ಸಂಸದ ಪ್ರಹ್ಲಾದ್ ಜೋಶಿಗೆ ಕೊಲೆ ಬೆದರಿಕೆ ಪತ್ರ
ಹುಬ್ಬಳ್ಳಿ, ಫೆಬ್ರವರಿ 03: ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಮಂಜುನಾಥ ಎಂಬ ಹೆಸರಿನಿಂದ ಕೊಲೆ ಬೆದರಿಕೆ ಪತ್ರವೊಂದು ಬಂದಿದೆ.
ನಮ್ಮ vk ಬಾಸ್ ಹೆಸರು ಬಳಸಿ ರಾಜಕೀಯ ಮಾಡಬೇಡ, ಅವರ ತಂಟೆಗೆ ಬರಬೇಡ. ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಪತ್ರದಲ್ಲಿ ಉಲ್ಲೇಖಿಸಲಾದ 'ವಿಕೆ' ಎಂದರೆ ಸಚಿವ ವಿನಯ್ ಕುಲಕರ್ಣಿ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಸಂಸದ ಪ್ರಲ್ಹಾದ್ ಜೋಶಿ ಸುಳ್ಳಿನ ಸರದಾರ: ವಿನಯ ಕುಲಕರ್ಣಿ
'ಹುಷಾರಾಗಿರು ಇಲ್ಲಾಂದ್ರೆ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡಗೆ ಆದ ಗತಿಯೂ ನಿನಗೂ ಆಗುತ್ತದೆ' ಎಂದು ಪತ್ರದಲ್ಲಿ ಬರೆಯಲಾಗಿದೆ. ಪತ್ರದ ಲಕೋಟೆ ಮೇಲೆ ಮಂಜುನಾಥ ಎಂಬ ಹೆಸರು ಇದೆ.
ಪತ್ರ ಬಂದ ಕೂಡಲೇ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೂ ಕೂಡ ಬೆದರಿಕೆ ಬಂದಿತ್ತು.
ಈ ಮುಂಚೆ ತನ್ವಿರ್ ಸೇಠ್, ಕಂಗ್ರೆಸ್ನ ಎಚ್.ಎಂ.ರೇವಣ್ಣ, ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರುಗಳಿಗೂ ಕೊಲೆ ಬೆದರಿಕೆ ಬಂದಿತ್ತು.
ಬೆದರಿಕೆ ಪತ್ರದ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ 'ಯೋಗೇಶ್ ಗೌಡ ಕೇಸಿಗೆ ಸಂಬಂಧಪಟ್ಟಂತೆ ಈ ಮುಂಚೆ ಕೂಡ ಹಲವು ಪತ್ರಗಳು ಬಂದಿದ್ದವು. ಲಷ್ಕರ್-ಎ-ತೊಯಿಬಾ ಹೆಸರಿನಲ್ಲಿ ಕೂಡ ಪತ್ರಗಳು ಬಂದಿತ್ತು. ಅತ್ಯಂತ ಅವಾಚ್ಯವಾಗಿ ಆ ಪತ್ರಗಳನ್ನು ಬರೆದಿದ್ದರು' ಎಂದು ಅವರು ಹೇಳಿದ್ದಾರೆ.
ಈ ಮುಂಚೆಯೂ ನನಗೆ ಬೆದರಿಕೆ ಪತ್ರಗಳು ಬಂದಿತ್ತು ಆಗಲೂ ದೂರು ಮಾಡಿದ್ದೆ. ಆದರೆ ಆ ತನಿಖೆಯಲ್ಲಿ ಪ್ರಗತಿಯೇ ಆಗಿಲ್ಲ. ಈ ಬಾರಿಯಾದರೂ ಅಪರಾಧಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.