ಮಾತೆ ಮಹಾದೇವಿ ವಿರುದ್ಧ ಹುಬ್ಬಳ್ಳಿ ವೀರಶೈವ ಯುವ ವೇದಿಕೆ ಪ್ರತಿಭಟನೆ
ಹುಬ್ಬಳ್ಳಿ, ಜುಲೈ 31 : ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯ ಮಾಡುತ್ತಿರುವ ಮಾತೇ ಮಹಾದೇವಿ ಅವರು ವೀರಶೈವರು, ಪಂಚಪೀಠಗಳ ಪರಂಪರೆಯನ್ನು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಪಕರಾದ ಹಾನಗಲ್ ಕುಮಾರ ಶಿವಯೋಗಿಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಯುವ ವೇದಿಕೆ ಹುಬ್ಬಳ್ಳಿ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಬೀದರ್ : ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆಗಾಗಿ ಹೋರಾಟ
ನಗರದ ದುರ್ಗದ ಬೈಲ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮೇದಾರ ಓಣಿ, ದಾಜಿಬಾನಪೇಟೆ ಮೂಲಕ ಕಿತ್ತೂರು ಚನ್ನಮ್ಮ ವೃತ್ತದಿಂದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜಮಾವಣೆಗೊಂಡಿತು. ಪ್ರತಿಭಟನಾ ನಿರತ ವೀರಶೈವ ಯುವ ವೇದಿಕೆ ಕಾರ್ಯಕರ್ತರು ಮಾತೆ ಮಹಾದೇವಿ ವಿರುದ್ಧ ಘೋಷಣೆ ಕೂಗಿದರಲ್ಲದೆ ಮಾತೆ ಮಹಾದೇವಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮಾತೆ ಮಹಾದೇವಿ ಅವರು ವೀರಶೈವರ ಹಾಗೂ ಅವರ ಆಚರಣೆ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಬಸವಣ್ಣನ ವಚನಗಳನ್ನು ಕೃತಿಚೌರ್ಯ ಮಾಡಿ ಸಮುದಾಯದಿಂದ ತಿರಸ್ಕೃತಗೊಂಡಿದ್ದ ಇವರು ಸನಾತನ ವೀರಶೈವ ಧರ್ಮವನ್ನು ಒಡೆಯುವ ಹುನ್ನಾರದಲ್ಲಿ ತೊಡಗಿದ್ದಾರೆ.
ಮುಖ್ಯವಾಗಿ ಮಾತೆ ಮಹಾದೇವಿಗೆ ಸ್ವಾಮಿಯಾಗುವ ಅರ್ಹತೆಯೇ ಇಲ್ಲ. ಇದನ್ನೇ ಹೇಳಿದ ಬಾಳೆಹೊನ್ನೂರು ಪೀಠದ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಸ್ವಾಮೀಜಿ ಅವರ ವಿರುದ್ಧ ಅವರ ಬೆಂಬಲಿಗರು ಕಿಡಿ ಕಾರುತ್ತಿದ್ದಾರೆ.
ವೀರಶೈವರು ಯಾರು? ಲಿಂಗಾಯತರು ಯಾರು? (ಒಂದು ವಿಚಾರ ಮಂಥನ)
ಅವರ ಪೋಟೊಕ್ಕೆ ಅವಮಾನ ಮಾಡುವ ಮೂಲಕ ಸಮುದಾಯದ ಗೌರವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಇದನ್ನು ವೀರಶೈವ ಯುವ ವೇದಿಕೆ ಖಂಡಿಸುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಮಾತೆ ಮಹಾದೇವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.