ಉತ್ತರ ಕರ್ನಾಟಕಕ್ಕೆ ಹಳೆ ಬಿಎಂಟಿಸಿ ಬಸ್ಗಳ ಹಸ್ತಾಂತರಕ್ಕೆ ನಿರ್ಧಾರ, ಭುಗಿಲೆದ್ದ ಜನಾಕ್ರೋಶ
ಹುಬ್ಬಳ್ಳಿ, ಸೆಪ್ಟೆಂಬರ್, 14: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಹುಬ್ಬಳ್ಳಿ -ಧಾರವಾಡದಲ್ಲಿ ಬಸ್ಗಳ ಕೊರತೆ ಉಂಟಾಗಿತ್ತು. ಇದೀಗ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಹಳೆಯ 100 ಬಸ್ಗಳನ್ನು ನೀಡಲು ಮುಂದಾಗಿದೆ. ಮತ್ತೆ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಮೊದಲಿನಿಂದಲೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಇಂತಹ ಸಮಯದಲ್ಲಿ ಉಪಯೋಗಿಸಿ ಬಿಟ್ಟ ಬಸ್ಗಳನ್ನು ಹಸ್ತಾಂತರ ಮಾಡುವ ಅವಶ್ಯಕತೆ ಇತ್ತಾ? ಎಂದು ಸ್ಥಳೀಯರ ಪ್ರಶ್ನೆ ಆಗಿದೆ. ನಷ್ಟದಲ್ಲೇ ನಡೆಯುತ್ತಿರುವ ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಹೊಸ ಬಸ್ಗಳನ್ನು ಖರೀದಿಸಿಲ್ಲ. ವರ್ಷದಿಂದ ವರ್ಷಕ್ಕೆ ಅವಧಿ ಮೀರಿದ ಬಸ್ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೊಸ ಬಸ್ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದರೂ ಕೂಡ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಭಾರತ ಎ vs ನ್ಯೂಜಿಲೆಂಡ್ ಎ ಟೆಸ್ಟ್: ಹುಬ್ಬಳ್ಳಿ ಫ್ಯಾನ್ಸ್ಗೆ ಮತ್ತೆ ನಿರಾಸೆ ಮೂಡಿಸಿದ ಮಳೆರಾಯ
ಒಪ್ಪಂದದ ಮೇರೆಗೆ ತಾತ್ಕಾಲಿಕವಾಗಿ ಬಿಎಂಟಿಸಿ ನೂರು ಬಸ್ಗಳನ್ನು ಹಂತ ಹಂತವಾಗಿ ಹಸ್ತಾಂತರಿಸಲಿದೆ. ಸದ್ಯ 25 ಬಸ್ಗಳು ಹುಬ್ಬಳ್ಳಿಗೆ ಈಗಾಗಲೇ ಬಂದಿವೆ. 'ಇನ್ನೂ 2-3 ವರ್ಷಗಳ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿರುವ ಈ ಏರ್ ಸಸ್ಪೆನ್ಶನ್ ಬಸ್ಗಳನ್ನು ನಗರ ಸಾರಿಗೆಗೆ ಮಾತ್ರ ಬಳಸಬಹುದಾಗಿದೆ. ನಗರದಲ್ಲಿರುವ ಸಂಸ್ಥೆಯ ಕಾರ್ಯಾಗಾರದಲ್ಲಿ ಬಿಎಂಟಿಸಿ ಬಸ್ಗಳಿಗೆ ಮರು ಪೇಂಟಿಂಗ್ ಮತ್ತು ಸಂಸ್ಥೆಯ ಹೆಸರನ್ನು ಬರೆಸಲಾಗಿದೆ.
ವಾಯುವ್ಯ ಸಾರಿಗೆ ಸಂಸ್ಥೆಗೆ ಅಗತ್ಯವಿರುವ ಬಸ್ಗಳು
ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಮತ್ತಷ್ಟು ಬಸ್ಗಳ ಅಗತ್ಯವಿದ್ದು, ಈ ನಗರಗಳಿಗೆ ಬಸ್ಗಳನ್ನು ನಿಯೋಜಿಸಲಾಗಿದೆ. ಸಂಸ್ಥೆಗೆ 1,500 ಬಸ್ಗಳ ಅಗತ್ಯವಿದ್ದು, ಈಗಿರುವ ಶೇಕಡಾ 40ರಷ್ಟು ಬಸ್ಗಳನ್ನು ನಿಷ್ಕ್ರಿಯಗೊಳಿಸಬೇಕಿದೆ. ಪ್ರತಿ ವರ್ಷ 300ರಿಂದ 400 ಬಸ್ಗಳು ನಿಷ್ಕ್ರಿಯವಾಗುತ್ತವೆ. ಆದರೆ ಮಹಾಮಾರಿ ಕೊರೊನಾ ಕಾರಣದಿಂದಾಗಿ ಎರಡು ವರ್ಷದಿಂದ ಬಸ್ಗಳ ನಿಷ್ಕ್ರಿಯ ಆಗಿಲ್ಲ. ನಿಯಮದ ಪ್ರಕಾರ ಪ್ರಯಾಣಿಕ ವಾಹನಗಳನ್ನು ಹದಿನೈದು ವರ್ಷದವರೆಗೆ ಓಡಿಸಬಹುದು. ನಂತರ ಅವುಗಳ ನಿರ್ವಹಣೆ ದುಬಾರಿ ಆಗುತ್ತದೆ. ಹಾಗಾಗಿ ನಿಷ್ಕ್ರಿಯಗೊಳಿಸುವುದು ಅನಿವಾರ್ಯ ಎಂಬ ಮಾಹಿತಿ ಲಭ್ಯವಾಗಿದೆ. ಹೊಸದಾಗಿ ಒಂದು ಸಾವಿರ ಬಸ್ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹೊಸ ಬಸ್ಗಳು ಬರುವವರೆಗೂ ಬಿಎಂಟಿಸಿ ಹಸ್ತಾಂತರಿಸಿರುವ ಬಸ್ಗಳನ್ನು ಓಡಿಸಲು ಎಲ್ಲ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅಲ್ಲಿನ ಸಾರಿಗೆ ಅಧಿಕಾರಿಗಳು ಅಧಿಕಾರಿಗಳು ಹೇಳುತ್ತಿದ್ದಾರೆ.
ಉ.ಕರ್ನಾಟಕದ ಜನರ ಕೆಂಗಣ್ಣಿಗೆ ಗುರಿಯಾದ ಸರ್ಕಾರ
ಉತ್ತರ ಕರ್ನಾಟಕವನ್ನು ಎಲ್ಲ ರಂಗದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಹೀಗೆ ಅಸಮಾಧಾನ ಕೇಳಿಬರುವಾಗಲೇ ಇದಕ್ಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಈಗ ದಕ್ಷಿಣ ಕರ್ನಾಟಕದಲ್ಲಿ ಉಪಯೋಗಿಸಿದ್ದ ಬಸ್ಗಳನ್ನ ಉತ್ತರ ಕರ್ನಾಟಕ ಭಾಗಕ್ಕೆ ನೀಡಲಾಗಿದೆ. ಇದರಿಂದ ಸಹಜವಾಗಿಯೇ ಉತ್ತರ ಕರ್ನಾಟಕ ಭಾಗದ ಜನರ ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ.
ಬಿಎಂಟಿಸಿ ಸಂಸ್ಥೆಗೆ ಬರುವ ತಿಂಗಳ ಆದಾಯ
ಕೊರೊನಾ ಬಳಿಕ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಕಾರ್ಯಾಚರಣೆ ಪ್ರಾರಂಭ ಆಗಿದ್ದರೂ, ನಿರೀಕ್ಷಿತ ಆದಾಯ ಸಂಗ್ರಹ ಆಗಿರಲಿಲ್ಲ. ಆದರೆ ಮೇ ತಿಂಗಳಿನಲ್ಲಿ ಸಂಸ್ಥೆಯ ಆದಾಯವು ಸರಾಸರಿ 5.22 ಕೋಟಿ ರೂಪಾಯಿಗಳಷ್ಟು ಸಂಗ್ರಹವಾಗಿತ್ತು. ಬಹಳ ದಿನಗಳ ನಂತರ ಗರಿಷ್ಠ 6.14 ಕೋಟಿ ಸಾರಿಗೆ ಆದಾಯ ಸಂಗ್ರಹವಾಗಿದೆ. ಇತ್ತೀಚಿನ ದಿನಗಳಲ್ಲಿಇದು ಅತೀ ಹೆಚ್ಚು ಸಂಗ್ರಹವಾದ ಸಾರಿಗೆ ಆದಾಯವಾಗಿದೆ. ಮುಂಬರುವ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಶ್ರಮಿಸುವಂತೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ವಾಯುವ್ಯ ಸಾರಿಗೆ ಸಂಸ್ಥೆಗೆ ಬಸ್ಗಳ ಮಾರಾಟ
ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಹಲವು ವರ್ಷಗಳ ಕಾಲ ಸಂಚರಿಸಿ ಹಳೆಯದಾಗಿರುವ ಹವಾ ನಿಯಂತ್ರಣ ರಹಿತ ಬಸ್ಗಳನ್ನು, ಎನ್ಡಬ್ಲ್ಯೂಕೆಆರ್ಟಿಸಿಗೆ ಮಾರಾಟ ಮಾಡಲಾಗಿದೆ. ಬಿಎಂಟಿಸಿ ತಲಾ 1 ಲಕ್ಷ ದರದಲ್ಲಿ 100 ಬಸ್ಗಳ ಮಾರಾಟವನ್ನು ಮಾಡಿದೆ. ತಾತ್ಕಾಲಿಕವಾಗಿ ಕೊರತೆ ನೀಗಿಸಿಕೊಳ್ಳಲು ಮುಂದಾದ ಸಂಸ್ಥೆ, ಮತ್ತೊಂದೆಡೆ ಉತ್ತರ ಕರ್ನಾಟಕದ ಜನರ ಕೆಂಗಣ್ಣಿಗೆ ಗುರಿಯಾಗಿದೆ.