ನಾಡೋಜ ಡಾ ಪಾಟೀಲ ಪುಟ್ಟಪ್ಪನವರಿಗೆ ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ, ಫೆಬ್ರವರಿ 26; ಶತಾಯುಷಿ, ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಅನಾರೋಗ್ಯದಿಂದ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ( ಕಿಮ್ಸ್) ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಈ ಭೇಟಿ ನೀಡಿದ ಅವರು, ಪಾಪು ಅವರಿಗೆ ನೀಡುತ್ತಿರುವ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಶಸ್ತ್ರಚಿಕಿತ್ಸೆ : ಡಾ.ಪಾಪು ಅವರು ಆಸ್ಪತ್ರೆಗೆ ದಾಖಲಾದ ಬಳಿಕ ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕೆ ಬಂದಿದೆ, ಇಂದು ಬೆಳಿಗ್ಗೆ ಡಾ.ಎಸ್.ಎಂ.ದುಗ್ಗಾಣಿ, ಡಾ.ವಿಶ್ವನಾಥ, ಡಾ.ಗುರುಪಾದಪ್ಪ ನೇತೃತ್ವದ ತಜ್ಞ ವೈದ್ಯರ ತಂಡದಿಂದ ರಕ್ತದ ಹೆಪ್ಪುಗಟ್ಟುವಿಕೆ ನಿವಾರಿಸಲು ಸಣ್ಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದ್ದು, ಇದೀಗ ಆರೋಗ್ಯ ಸ್ಥಿರವಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ವಿವರಿಸಿದರು. ಪಾಪು ಅವರ ಪುತ್ರ ಅಶೋಕ ಪಾಟೀಲ ಅವರಿಂದ ಹೆಚ್ಚಿನ ವಿವರ ಪಡೆದರು.

ಸಭೆಃ ಕಿಮ್ಸ್ ನಿರ್ದೇಶಕರ ಸಭಾಂಗಣದಲ್ಲಿ ಅನೌಪಚಾರಿಕ ಸಭೆ ನಡೆಸಿದ ಪಿ.ಮಣಿವಣ್ಣನ್ ಅವರು, ಉತ್ತರ ಕರ್ನಾಟಕದ ಸುಮಾರು 8 ಜಿಲ್ಲೆಗಳ ಜನರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಿರುವ ಕಿಮ್ಸ್ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಸಾರ್ವಜನಿಕರು ಮತ್ತು ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿ ಇದಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಸ್ಥಾಪಿಸಿ , ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಾಧ್ಯತೆಗಳ ಮಾಹಿತಿ ಸಂಗ್ರಹಿಸಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್, ಡಾ.ಅರುಣಕುಮಾರ್, ಡಾ.ಡಿ.ಎಂ.ಕಬಾಡಿ, ಡಾ.ಸಫಿಯಾ ಶೇಖ್, ಡಾ.ಶಾಂತಲಾ ಹುನಗುಂದ, ಡಾ.ಮಾಧುರಿ , ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ ಮತ್ತಿತರರು ಇದ್ದರು.












Click it and Unblock the Notifications