ಹುಬ್ಬಳ್ಳಿ ಸೌಂದರ್ಯ ಹೆಚ್ಚಿಸುತ್ತಿದೆ ರೆವಲ್ಯೂಷನ್ ಮೈಂಡ್ಸ್ ಯುವ ಪಡೆಯ ವಿನೂತನ ಕಾರ್ಯ
ಹುಬ್ಬಳ್ಳಿ, ನವೆಂಬರ್ 25: ಕರ್ನಾಟಕದಲ್ಲಿ ಮಹಾನಗರಗಳಲ್ಲಿ ಹುಬ್ಬಳ್ಳಿ ಕೂಡ ಒಂದು. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಹುಬ್ಬಳ್ಳಿ ಉತ್ತರ ಕರ್ನಾಟಕ ಜನರ ಅವಿಭಾಜ್ಯ ಅಂಗವಾಗಿದೆ.
ವಾಣಿಜ್ಯ ನಗರಿ, ಛೋಟಾ ಮುಂಬೈ ಎಂದು ಕರೆಯಿಸಿಕೊಳ್ಳುವ ಹುಬ್ಬಳ್ಳಿ ಸ್ವಚ್ಚತೆ ಮಾತ್ರ ಸವಾಲಿನ ಸಂಗತಿಯಾಗಿದೆ. ಅಲ್ಲದೇ ನಗರ ಬೆಳೆಯುತ್ತಿದ್ದು ಸಾಮಾಜಿಕ ಪರಿಸರ ಕಾಳಜಿ ನಗರ ವಾಸಿಗಳಲ್ಲಿ ಕಡಿಮೆಯಾಗಿದೆ. ಹೀಗಾಗಿ ನಗರದ ಸೌಂದರ್ಯ ಹೆಚ್ಚಿಸುವುದರೊಂದಿಗೆ ಅನೇಕ ಜಾಗೃತಿ ಮೂಡಿಸುವ ಕಾರ್ಯವನ್ನು ರೆವಲ್ಯೂಷನ್ ಮೈಂಡ್ ಎಂಬ ಯುವ ಪಡೆ ಮಾಡುತ್ತಿದೆ.
225 ಮೀಟರ್ ಆಳದ ಝಂಜ್ರಾ ಭೂತಳ ಗಣಿಯನ್ನು ವೀಕ್ಷಣೆ ಮಾಡಿದ ಪ್ರಲ್ಹಾದ್ ಜೋಶಿ
ಪರಿಸರ ಸ್ವಚ್ಛತೆ, ಟ್ರಾಫಿಕ್ ರೂಲ್ಸ್ ಪಾಲಿಸುವುದು, ಮರಗಿಡಗಳನ್ನು ನೆಡುವುದು ಹಾಗೂ ನೀರು ಅಮೂಲ್ಯವಾಗಿದ್ದು ಅದನ್ನು ಉಳಿಸಿಕೊಂಡು ಹೋಗೋಣ ಎಂಬ ಮಹತ್ತರವಾದ ಧ್ಯೇಯ ವಾಕ್ಯದೊಂದಿಗೆ ಈ ಯುವ ಪಡೆ ಸಜ್ಜಾಗಿ ಕರ್ತವ್ಯದಲ್ಲಿ ನಿರತವಾಗಿದೆ.
ಕೇವಲ ನಗರದ ಸೌಂದರ್ಯವನ್ನು ಹೆಚ್ಚಿಸದೆ ಅದರೊಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಈ ಯುವ ಪಡೆ ಮಾಡುತ್ತಿದೆ. ನಗರದ ಪ್ರಮುಖ ಮಾರ್ಗಗಳನ್ನು ಆಯ್ದುಕೊಂಡು ಪಕ್ಕದ ಗೋಡೆಗಳ ಮೇಲೆ ಸುಂದರವಾದ ಪ್ರಕೃತಿ, ಪ್ರಾಣಿ ಪಕ್ಷಿಗಳ ಹಾಗೂ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವ ಮೂಲಕ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ.
ಗೋಡೆಗಳ ಮೇಲೆ ಆಕರ್ಷಕ ಚಿತ್ರದ ಜೊತೆಗೆ ಜಾಗೃತಿ
ನಗರದಲ್ಲಿರುವ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಯ ಗೋಡೆಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಿ, ಜನರ ಗಮನ ಸೆಳೆಯುವುದರೊಂದಿಗೆ ಸ್ವಚ್ಛತಾ ಜಾಗೃತಿ ಮೂಡಿಸುವಲ್ಲಿ ಹುಬ್ಬಳ್ಳಿಯ 'ರೆವಲ್ಯೂಷನ್ ಮೈಂಡ್ಸ್' ಎಂಬ ಉತ್ಸಾಹಿ ಯುವಕರ ತಂಡ ನಿರತವಾಗಿದೆ. ಎಂಜಿನಿಯರ್ ವಿದ್ಯಾರ್ಥಿಯಾಗಿರುವ ವಿನಾಯಕ ಜೋಗಾರಶೆಟ್ಟರ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಯುವಕ- ಯುವತಿಯರು ಈ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ.
ಈಗಾಗಲೇ ಹೊಸ ಬಸ್ ನಿಲ್ದಾಣ, ಗೋಕುಲ ರಸ್ತೆ, ಕೇಶ್ವಾಪುರ, ಕೋಟಿಲಿಂಗೇಶ್ವರ ನಗರ, ನವನಗರದ ಸ್ಕೈಪಾತ್, ಪ್ರಶಾಂತ ಕಾಲೋನಿ, ಗದಗ ರಸ್ತೆ, ಕಿಮ್ಸ್ ಆಸ್ಪತ್ರೆ ಆವರಣ, ಹೊಸೂರ ಟರ್ಮಿನಲ್ ಸೇರಿದಂತೆ ಅನೇಕ ಕಡೆ ಗೋಡೆಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಿ, ಜಾಗೃತಿಯೊಂದಿಗೆ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ನಮಗೆ ಹೆಣ್ಣು ಕೊಡುತ್ತಿಲ್ಲ: ಜಾಗೃತಿ ಕಾರ್ಯಕ್ರಮಕ್ಕಾಗಿ ತಹಶೀಲ್ದಾರ್ಗೆ ಯುವ ರೈತರ ಮನವಿ
‘ಮೈ ಸಿಟಿ, ಮೈ ಡ್ಯೂಟಿ’ ವಾಕ್ಯದಡಿ ರೆವಲ್ಯೂಷನ್ ಮೈಂಡ್ಸ್ ಕಾರ್ಯ
ವಾರಾಂತ್ಯದಲ್ಲಿ ಹುಬ್ಬಳ್ಳಿ ನಗರದ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸುಂದರವಾಗಿಸುವ ಈ ತಂಡ, ಸರ್ಕಾರಿ ಶಾಲೆ ಗೋಡೆಗಳನ್ನು ಅಂದವಾಗಿಸುತ್ತಿವೆ. ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ 'ಮೈ ಸಿಟಿ, ಮೈ ಡ್ಯೂಟಿ' ಎಂಬ ಘೋಷ ವಾಕ್ಯದಡಿ ನಗರದ ಗೋಡೆಗಳನ್ನು ಸುಂದರಗೊಳಿಸುತ್ತಿದ್ದಾರೆ. ಗೋಡೆ ಮೇಲೆ ನಮ್ಮ ದೇಶದ ಕಲೆ, ಸಂಸ್ಕೃತಿ, ಮಕ್ಕಳನ್ನು ಸೆಳೆಯುವ ಕಾರ್ಟೂನ್ಗಳ ಮೂಲಕ ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಹಾಗೂ ಟ್ರಾಫಿಕ್ ಸಿಗ್ನಲ್ಗಳನ್ನು ಪಾಲಿಸುವ ಸಂದೇಶವುಳ್ಳ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.
ಜನ ಈಗ ನಗರವನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ
"ನಗರದಲ್ಲಿ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಂಡ ಕಂಡಲ್ಲಿ ಜನ ಗುಟ್ಕಾ, ಎಲೆ-ಅಡಿಕೆ ಜಗಿದು ಉಗುಳುತ್ತಾರೆ. ಇದರಿಂದ ನಗರವೆಲ್ಲಾ ಗಲೀಜಾಗಿ ಕಾಣುತ್ತಿದೆ. ಬದಲಾಗಿ ಎನ್ನುವ ಬದಲು, ನಾವೇ ಬದಲಾವಣೆ ಆರಂಭಿಸುವುದು ಉತ್ತಮ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ" ಎಂದು ರೆವಲ್ಯೂಷನ್ ಮೈಂಡ್ಸ್ ತಂಡದ ಸ್ಥಾಪಕ ವಿನಾಯಕ ಜೋಗಾರಶೆಟ್ಟರ್ ಹೇಳಿದ್ದಾರೆ.
"ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗೋಕುಲ ರಸ್ತೆ ಗೋಡೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರ, ಮಹನೀಯರ ಕಲೆ, ಸಂಸ್ಕೃತಿ ಬಿಂಬಿಸುವ ಹಾಗೂ ಎಲ್ಲರ ನೆಚ್ಚಿನ ನಟ ಅಪ್ಪು ಅವರ ಚಿತ್ರ ಬಿಡಿಸಿದ್ದೇವೆ. ಅನೇಕರು ಇದನ್ನು ಕಂಡು ಸಂತೋಷಪಟ್ಟಿದ್ದಾರೆ. ಈಗ ಅಲ್ಲಿ ಉಗುಳುವುದು ಕಡಿಮೆಯಾಗಿದ್ದು ಜನ ಜಾಗೃತರಾಗಿ, ನಗರವನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ, ನಮ್ಮ ಕೆಲಸವೂ ಸಾರ್ಥಕವಾಗಿದೆ" ಎಂದು ಸಂತಸಪಟ್ಟರು.
ಈ ಕಾರ್ಯದಲ್ಲಿ ಸಾರ್ವಜನಿಕರಿಗೂ ಮುಕ್ತ ಆಹ್ವಾನ
ಆರು ವರ್ಷದಿಂದ ಈ ಕಾರ್ಯ ಮಾಡುತ್ತಿದ್ದೇವೆ. ನಮ್ಮ ತಂಡದವರಷ್ಟೇ ಅಲ್ಲದೇ ಪ್ರತಿ ಸಲ ಗೋಡೆಗಳಿಗೆ ಬಣ್ಣ ಬಳಿಯುವ ಮುನ್ನ ಆನ್ಲೈನ್ ಮೂಲಕ ಸಾರ್ವಜನಿಕರಿಗೂ ಮುಕ್ತ ಆಹ್ವಾನ ನೀಡುತ್ತೇವೆ. ಆಸಕ್ತರು ನಮ್ಮ ತಂಡದೊಂದಿಗೆ ಕೈ ಜೋಡಿಸಿ ಎಂದು ರೆವಲ್ಯೂಷನ್ ಮೈಂಡ್ಸ್ ತಂಡ ತಿಳಿಸಿದೆ.
ಕೇವಲ ಗೋಡೆಗಳಿಗೆ ಬಣ್ಣ ಬಳಿಯುವುದಷ್ಟೆ ಅಲ್ಲದೇ ಅನಾಥಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಈ ಯುವಕರ ತಂಡ ಪ್ರಸ್ತುತ ಯುವಜನಾಂಗಕ್ಕೆ ಮಾದರಿಯಾಗಿದೆ. ಇನ್ನು ರೆವಲ್ಯೂಷನ್ ಮೈಂಡ್ಸ್ ತಂಡದ ಸಾಮಾಜಿಕ ಕಾರ್ಯ ಮೆಚ್ಚಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 'ಧೀಮಂತ ಪ್ರಶಸ್ತಿ' ನೀಡಿ ಗೌರವಿಸಿದೆ.