ನೆರೆ ಪರಿಹಾರ ನೀಡಲು ಹಣದ ತೊಂದರೆ ಇಲ್ಲ ಎಂದ ಸಿಎಂ
ಹುಬ್ಬಳ್ಳಿ, ಅಕ್ಟೋಬರ್ 26: "ಇತಿಹಾಸದಲ್ಲೇ ಮನೆ ಕಳೆದುಕೊಂಡವರಿಗೆ 95 ಸಾವಿರ ಯಾರೂ ಕೊಟ್ಟಿಲ್ಲ. ನಾವು ಮಾಡಿಕೊಟ್ಟ ಅನುಕೂಲವನ್ನೂ ಯಾರು ಮಾಡಿಕೊಟ್ಟಿಲ್ಲ" ಎಂದು ಹೇಳಿದ್ದಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಇಂದು ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರ ಸಭೆಗೆ ವಿಮಾನನಿಲ್ದಾಣಕ್ಕೆ ಬಂದಿಳಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನೆರೆ ಪರಿಹಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ನೆರೆ ಪರಿಹಾರಕ್ಕೆ ಹಣದ ತೊಂದರೆ ಇಲ್ಲ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ರಾಜ್ಯದ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಮನೆ ಕಟ್ಟಲು 5ಲಕ್ಷ ಪರಿಹಾರ ಧನ ನಿಗದಿ ಮಾಡಲಾಗಿದೆ. ಭಾಗಶಃ ಮನೆ ಹಾನಿಗೆ 1 ಲಕ್ಷ ಹಣವನ್ನು ನೀಡಲಾಗುತ್ತಿದೆ. ಇದುವರೆಗೂ ಸರ್ಕಾರದಿಂದ 1200 ಕೋಟಿ ಪರಿಹಾರ ಧನ ಬಿಡುಗಡೆ ಮಾಡಿ ನೆರೆ ಪರಿಹಾರ ಕೈಗೊಳ್ಳಲಾಗಿದೆ" ಎಂದು ಉತ್ತರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆ ಕಾರಣ ಹೇಳಿದ ಬಿಎಸ್ ವೈ
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಯಡಿಯೂರಪ್ಪ, "ಒಮ್ಮೆ ಐದು ವರ್ಷ ಅಧಿಕಾರ ವಹಿಸಿಕೊಂಡವರು ಸಹಜವಾಗಿ ಮರಳಿ ಅಧಿಕಾರಕ್ಕೆ ಬರೋದು ಕಷ್ಟ. ಅದನ್ನು ಪ್ರಧಾನಿ ಮೋದಿಯವರೇ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕೆ ನೆರೆ ಪರಿಹಾರದ ವಿಷಯ ಒಂದು ಕಾರಣವಲ್ಲ. ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ? ಅಲ್ಲಿ ನಾಯಕತ್ವವೇ ಇಲ್ಲ, ಯಾರು ಹೇಳೋರು ಕೇಳೋರು ಇಲ್ಲ. ಕಾಂಗ್ರೆಸ್ ಮುಕ್ತ ಮಾಡೋ ಕಾಲ ಬಹಳ ದೂರ ಇಲ್ಲ ಅನ್ನಿಸುತ್ತೆ" ಎಂದಷ್ಟೆ ಉತ್ತರಿಸಿದರು.
ಕಾರ್ಯಕರ್ತರ ಬಾಯಿಗೆ ರಿವಾಲ್ವರ್: ಮನನೊಂದು BSY ಗೆ ಗೌಡರ ಪತ್ರ
ಸಿದ್ದರಾಮಯ್ಯಗೆ ಕುಟುಕಿದ ಸಿಎಂ
ಸಿದ್ದರಾಮಯ್ಯ ಅವರಿಗೆ ಸಾವರ್ಕರ್ ಬಗ್ಗೆ ಏನೂ ಗೊತ್ತಿಲ್ಲ. ಆದರೂ ಮನಬಂದಂತೆ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ, ಮಾಜಿ ಸಿಎಂ ಆಗಿ ಸ್ಪೀಕರ್ ಬಗ್ಗೆ ಹೀಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅವರು ನಾಡಿನ ಜನರ ಕ್ಷೆಮೆ ಕೇಳಬೇಕು. ಇಲ್ಲವಾದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ
ಅನರ್ಹರ ಸೇರ್ಪಡೆ ಬಗ್ಗೆ ಸಭೆಯಲ್ಲಿ ತೀರ್ಮಾನ
ಬಿಜೆಪಿ ಕೋರಂ ಕಮೀಟಿ ಸಭೆಗೂ ಮುನ್ನ ಉತ್ತರ ಕರ್ನಾಟಕದ ಏಳು ಅನರ್ಹ ಶಾಸಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಾತನಾಡಿ, ಉಪಚುನಾವಣೆಗೆ ತಯಾರಿ ನಡೆಯುತ್ತಿದೆ. ಅನರ್ಹ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿ ಟಿಕೇಟ್ ಹಂಚಲಾಗುತ್ತದೆ. ಭಿನ್ನಮತ ಬಂಡಾಯ ಶಮನದ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನದ ಸಭೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ನಡೆಯುವುದಾಗಿ ತಿಳಿಸಿದರು.
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಅನ್ನುವುದು ಬರೀ ಗಾಳಿಸುದ್ದಿ ಎಂದ ಸಿದ್ದರಾಮಯ್ಯ
ಬಿಜೆಪಿಯ ಹಲವು ನಾಯಕರ ಉಪಸ್ಥಿತಿ
ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ನಾಯಕರ ಸಭೆ ಹಾಗೂ ಕೋರಂ ಕಮಿಟಿ ಸಭೆ ಶುರುವಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಿಎಂ ಬಿಎಸ್ ವೈ, ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಬಸವರಾಜ ಬೊಮ್ಮಯಿ, ಸಿಸಿ ಪಾಟೀಲ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಚುನಾವಣಾ ತಯಾರಿ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸಲಿದ್ದಾರೆ. ಅನರ್ಹ ಶಾಸಕರ ಕ್ಷೇತ್ರಗಳ ಚುನಾವಣೆ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ನಡೆಸಿ ಸಂಜೆಗೆ ಬಿಜೆಪಿ ಕೋರಂ ಕಮೀಟಿ ಸಭೆ ನಡೆಯಲಿದೆ.