ಗಣೇಶ ವಿಸರ್ಜನೆ ದಿನವೇ ಈದ್ ಮಿಲಾದ್: ಮೆರವಣಿಗೆ ಮುಂದಕ್ಕೆ ಹಾಕಿದ ಅಂಜುಮನ್ ಕಮಿಟಿ
ಹುಬ್ಬಳ್ಳಿ, ಸೆಪ್ಟೆಂಬರ್ 20:ನಗರದಲ್ಲಿ ಶಾಂತಿ ಸೌಹಾರ್ದತೆಗಾಗಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಒಂದು ದಿನ ಮುಂದಕ್ಕೆ ಹಾಕಲು ಅಂಜುಮನ್ ಕಮಿಟಿ ನಿರ್ಧಾರ ಮಾಡಿದೆ.
ಸೆಪ್ಟೆಂಬರ್ 28ರಂದು ಮುಸ್ಲೀಮರ ಪವಿತ್ರ ಹಬ್ಬ ಈದ್ ಮಿಲಾದ್ ಹಬ್ಬವಿದ್ದು, ಅಂದೇ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆಗೆ ನಿರ್ಧರಿಸಲಾಗಿದೆ. ಹೀಗಾಗಿ ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಬೇಡ ಎಂದು ಅಂಜುಮನ್ ಕಮಿಟಿ ನಿರ್ಧರಿಸಿದ್ದು, ಸೆಪ್ಟೆಂಬರ್ 28ರ ಬದಲು ಸೆಪ್ಟೆಂಬರ್ 29ಕ್ಕೆ ಈದ್ ಮಿಲಾದ್ ಹಬ್ಬದ ಮೆರವಣಿಗೆಗೆ ನಿರ್ಧರಿಸಲಾಗಿದೆ. ಮುಸ್ಲಿಂ ಗುರುಗಳು ಹಾಗೂ ಅಂಜುಮನ್ ಕಮಿಟಿಯ 52 ಸದಸ್ಯರ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.

ಈ ಬಗ್ಗೆ ಅಂಜುಮನ್ ಕಮಿಟಿ ಅಧ್ಯಕ್ಷ ಯುಸೂಫ್ ಸವಣೂರ ಮಾತನಾಡಿದ್ದು, ಈದ್ ಮಿಲಾದ್ ನಮಗೆ ದೊಡ್ಡ ಹಬ್ಬ. ನಾವು 28ಕ್ಕೆ ಹಬ್ಬ ಮಾಡುತ್ತೇವೆ. ಆದರೆ 29ಕ್ಕೆ ಮೆರವಣಿಗೆ ಮಾಡುತ್ತೇವೆ ಎಂದು ಖಚಿತ ಪಡಿಸಿದ್ದಾರೆ.
ನಾವು ತ್ಯಾಗ ಮಾಡಿ ಮೆರವಣಿಗೆ ಮುಂದಕ್ಕೆ ಹೋಗಿದ್ದೇವೆ. ಆದರೆ ಮೆರವಣಿಗೆಗೆ ಯಾವದೇ ಸಮಯ ನಿರ್ಬಂಧ ಇರಬಾರದು ಎಂದು ಈಗಾಗಲೇ ಪೊಲೀಸರಿಗೆ ಹೇಳಿದ್ದೇವೆ. ಯಾಕೆಂದರೆ ನಾವು ಬಿಜೆಪಿ ಸರ್ಕಾರದಲ್ಲಿ ಬಹಳ ಅನುಭವಿಸಿದ್ದೇವೆ. ಶಾಂತಿ ಕಾರಣಕ್ಕಾಗಿ ನಾವು ಮೆರವಣಿಗೆ ಮುಂದಕ್ಕೆ ಹಾಕುತ್ತಿದ್ದೇವೆ. ಗಣೇಶ ವಿಸರ್ಜನೆ ವೇಳೆ ಪರಸ್ಪರ ಗಲಾಟೆ ಆಗಬಾರದು ಎನ್ನುವ ಕಾರಣಕ್ಕೆ ಮೆರವಣಿಗೆ ಮುಂದಕ್ಕೆ ಹಾಕಿದ್ದೇವೆ. ನಾವು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದೇವೆ. ಇದಕ್ಕೆ ನಮ್ಮ ಮುಸ್ಲಿಂ ಸಮುದಾಯ ಎಲ್ಲರೂ ಒಪ್ಪಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇನ್ನು ಈದ್ಗಾ ಮೈದಾನದ ಹೋರಾಟದ ಬಗ್ಗೆ ಮಾತನಾಡಿದ ಅವರು,ಈ ಹೋರಾಟ ಇನ್ನೂ ಮುಗಿದಿಲ್ಲ. ಸುಮ್ಮನೆ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲಿ ಪಾಲಿಕೆ ಅನುಮತಿ ಕೊಟ್ಟಿದೆ. ಆದರೆ ಪ್ರಕರಣ ಮುಗಿದಿಲ್ಲ. ಆರು ವಾರಗಳ ಸಮಯ ಕೊಟ್ಟಿದ್ದಾರೆ. ನಾವು ಮತ್ತೆ ಕೇಸ್ ನಡೆಸುತ್ತೇವೆ ಎಂದರು.
ಈ ವಿಚಾರದಲ್ಲಿ ಹುಬ್ಬಳ್ಳಿಯ ಎಲ್ಲಾ ಶಾಸಕರು ರಾಜಕಾರಣ ಮಾಡುವುದು ಬೇಡ. ನಮಗೆ ಶಾಶ್ವತ ಪರಿಹಾರ ಬೇಕು. ಮೂರು ಸಾವಿರ ಮಠದ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಬಳಿ ಹೋಗೋಣ.ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಭೇಟಿಯಾಗಿ ಪರಿಹಾರ ಮಾಡಿ ಎಂದು ಕೇಳೋಣ ಎಂದು ಯುಸೂಫ್ ಸವಣೂರ ಹೇಳಿದ್ದಾರೆ.












Click it and Unblock the Notifications