ಹು-ಧಾ ಎಸ್ಸಿ, ಎಸ್ಟಿ ಸಮುದಾಯದ 45 ಕೋಟಿ ನೀರಿನ ಬಿಲ್ ಬಾಕಿ ಮನ್ನಾ
ಹುಬ್ಬಳ್ಳಿ, ಜುಲೈ 12: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರು ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅದೇನು ಅಂತೀರಾ? ಕೊಳೆಗೇರಿ ವಾಸಿಗಳು ಹಾಗೂ ಎಸ್ ಸಿ-ಎಸ್ ಟಿ ವರ್ಗದವರ ಕುಡಿಯವ ನೀರಿನ ಬಿಲ್ ಬಾಕಿಯನ್ನು ಮನ್ನಾ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಈಗಾಗಲೇ ಹಲವು ಭಾಗ್ಯಗಳನ್ನು ಕಲ್ಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಚುನಾವಣೆ ಗುಂಗಿನಲ್ಲಿ ಈ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಎಸ್ಸಿ, ಎಸ್ಟಿ ಮತ್ತು ಕೊಳಗೇರಿ ಪ್ರದೇಶಗಳು, ರೈತಾಪಿ ಜನರು ವಾಸಿಸುವ ಗ್ರಾಮೀಣ ಜನರು ಹೊಂದಿರುವ ನೀರಿನ ಬಾಕಿ ಮೊತ್ತ ಹಾಗೂ ಕುಟುಂಬಗಳ ಬಗ್ಗೆ ಮಾಹಿತಿ ನೀಡುವಂತೆ ಕಳೆದ ತಿಂಗಳು ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ಜಲಮಂಡಳಿಗೆ ನಿರ್ದೇಶನ ನೀಡಿದೆ.

ನಲವತ್ತೈದು ಕೋಟಿ ರುಪಾಯಿ ಮನ್ನಾ
ಇಲಾಖೆಯ ಸೂಚನೆಯಂತೆ ಒಂದು ತಿಂಗಳಿಂದ ಜಲಮಂಡಳಿಯ ಹುಬ್ಬಳ್ಳಿ ಮತ್ತು ಧಾರವಾಡ ವಿಭಾಗದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ದೊರೆತ ಮಾಹಿತಿ ಪ್ರಕಾರ ಅವಳಿ ನಗರದಲ್ಲಿ ನಳ ಸಂಪರ್ಕ ಹೊಂದಿರುವವರ ಶೇ. 37ರಷ್ಟು ಕುಟುಂಬಗಳ 45 ಕೋಟಿ ರುಪಾಯಿ ಬಾಕಿ ಇದೆ ಎಂದು ಅಂದಾಜಿಸಿದೆ.
ಹೊಂದಾಣಿಕೆ ಹೇಗೆ?
ಖರ್ಚಾಗದೇ ಉಳಿದಿರುವ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ವಿಶೇಷ ಘಟಕ ಯೋಜನೆ ಅನುದಾನವನ್ನು ಈ ನೀರಿನ ಬಿಲ್ ಮನ್ನಾ ಯೋಜನೆಗೆ ಬಳಸಿಕೊಳ್ಳುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಸರಕಾರ ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಥದ್ದೊಂದು ಪ್ರಯೋಗ ಮಾಡಿ, ನೀರಿನ ಬಿಲ್ ಮನ್ನಾ ಮಾಡಿದೆ.
ಅಷ್ಟೇ ಅಲ್ಲ, ಹತ್ತು ಲೀಟರ್ ನೀರು ಪುಕ್ಕಟೆ ಪೂರೈಸಲು ವಾಗ್ದಾನ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಮಾಹಿತಿ ಕಷ್ಟ
ಎಸ್ಸಿ, ಎಸ್ಟಿ ಮತ್ತು ಕೊಳಗೇರಿ ಪ್ರದೇಶಗಳ ನಿವಾಸಿಗಳ ನೀರಿನ ಬಿಲ್ ಬಗ್ಗೆ ಮಾಹಿತಿ ಸಂಗ್ರಹಿಸಿ, ಪ್ರಸ್ತಾವ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದ್ದು ನಿಜ. ಆದರೆ ಎಸ್ಸಿ, ಎಸ್ಟಿ ಸಮುದಾಯದವರೇ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಬಗ್ಗೆ ಖಚಿತವಾಗಿ ಗುರುತಿಸುವುದು ಕಷ್ಟಸಾಧ್ಯ.
ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ.












Click it and Unblock the Notifications