ನ್ಯಾ. ಜಯಂತ್ ಪಟೇಲರ ವರ್ಗಾವಣೆ ಹಿಂದೆ ಕೇಂದ್ರದ ಪಿತೂರಿ : ಹಿರೇಮಠ
ಹುಬ್ಬಳ್ಳಿ, ಅಕ್ಟೋಬರ್ 1: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಜಯಂತ್ ಪಟೇಲ್ ವರ್ಗಾವಣೆ ಹಿಂದೆ ಕೇಂದ್ರ ಸರ್ಕಾರದ ಕುತಂತ್ರವಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಂತ್ ಪಟೇಲ್ ರನ್ನು ಅಲಹಾಬಾದ್ ಹೈಕೋರ್ಟಿನ 3ನೇ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಿದ್ದು ಖಂಡನೀಯ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಈ ನಿರ್ಣಯ ಮಾಡಿದ್ದು, ಈ ನಿರ್ಣಯದ ಹಿಂದೆ ಕೇಂದ್ರ ಸರ್ಕಾರದ ಕುತಂತ್ರವಿದೆ ಎಂದು ಆರೋಪಿಸಿದರು.

ಜಯಂತ್ ಪಟೇಲ್ ವರ್ಗಾವಣೆಯಿಂದ ನ್ಯಾಯಾಂಗದ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕಿದಂತಾಗಿದೆ. ನ್ಯಾಯಾಧೀಶರ ವರ್ಗಾವಣೆ ಖಂಡಿಸಿ ಬೆಂಗಳೂರಿನ ನ್ಯಾಯವಾದಿಗಳು ಅಕ್ಟೋಬರ್ 4 ರಂದು ಕಾರ್ಯಕಲಾಪ ಬಹಿಷ್ಕರಿಸಿರುವುದನ್ನು ಸಮಾಜ ಪರಿವರ್ತನಾ ಸಮುದಾಯ ಬೆಂಬಲಿಸಲಿದೆ ಎಂದರು.
ಆಡಳಿತರೂಢ ಕಾಂಗ್ರೆಸ್ ಸರ್ಕಾರ ಅರಣ್ಯ ಭೂಮಿ ಕಬಳಿಕೆಗೆ ಕುಮ್ಮಕ್ಕು ನೀಡುತ್ತಿದೆ. ಅರಣ್ಯ ಇಲಾಖೆ ಭೂಮಿಯನ್ನು ಬೇರೆ ಚಟುವಟಿಕೆಗಳಿಗೆ ಪರಭಾರೆ ಮಾಡಿಕೊಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಕಿಡಿಕಾರಿದರು.
ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಮದನ ಗೋಪಾಲ್ ಕಾನೂನು ಬಾಹಿರವಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಳ್ಳ ತಾಲೂಕಿನ ಜೀನೂರು ವ್ಯಾಪ್ತಿಯ ಬ್ಲಾಕ್ ಅರಣ್ಯ ಪ್ರದೇಶವನ್ನು ಕಂದಾಯ ಭೂಮಿಯಾಗಿ ಪರಿವರ್ತನೆಗೆ ಮಾಡಿ ಅದೇಶ ಮಾಡಿದ್ದಾರೆ.
ನಿವೃತ್ತಿಗೆ ಇನ್ನು ಎರಡು ವಾರ ಇರುವಾಗ ಅದೇಶ ಮಾಡಿದ್ದಾರೆ ಇದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಅರಣ್ಯ ಭೂಮಿಯನ್ನ ಕಂದಾಯ ಭೂಮಿಯಾನ್ನಾಗಿ ಪರಿವರ್ತನೆ ಮಾಡಿ ಆದೇಶ ಮಾಡಿದ್ದು, ಇದು ಸುಪ್ರೀಂಕೋರ್ಟ್ ಅದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಎಂದು ಹಿರೇಮಠ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸಲು ಈ ರೀತಿ ಭೂಮಿ ಪರಿವರ್ತನೆ ಮಾಡಲಾಗಿದೆ. ಇದರ ಹಿಂದೆ ಹಲವಾರು ದೊಡ್ಡ ರಾಜಕಾರಣಿಗಳ ಕೈವಾಡ ಇದೆ . ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿರೇಮಠ ಒತ್ತಾಯಿಸಿದ್ದಾರೆ.












Click it and Unblock the Notifications