Vinay Kulkarni: ವಿನಯ್ ಕುಲಕರ್ಣಿ ಬೆಂಬಲಿಗರನ್ನು ಹೆದರಿಸುವ ಕಾರ್ಯ ನಡೆಯುತ್ತಿದೆ- ಪತ್ನಿ ಶಿವಲೀಲಾ ಆರೋಪ
ಧಾರವಾಡ, ಮೇ 04: ಯಾರೇ ವಿನಯ್ ಕುಲಕರ್ಣಿ ಅವರ ಪರ ಪ್ರಚಾರಕ್ಕೆ ಹೋದರೆ ಹಾಗೂ ವಿನಯ್ ಕುಲಕರ್ಣಿ ಅವರ ಸ್ಟೇಟಸ್ ಹಾಕಿಕೊಂಡರೆ ಅವರನ್ನು ಹೆದರಿಸುವ ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಆರೋಪಿಸಿದರು.
ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಮನೆ, ಮನೆ ಪ್ರಚಾರ ನಡೆಸಿ ಮಾತನಾಡಿದ ಅವರು, ಈ ಹೆದರಿಸುವ ಹಾಗೂ ಬೆದರಿಸುವ ಕಾರ್ಯ ಈಗಿನಿಂದಲ್ಲ ಮೊದಲಿನಿಂದಲೂ ನಡೆಯುತ್ತಲೇ ಇದೆ. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರು, ಪಾಲಿಕೆ ಸದಸ್ಯರಿಗೆ ತಾರತಮ್ಯ ಮಾಡಲಾಗುತ್ತಿದೆ. ಈ ಚುನಾವಣೆ ಬಂದಾಗ ಐಟಿ, ಇಡಿ ರೇಡ್ ನಡೆಸಲಾಗುತ್ತಿದೆ ಎಂದು ಶಿವಲೀಲಾ ಆರೋಪಿಸಿದರು.

ಕ್ಷೇತ್ರದ ಎಲ್ಲಡೆ ವಿನಯ್ ಕುಲಕರ್ಣಿ ಅವರ ಪರವಾದ ಅಲೆ ಇದೆ. ಜನ ವಿನಯ್ ಕುಲಕರ್ಣಿ ಅವರತ್ತ ಚಿತ್ತ ನೆಟ್ಟಿದ್ದಾರೆ. ಕಳೆದ ಬಾರಿ ಮಾಡಿದ ತಪ್ಪನ್ನು ಈ ಬಾರಿ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಕ್ಷೇತ್ರದ ಜನರಿಂದ ನಮಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ನನಗೆ ಹಾಗೂ ನನ್ನ ಮಕ್ಕಳಾದ ವೈಶಾಲಿ, ಹೇಮಂತನಿಗೆ ಜನ ಸ್ಪಂದಿಸಿ, ಪ್ರೀತಿಯಿಂದ ಕಾಣುತ್ತಿದ್ದಾರೆ ಎಂದರು.
ಇದಕ್ಕೂ ಮುನ್ನ ಶಿವಲೀಲಾ ಅವರು ಅಪಾರ ಬೆಂಬಲಿಗರೊಂದಿಗೆ ಕೋಟೂರಿನ ಮನೆ, ಮನೆಗೆ ತೆರಳಿ ವಿನಯ್ ಕುಲಕರ್ಣಿ ಭರ್ಜರಿ ಮತಶಿಕಾರಿ ನಡೆಸಿದರು. ಕೋಟೂರು ಗ್ರಾಮದಲ್ಲಿ ಶಿವಲೀಲಾ ಅವರಿಗೆ ಉತ್ತಮ ಜನಸ್ಪಂದನೆ ವ್ಯಕ್ತವಾಯಿತು.
ಬಿಜೆಪಿಯವರು ಮೀಸಲಾತಿ ಆಸೆ ಹುಟ್ಟಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ: ಮಾಜಿ ಸಂಸದ ಮಂಜುನಾಥ ಕುನ್ನೂರ
ಹುಬ್ಬಳ್ಳಿ: ಲಿಂಗಾಯತ ಮೀಸಲಾತಿ ವಿಚಾರ, ಬಿಜೆಪಿಯವರ ಸುಳ್ಳು ಭರವಸೆ ನೀಡಿದ್ದಾರೆ. 2D ಮೀಸಲಾತಿ ಹೆಸರಲ್ಲಿ ಕೇವಲ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಪಂಚಮಸಾಲಿ ಪೀಠದ ಸ್ವಾಮೀಜಿಗಳು ರಾಜಕೀಯ ಮಾಡುತ್ತಿದ್ದಾರೆಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಪೀಠ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೊಮ್ಮಾಯಿ ಕೈಯಲ್ಲಿದೆ. ಕೂಡಲಸಂಗಮ ಪೀಠ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೈಯಲ್ಲಿದೆ. ಸ್ವಾಮೀಜಿ ರಹಿತ ಸಮಾಜದ ಸಂಘಟನೆ ಕಟ್ಟಲು ಪ್ರಯತ್ನಿಸುತ್ತಿದ್ದೇವೆ. ಬಿಜೆಪಿಯವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದೀಪಕ ಚಿಂಚೋರೆ ಮತಬೇಟೆ
ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಅವರು ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಪ್ರಧ್ಯಾಪಕ ಬಳಗದವರನ್ನು ಭೇಟಿ ಮಾಡಿ ಭರ್ಜರಿ ಮತ ಬೇಟೆ ನಡೆಸಿದರು.
ದೀಪಕ ಚಿಂಚೋರೆ ಅವರು, ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಯೊಂದು ವಿಭಾಗ ಹಾಗೂ ಆಡಳಿತ ಕಚೇರಿಗೆ ಭೇಟಿ ನೀಡಿ ಪ್ರಾಧ್ಯಾಪಕರಿಂದ ಮತಯಾಚಿಸಿದರು. ಅಲ್ಲದೇ ಶಾಸಕನಾಗಿ ಆಯ್ಕೆ ಆಗಿದ್ದೇ ಆದಲ್ಲಿ ಪ್ರಾಧ್ಯಾಪಕರಿಗಿರುವ ಎಲ್ಲಾ ಸಮಸ್ಯೆಗಳಿಗೆ ಸಕಾರಾತ್ಮವಾಗಿ ಸ್ಪಂದಿಸುವ ಭರವಸೆ ನೀಡಿದರು.
ದೀಪಕ ಚಿಂಚೋರೆ ಅವರಿಗೆ ರಾಬರ್ಟ್ ದದ್ದಾಪುರಿ, ರವಿ ಮಾಳಗೇರ, ವಸಂತ ಅರ್ಕಾಚಾರ್, ಅಲಿ ಗೊರವನಕೊಳ್ಳ ಸೇರಿದಂತೆ ಅನೇಕರು ಸಾಥ್ ನೀಡಿದರು.












Click it and Unblock the Notifications