ ಅಧಿಕಾರ ಅವಧಿ 2021ರ ಮೇ 3ರಂದು ಮುಕ್ತಾಯವಾಗಿದೆ. 2 ವರ್ಷಗಳಾದರೂ ಜಿ.ಪಂ.ನಲ್ಲಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಆಡಳಿತ ಮುಂದುವರಿದಿದೆ. ಬಿಜೆಪಿ ಸರ್ಕಾರ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲೇ 2 ವರ್ಷ ಕಾಲ ಕಳೆಯಿತು.
2 ಬಾರಿ ಕ್ಷೇತ್ರ ಪುನರ್ ವಿಂಗಡಣಿ ಮಾಡಿ ಮೀಸಲಾತಿ ಘೋಷಿಸಿದ್ದರೂ ನೂರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಚುನಾವಣೆ ಇದುವರೆಗೂ ನಡೆದಿಲ್ಲ. ಇನ್ನು 22 ಸದಸ್ಯ ಬಲದ ಧಾರವಾಡ ಜಿಲ್ಲಾ ಪಂಚಾಯತ್ಗೆ 2016ರ ಫೆಬ್ರವರಿಯಲ್ಲಿ ಚುನಾವಣೆ ನಡೆದಿತ್ತು.
ಬಿಜೆಪಿ 11, ಕಾಂಗ್ರೆಸ್ 10 ಹಾಗೂ ಬ್ಯಾಹಟ್ಟಿ ಕ್ಷೇತ್ರದಿಂದ ಶಿವಾನಂದ ಕರಿಗಾರ ಪಕ್ಷೇತರರಾಗಿ ಗೆದ್ದಿದ್ದರು. ಕರಿಗಾರ ಬಿಜೆಪಿ ಬೆಂಬಲಿಸಿದ್ದರಿಂದ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಕೊನೆಯ 2 ವರ್ಷಗಳಿದ್ದಾಗ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿ ಗೆದ್ದಿತ್ತು. ಬಿಜೆಪಿಯ ಚೈತ್ರಾ ಶಿರೂರ ಅಧಿಕಾರದಿಂದ ಕೆಳಗಿಳಿದು ಕಾಂಗ್ರೆಸ್ನ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷ ಹುದ್ದೆಗೇರಿದ್ದರು.

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಗೂ ಮೊದಲೇ ಚುನಾವಣೆ ನಡೆಯಲಿದೆ. ಉಮೇದಿಯಿಂದ ಆಕಾಂಕ್ಷಿಗಳು ತಯಾರಿ ನಡೆಸಿದ್ದರು. ಆದರೆ, ಕ್ಷೇತ್ರ ಪುನರ್ ವಿಂಗಡಣ ಪ್ರಕ್ರಿಯ ಅಂತಿಮವಾಗದಿರುವುದರಿಂದ ಆಕಾಂಕ್ಷಿಗಳು ಹತಾಶರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನಾಯಕರ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಆಕಾಂಕ್ಷಿತರು ಈಗ ತೆರೆ ಮರೆಯ ಹಿಂದೇ ಸರ್ಕಸ್ ನಡೆಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಜಿಲ್ಲಾ ಹಾಗೂ ತಾಲೂಕು ಪಂಚಾಯತ ಚುನಾವಣೆ ಮುಹೂರ್ತ ಫಿಕ್ಸ್ ಮಾಡುವ ಕಾರ್ಯಕ್ಕೆ ಮುಂದಾಗಬೇಕಿದೆ.












Click it and Unblock the Notifications