ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ಯೋಜನೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ, ಸೆಪ್ಟೆಂಬರ್, 29: ಅಂಕೋಲಾ ರೈಲು ಮಾರ್ಗ ಅಭಿವೃದ್ಧಿಗೆ ಪೂರಕ ಆಗಲಿದೆ. ಅಲ್ಲದೇ ಗೋವಾ, ಕಾರವಾರ ಹಾಗೂ ಮಂಗಳೂರು ಬಂದರುಗಳಿಂದ ವಿದೇಶ ವ್ಯಾಪಾರಕ್ಕೆ ಸಹಕಾರಿ ಆಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಇಂದು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕುರಿತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತಜ್ಞರ ತಂಡದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆಯನ್ನು ಮಾಡಲಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು, ಈ ಮಾರ್ಗದಿಂದ ಸಾರಿಗೆ ವೆಚ್ಚ ಸಹ ತಗ್ಗಲಿದೆ. ದೇಶದ ದೊಡ್ಡದಾದ ಸೀಬರ್ಡ್ ನೌಕಾ ನೆಲೆಗೆ ಉಪಯುಕ್ತ ಆಗಲಿದೆ. ಜಾಗತಿಕ ಮಟ್ಟದಲ್ಲಿ ದೇಶದ ಉತ್ಪನ್ನಗಳು ಗುರುತಿಸಿಕೊಳ್ಳಲು ಮತ್ತು ವಹಿವಾಟು ನಡೆಸಲು ಈ ರೈಲ್ವೆ ಮಾರ್ಗ ಅವಶ್ಯಕವಾಗಿ ಬೇಕಾಗಿದೆ. ಲಾಜಿಸ್ಟಿಕ್ ವೆಚ್ಚವು ಬೇರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಚ್ಚಾಗಿದೆ ಎಂದರು.
ಅಧಿಕಾಗಳ ಅಭಿಪ್ರಾಯಗಳು ಏನು?
ಅರಣ್ಯ ಸಂಪತ್ತು, ವನ್ಯ ಮೃಗಗಳು, ಜಲಚರಗಳಿಗೆ ಆದ್ಯತೆ ಇರಬೇಕು. ನಮ್ಮ ದೇಶದ ಆರ್ಥಿಕತೆಯು 2025ಕ್ಕೆ 5 ಟ್ರಿಲಿಯನ್ ಮತ್ತು 2047ಕ್ಕೆ 32 ಟ್ರಿಲಿಯನ್ ಡಾಲರ್ 10 ಪಟ್ಟು ಹೆಚ್ಚಾಗಬೇಕಿದೆ. ದೇಶವು ಜಗತ್ತಿನಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಕೈಗಾರಿಕೆಗಳು, ಉದ್ಯೋಗಾವಕಾಶ ಸೇರಿದಂತೆ ಇತರೆ ಜನರ ಅವಶ್ಯಕತೆಗಳನ್ನು ಪೂರೈಸಬೇಕಾಗಿದೆ. ರೈಲು ಮಾರ್ಗದ ಕುರಿತು ತಂಡದೊಂದಿಗೆ ಚರ್ಚಿಸಲಾಗಿದೆ ಎಂದರು.

ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಮಾತನಾಡಿ, ಈ ರೈಲು ಮಾರ್ಗದ ಕುರಿತಂತೆ ಈಗಾಗಲೇ 20 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತಂಡದ 7 ಜನ ಸದಸ್ಯರಲ್ಲಿ ಅರ್ಜಿಗಳನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ. ಜಿಲ್ಲಾಡಳಿತವು ತಂಡಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಶೆಟ್ಟರ್, ಕೇಂದ್ರ ಹವಾಮಾನ ಸಚಿವಾಲಯದ ವನ್ಯಜೀವಿ ವಿಭಾಗದ ಡಿಐಜಿ ರಾಕೇಶ್ ಜಗೇನಿಯಾ, ಉಪ ನಿರ್ದೇಶಕ ರಾಜೇಂದ್ರ ಕುಮಾರ್, ವಿಜ್ಞಾನಿ ಟಿ.ಎನ್. ಮನೋಹರ, ವನ್ಯಜೀವಿ ಮಂಡಳಿ ಸದಸ್ಯ ಪ್ರೊ. ಸುಕುಮಾರ, ಡಾ.ಎಚ್.ಎಸ್. ಸಿಂಗ್, ಡಾ.ಜಿ.ವಿ.ಗೋಪಿ, ಧಾರವಾಡ ಐಐಟಿ ಪ್ರೊ. ನಾಗೇಶ ಅಯ್ಯರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications