'ಧೈರ್ಯವಿದ್ದರೆ ನಾನೇ ಮುಂದಿನ ಸಿಎಂ ಎಂದು ಈಶ್ವರಪ್ಪ ಹೇಳಲಿ'
ಹುಬ್ಬಳ್ಳಿ, ಆಗಸ್ಟ್ 29 : 'ಕೆ.ಎಸ್.ಈಶ್ವರಪ್ಪ ಅವರಿಗೆ ಈಗ ಹಿಂದುಳಿದ ವರ್ಗದ ಜನ ನೆನಪಾಗಿದ್ದಾರೆ. ಬಿಜೆಪಿ ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂಬುದು ಜನರಿಗೆ ತಿಳಿದಿದೆ. ಯಡಿಯೂರಪ್ಪ ಕಾಲು ಎಳೆಯುವ ಉದ್ದೇಶದಿಂದ ಅವರು ರಾಯಣ್ಣ ಬ್ರಿಗೇಡ್ ಕಟ್ಟಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಹಿಂದುಳಿದವರು ಹಾಗೂ ದಲಿತರ ಮತಗಳು ಬೇಕಂತೆ. ಈಶ್ವರಪ್ಪ ಅವರಿಗೆ ಈಗ ಹಿಂದುಳಿದ ವರ್ಗದ ಜನರು ನೆನಪಾಗಿದ್ದಾರೆ' ಎಂದು ಟೀಕಿಸಿದರು.[ರಾಯಣ್ಣ ಬ್ರಿಗೇಡಿಗೆ ಜೈ ಎಂದ ಎಚ್.ವಿಶ್ವನಾಥ್]
'ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದೇ ಒಂದು ದಿನ ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡಿರಲಿಲ್ಲ. ಈಗ ಚುನಾವಣೆಗೋಸ್ಕರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಧೈರ್ಯ ವಿದ್ದರೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಈಶ್ವರಪ್ಪ ಹೇಳಲಿ ನೋಡೋಣ' ಎಂದು ಸವಾಲು ಹಾಕಿದರು.[ಟ್ರಸ್ಟ್ ರೂಪದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೋಂದಣಿ!]
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲು ಈಗಾಗಲೇ ಈಶ್ವರಪ್ಪ ಅವರು ನಿರ್ಧರಿಸಿದ್ದು, ಅಕ್ಟೋಬರ್ 1ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಬ್ರಿಗೇಡ್ ಅನ್ನು ಟ್ರಸ್ಟ್ ರೂಪದಲ್ಲಿ ಈಗಾಗಲೇ ನೋಂದಣಿ ಮಾಡಿಸಲಾಗಿದೆ. ಭಾನುವಾರ ಈಶ್ವರಪ್ಪ ಅವರು ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಬ್ರಿಗೇಡ್ ಬಗ್ಗೆ ಚರ್ಚಿಸಿದ್ದರು.