ಹುಬ್ಬಳ್ಳಿ: 50ನೇ ದಿನಕ್ಕೆ ಕಾಲಿಡಲಿರುವ ಬಿಜೆಪಿ ಪರಿವರ್ತನಾ ಯಾತ್ರೆ
ಹುಬ್ಬಳ್ಳಿ, ಡಿಸೆಂಬರ್ 20: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕರ್ನಾಟಕ ರಾಜ್ಯ ಬಿಜೆಪಿಗೆ ಹೊಸ ಹುರುಪು ನೀಡಿದೆ. ಈ ಉತ್ಸಾವನ್ನು ಮತ್ತಷ್ಟು ಹೆಚ್ಚಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯಕ್ಕೆ ಬರುತ್ತಿದ್ದಾರೆ.
ನಾಳೆ (ಡಿಸೆಂಬರ್ 21)ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಪರಿವರ್ತನಾ ಯತ್ರೆಯಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಬಿಜೆಪಿಯ ಪ್ರಚಾರಕ್ಕೆ ಇನ್ನಷ್ಟು ಉತ್ಸಾಹ ತುಂಬಲು ಯೋಗಿ ಆದಿತ್ಯಾನಥ ಅವರನ್ನು ಬಿಜೆಪಿ ಸ್ಟಾರ್ ಪ್ರಚಾರಕರನ್ನಾಗಿ ಕರೆಸಿಕೊಳ್ಳುತ್ತಿದೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಆಯೋಜಿಸಲಾಗಿರುವ ಪರಿವರ್ತನಾ ಯಾತ್ರೆಯಲ್ಲಿ ಯೋಗಿ ಆದಿತ್ಯನಾಥ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಪರಿಣಾಮಕಾರಿ ಭಾಷಣಕ್ಕೆ ಹೆಸರುವಾಸಿಯಾಗಿರುವ ಆದಿತ್ಯನಾಥ ಅವರು ಕಾಂಗ್ರೆಸ್ ವಿರುದ್ಧ ಯಾವ ವಿಷಯವನ್ನು ಇಟ್ಟುಕೊಂಡು ಛಾಟಿ ಬೀಸಲಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚಾಗಿರುವ ಕೋಮು ಗಲಭೆ, ಹಿಂದೂಗಳ ಹತ್ಯೆ ವಿಷಯಗಳೆ ಅವರ ಭಾಷಣದ ಪ್ರಮುಖ ವಿಷಯಗಳಾಗಿರಲಿವೆ ಎಂದು ಅಂದಾಜಿಸಲಾಗಿದೆ.
ಮಹದಾಯಿ ವಿವಾದಕ್ಕೆ ತೆರೆ?
ನಾಳಿನ ಪರಿವರ್ತನಾ ಯಾತ್ರೆ ಯೋಗಿ ಆದಿತ್ಯನಾಥ ಹೊರತಾಗಿ ಮತ್ತೊಂದು ವಿಷಯಕ್ಕೆ ಕುತೂಹಲ ಕೆರಳಿಸಿದೆ. ಅದೆಂದರೆ ಮಹದಾಯಿ ವಿವಾದ.

ಇಂದು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಹುಬ್ಬಳ್ಳಿ ಸಂಸದ ಪ್ರಹ್ಲಾದ್ ಜೋಷಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರೊಂದಿಗೆ ಸೇರಿ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಅವರೊಂದಿಗೆ ಮಾತುಕತೆಗೆ ತೆರಳಿದ್ದು, ಮಹಾದಾಯಿ ವಿವಾದ ಇತ್ಯರ್ಥ ಮಾಡುವ ಸಲುವಾಗಿ ಈ ಮಾತುಕತೆ ಆಯೋಜಿಸಲಾಗಿದೆ. ಆ ವಿಷಯವನ್ನು ನಾಳಿನ ಯಾತ್ರೆಯಲ್ಲಿ ಘೋಷಿಸಲಾಗುತ್ತದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆ ಪ್ರಾರಂಭಕ್ಕೆ ಮೊದಲೇ ಮಹದಾಯಿ ವಿವಾದವನ್ನು ಬಗೆಹರಿಸುವುದಾಗಿ ಮಾತು ನೀಡಿದ್ದರು. ಇದೀಗ ಉತ್ತರ ಕರ್ನಾಟಕಕ್ಕೆ ಪರಿವರ್ತನಾ ಯಾತ್ರೆ ಪ್ರವೇಶಸಿದ್ದು, ಮಹಾದಾಯಿ ವಿವಾದ ಪರಿಹರಿಸಿಯೇ ಉತ್ತರ ಕರ್ನಾಟಕ ಪ್ರವೇಶಿಸುವ ಇರಾದೆಯಲ್ಲಿ ಯಡಿಯೂರಪ್ಪ ಇದ್ದಾರೆ.












Click it and Unblock the Notifications