ಕ್ರಿಕೆಟ್ ಬೆಟ್ಟಿಂಗ್ : ಹುಬ್ಬಳ್ಳಿಯಲ್ಲಿ ಮತ್ತೆ ಮೂವರ ಬಂಧನ
ಹುಬ್ಬಳ್ಳಿ, ಸೆ. 30 : ಬೆಳಗಾವಿ ಪ್ಯಾಂಥರ್ಸ್ ಮತ್ತು ಮಂಗಳೂರು ಯುನೈಟೆಡ್ ಪಂದ್ಯದ ವೇಳೆ ವಿಐಪಿ ಗ್ಯಾಲರಿಯಲ್ಲಿ ಕುಳಿತುಕೊಂಡು ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರನ್ನು ಗುರುವಾರ ರಾತ್ರಿ ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ಸುದೀಪ ರಾವತ್ (35), ದೀರತಸಿಂಗ್ ರಾಮ್ (34), ಸೇತುರಾಮ್ ಗರ (40) ಬಂಧಿತ ಆರೋಪಿಗಳು. ಬಂಧಿತರಿಂದ ಮೂರು ಮೊಬೈಲ್ ಹಾಗೂ 3,050 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.[ಕೆಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಹುಬ್ಬಳ್ಳಿಯಲ್ಲಿ ನಾಲ್ವರ ಬಂಧನ]

ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯು ಸೋನಿ ಇಎಸ್ ಪಿಎನ್ ಚಾನೆಲ್ ನಲ್ಲಿ ನೇರ ಪ್ರಸಾರವಾಗುತ್ತಿದ್ದು, ಆದರೆ ಪಂದ್ಯದ ನೇರಪ್ರಸಾರ 2 ರಿಂದ 3 ನಿಮಿಷ ತಡವಾಗಿ ಪ್ರಸಾರವಾಗುತ್ತದೆ.
ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಕ್ರೀಡಾಂಗಣದಲ್ಲಿಯೇ ಕುಳಿತುಕೊಂಡು ಮೊಬೈಲ್ ಮೂಲಕ ಪಂದ್ಯಾವಳಿಯ ವಿವರ ನೀಡುತ್ತಿದ್ದರೆನ್ನಲಾಗಿದೆ.
ಈ ಹಿಂದೆ ಸೆ. 22 ರಂದು ಹರಿಯಾಣದ ನಾಲ್ವರನ್ನು ಬೆಟ್ಟಿಂಗ್ ಆಡುವ ವೇಳೆ ಅಶೋಕ ನಗರ ಪೊಲೀಸರು ಬಂಧಿಸಿದ್ದರು. ಆ ಆರೋಪಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ.
ಕಳ್ಳರಿಬ್ಬರ ಬಂಧನ:
3 ಲಕ್ಷ ರು. ಮೌಲ್ಯದ ಸೀರೆಗಳನ್ನು ಕಳ್ಳತನ ಮಾಡಿದ್ದ ರಾಜಸ್ಥಾನ ಮೂಲದ ಇಬ್ಬರು ಕಳ್ಳರನ್ನು ಗುರುವಾರ ಸ್ಥಳೀಯ ಘಂಟಿಕೇರಿ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದವರಾದ ವಿನೋಭಾನಗರದ ಸುಜಾರಾಮ ದೇವಾ ಮತ್ತು ಟಾಟಾ ಏಸ್ ವಾಹನ ಚಾಲಕ ಮಂಗಲಾರಾ ಪಟೇಲ್ ಬಂಧಿತ ಆರೋಪಿಗಳು. ಇವರು ಸನ್ಮಾನ ಕಾಲೋನಿಯ ನೀಲಂ ಸಾರೀಸ್ ಎಂಬ ಅಂಗಡಿಯ ಕೀಲಿ ಮುರಿದು ಸೀರೆಗಳನ್ನು ಕಳ್ಳತನ ಮಾಡಿದ್ದರು.
ಈ ಕುರಿತು ಅಂಗಡಿಯ ಮಾಲೀಕ ಬಾಬುಸಿಂಗ್ ರಜಪೂತ ದೂರು ದಾಖಲಿಸಿದ್ದರು. ಬಂಧಿತರು ಕದ್ದ ಸೀರೆಗಳನ್ನು ಇಲ್ಲಿಯ ವೀರಾಪೂರ ಓಣಿಯ ಬಾಡಿಗೆ ಮನೆಯಲ್ಲಿ ಇರಿಸಿದ್ದರು. ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.











Click it and Unblock the Notifications