ಯೋಗಿ ಆದಿತ್ಯನಾಥ ಮಾತಿನ ಓಘಕ್ಕೆ ಉಘೇ ಎಂದ ಹುಬ್ಬಳ್ಳಿ ಮಂದಿ
ಹುಬ್ಬಳ್ಳಿ, ಡಿಸೆಂಬರ್ 21 : 'ಈ ದೇಶದಲ್ಲಿ ರಾಮನ, ಹನುಮಂತನ ಪೂಜೆ ಮಾಡಲಾಗುತ್ತದೆ. ಆದರೆ, ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್ ಪೂಜಿಸುತ್ತದೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ 50 ದಿನಗಳನ್ನು ಪೂರೈಸಿದೆ. ಉತ್ತರ ಕರ್ನಾಟಕ ಭಾಗದ ಬೃಹತ್ ಸಮಾವೇಶ ಹುಬ್ಬಳ್ಳಿಯಲ್ಲಿ ಗುರುವಾರ ನಡೆಯಿತು. ಯೋಗಿ ಆದಿತ್ಯನಾಥ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ನೆಹರೂ ಮೈದಾನದಲ್ಲಿ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, 'ಕರ್ನಾಟಕದಿಂದ ಕಾಂಗ್ರೆಸ್ ಅನ್ನು ಹೊಡೆದೊಡಿಸಿ' ಎಂದು ರಾಜ್ಯದ ಜನರಿಗೆ ಕರೆ ನೀಡಿದರು. ಸಮಾವೇಶಕ್ಕೂ ಮೊದಲು ಅವರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿದರು.
ಪರಿವರ್ತನಾ ಯಾತ್ರೆ : ಬಿಜೆಪಿ ಸಾಧಿಸಿದ್ದೇನು?
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ವಿವಿಧ ರಾಜ್ಯ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಪತ್ರ ಓದಿದ ಯಡಿಯೂರಪ್ಪ: ಮಹದಾಯಿ ವಿವಾದದ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬರೆದಿರುವ ಪತ್ರವನ್ನು ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಓದಿದರು.
ಮಹದಾಯಿ ವಿವಾದ : ಗೋವಾ ಸಿಎಂ ಬರೆದ ಪತ್ರದಲ್ಲೇನಿದೆ?
ಯೋಗಿ ಆದಿತ್ಯನಾಥ್ ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. 'ಉತ್ತರ ಕರ್ನಾಟಕ ಭಾಗದ ಜನರಿಗೆ ನನ್ನ ಧನ್ಯವಾದ' ಎಂದು ಮಾತು ಆರಂಭಿಸಿದರು.
* ಈ ದೇಶದಲ್ಲಿ ರಾಮನ, ಹನುಮಂತನ ಪೂಜೆ ಮಾಡಲಾಗುತ್ತದೆ. ಆದರೆ, ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್ ಪೂಜಿಸುತ್ತದೆ. ರಾಜ್ಯದ ಮುಖ್ಯಮಂತ್ರಿ ನಾನು ಗೋಮಾಂಸ ತಿನ್ನುತ್ತೇನೆ ಎಂದು ಹೇಳಿದ್ದು ಕೇಳಿ ನನಗೆ ಆಘಾತವಾಯಿತು.
* ರಾಜ್ಯದ ರೈತರು ಸಾಲದ ಸುಳಿಗೆ ಸಿಕ್ಕಿ ಸಾಯುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರಿಗೆ ಸಾಲ ಮನ್ನಾ ಮಾಡುವ ಮನಸ್ಸಿಲ್ಲ. ಏಕೆಂದರೆ ಕಾಂಗ್ರೆಸ್ ಬಳಿ ಉಳಿದಿರುವುದು ಎರಡೇ ರಾಜ್ಯ. ಜನರ ದುಡ್ಡನ್ನು ಕೊಳ್ಳೆ ಹೊಡೆದು ಚುನಾವಣೆ ಎದುರಿಸಬೇಕಿದೆ.
* ದೇಶಕ್ಕೆ ನರೇಂದ್ರ ಮೋದಿ ಅವರಂತಹ ಬಲಿಷ್ಠ ನಾಯಕ ಸಿಕ್ಕಿದ್ದಾನೆ. ಹಿಮಾಚಲ ಪ್ರದೇಶದದಿಂದ ಕಾಂಗ್ರೆಸ್ ಪಕ್ಷವನ್ನು ಹೊಡೆದೋಡಿಸಿಯಾಗಿದೆ. ಕರ್ನಾಟಕದಿಂದಲೂ ಪಕ್ಷವನ್ನು ಓಡಿಸಿ. ಕಾಂಗ್ರೆಸ್ ಮುಕ್ತ ರಾಜ್ಯ ಮಾಡಿ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಿ.
* ನರೇಂದ್ರ ಮೋದಿ ಅವರಿಂದ ರಾಜ್ಯಕ್ಕೆ 10 ಸಾವಿರ ಕೋಟಿ ಅನುದಾನ ಒಂದೇ ವರ್ಷದಲ್ಲಿ ಬಂದಿದೆ. ಅದೇ ಕಾಂಗ್ರೆಸ್ ಆಡಳಿತದಲ್ಲಿ ಇರುವಾಗ 40 ವರ್ಷಗಳಲ್ಲಿ ಇಷ್ಟು ಹಣವನ್ನು ನೀಡಿರಲಿಲ್ಲ. 40 ವರ್ಷ ದೇಶದ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗದವರ ಆಡಳಿತ ನಮಗೆ ಬೇಕೆ?
* ಉತ್ತರದಲ್ಲಿ 1 ದಕ್ಷಿಣದಲ್ಲಿ 1 ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಉಳಿದಿದೆ. ದೇಶದಲ್ಲಿ ರಾಮನ ಪೂಜೆ ಆಗುತ್ತದೆ. ಟಿಪ್ಪುವಿನ ಪೂಜೆ ಆಗುವುದಿಲ್ಲ. ಟಿಪ್ಪುವಿನ ಪೂಜೆ ಆಗಲು ನೀವು ಅವಕಾಶ ನೀಡಬಾರದು. ಆದ್ದರಿಂದ, ಕಾಂಗ್ರೆಸ್ ತೊಲಗಿಸಿ.