ಧಾರವಾಡ ಜೈಲಲ್ಲೇ ಹತ್ಯೆಗೆ ಸ್ಕೆಚ್, ಗೌಡನ ಜಾಮೀನು ಅರ್ಜಿ ವಜಾ
ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡನ ಹತ್ಯೆ ಆರೋಪಿಗಳ ಕೊಲೆಗೆ ಸ್ಕೆಚ್ ಹಾಕಿದ್ದ ಮೃತನ ಸಹೋದರ ಗುರುನಾಥ ಗೌಡ ಮತ್ತಿತರರ ಜಾಮೀನು ಅರ್ಜಿಯನ್ನು ಜೆಎಂಎಫ್ ಸಿ ಕೋರ್ಟ್ ಶುಕ್ರವಾರ ವಜಾ ಮಾಡಿದೆ
ಧಾರವಾಡ, ಮಾರ್ಚ್ 18: ಧಾರವಾಡದಲ್ಲಿ ಹತ್ಯೆಯಾಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡನ ಸೋದರ ಗುರುನಾಥ ಗೌಡ ಮತ್ತಿಬ್ಬರ ಜಾಮೀನು ಅರ್ಜಿಯನ್ನು ಶುಕ್ರವಾರ ಜೆಎಂಎಫ್ ಸಿ ಕೋರ್ಟ್ ವಜಾ ಮಾಡಿದೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದು ಹಾಗೂ ಯೋಗೀಶ ಗೌಡನ ಹತ್ಯೆ ಆರೋಪಿಗಳ ಕೊಲೆ ಯತ್ನದ ಆರೋಪ ಇವರ ಮೇಲೆ ಇತ್ತು.
ಯೋಗೇಶಗೌಡ ಹತ್ಯೆ ಆರೋಪಿಗಳಾದ ಬಸವರಾಜ ಮುತಗಿ, ಮುದಕಪ್ಪ ಹೊಂಗಲ್ ನನ್ನು ಜೈಲಿನಲ್ಲೇ ಹತ್ಯೆ ಮಾಡಲು ಗುರುನಾಥ ಗೌಡ ಮತ್ತಿತರರು ಯೋಜನೆ ರೂಪಿಸಿದ್ದರು ಎಂಬ ಸಂಶಯದ ಮೇಲೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಇತ್ತೀಚೆಗೆ ಗೋವನಕೊಪ್ಪ ಗ್ರಾಮದ ಗುರುನಾಥ ಗೌಡನ ಮನೆಯಲ್ಲಿ ತಪಾಸಣೆ ನಡೆಸಿದ್ದರು.[ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನ ಹತ್ಯೆ]

ಆ ವೇಳೆ ಆತ ಪರಾರಿಯಾಗಿದ್ದ. ಆದರೆ ಕಳೆದ ಶನಿವಾರ (ಮಾರ್ಚ್ 11ರಂದು) ಎರಡನೇ ಹೆಚ್ಚುವರಿ ನ್ಯಾಯಾಲಯಕ್ಕೆ ಶರಣಾಗಿದ್ದ. ಆ ನಂತರ ವಿಚಾರಣೆ ಸಲುವಾಗಿ ಆತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ಇದೇ ಪ್ರಕರಣದಲ್ಲಿ ಧಾರವಾಡದ ಲಕ್ಷ್ಮಣ ವಾಲ್ಮೀಕಿ, ಹನುಮಂತ ಕದಡಿ ಎಂಬಾತನನ್ನು ಕೂಡ ಬಂಧಿಸಲಾಗಿತ್ತು.[ಧಾರವಾಡ : ಯೋಗೇಶ ಗೌಡ ಕೊಲೆ, ಐವರ ಬಂಧನ]
ಇವರಿಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿವೆ. ಇನ್ನೊಬ್ಬ ಆರೋಪಿ ಸಂಜೀವ ಭಜಂತ್ರಿ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ನ್ಯಾಯಾಧೀಶೆ ಶರ್ಮಿಳಾ, 'ಆರೋಪಿಯ ಮನೆಯಲ್ಲಿ ಬಂದೂಕು, ಗುಂಡುಗಳು ದೊರಕಿವೆ. ಅರ್ಜಿದಾರರಿಗೆ ಕ್ರಿಮಿನಲ್ ಹಿನ್ನೆಲೆ ಇರುವುದರಿಂದ ಜಾಮೀನು ನೀಡುವುದು ಸೂಕ್ತವಲ್ಲ' ಎಂದು ಅರ್ಜಿಗಳನ್ನು ವಜಾಗೊಳಿಸಿದರು.












Click it and Unblock the Notifications