ಸತ್ತವನು ಎದ್ದುಕೂತಿದ್ದಲ್ಲ! ಸಾಯುವ ಮುನ್ನವೇ ಸ್ಮಶಾನಕ್ಕೆ ಹೊರಟಿದ್ದ!
ಸಾಯುವ ಹಂತದಲ್ಲಿದ್ದ ಬಾಲಕನೊಬ್ಬ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಎದ್ದು ಕುಳಿತು ಪುನಃ ಆಸ್ಪತ್ರೆ ಸೇರಿದ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ, ಫೆಬ್ರವರಿ 20: ಸಾಯುವ ಹಂತದಲ್ಲಿದ್ದ ಬಾಲಕನೊಬ್ಬ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಎದ್ದು ಕುಳಿತು ಪುನಃ ಆಸ್ಪತ್ರೆ ಸೇರಿದ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ.
ಮರಣೋತ್ತರ ಪರೀಕ್ಷೆಯನ್ನು ತಪ್ಪಿಸುವ ಉದ್ದೇಶದಿಂದ ಸಾಯುವ ಹಂತದಲ್ಲಿದ್ದ ಬಾಲಕನೊಬ್ಬನನ್ನು ಆತನ ಸಂಬಂಧಿಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಆದರೆ ಆತ ಮಾರ್ಗ ಮಧ್ಯೆ ಎದ್ದು ಕುಳಿತಿದ್ದರಿಂದ ಆತನನ್ನು ಪುನಃ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕ ಗೋಕುಲ ರಸ್ತೆಯ ಸುಚರಾಯ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. [ಮಾ.2ರಿಂದ ಯಶವಂತಪುರ to ಪಂಢರಪುರಕ್ಕೆ ವಿಶೇಷ ರೈಲು]

ಘಟನೆ ಹಿನ್ನೆಲೆ
ಮನಗುಂಡಿ ಗ್ರಾಮದ ಬಾಲಕುಮಾರ್ ಮರಡಿ (16)ನಿಗೆ ಹುಬ್ಬಳ್ಳಿಯ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುವಾಗ ಬೀದಿ ನಾಯಿಯೊಂದು ಕಚ್ಚಿತ್ತು. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದುದರಿಂದ ನಂಜಾಗಿ ಅದೊಂದು ದಿನ ಮೂರ್ಛೆ ಹೋಗಿ ಬಿದ್ದಿದ್ದನು. ಕೂಡಲೇ ಕುಮಾರ್ನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು.
ಕಳೆದೆರಡು ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಕುಮಾರನ ದೇಹ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಯ ವೈದ್ಯರು ಆತ ಬದುಕುಳಿಯುವುದು ಅನುಮಾನ ಎಂದಿದ್ದರು. ಆಸ್ಪತ್ರೆಯಲ್ಲಿ ಬಾಲಕ ಸತ್ತರೆ ಮರಣೋತ್ತರ ಪರೀಕ್ಷೆ ಮಾಡಿಸಬೇಕಾತ್ತದೆ. ಆದರೆ ಮರಣೋತ್ತರ ಪರೀಕ್ಷೆಗೆ ಇಷ್ಟವಿಲ್ಲದ ಕುಮಾರನ ಸಂಬಂಧಿಕರು ಆತನನ್ನು ಮನೆಗೆ ಕರೆದೊಯ್ಯುವುದಾಗಿ ವೈದ್ಯರಿಗೆ ಹೇಳಿ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ತೆರಳಿದ್ದರು. ಹಾಗೆ ಹೋಗುವ ಮುನ್ನ ಸಂಬಂಧಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ವೈದ್ಯರು ಬಾಲಕ ಇನ್ನು ಕೇವಲ 15-20 ನಿಮಿಷ ಮಾತ್ರ ಬದುಕಬಹುದು ಎಂದಿದ್ದರು.
ಸರಿ. ಬಾಲಕರನ್ನು ಆ್ಯಂಬುಲೆನ್ಸ್ ಗೆ ಹಾಕಿಕೊಂಡು ಮನೆ ಕಡೆ ಹೊರಟ ಸಂಬಂಧಿಕರಿಗೆ ಬಾಲ ಕುಮಾರನ ಉಸಿರಾಟ ಮತ್ತು ನಾಡಿ ಮಿಡಿತ ನಿಂತಿರುವುದನ್ನು ಗಮನಿಸಿದ್ದಾರೆ. ಇದರಿಂದ ಪಾಲಕರು ಕುಮಾರ್ ಮೃತಪಟ್ಟಿದ್ದಾನೆಂದು ಭಾವಿಸಿ ಊರಿಗೆ ಮೃತದೇಹ ತರುವುದಾಗಿ ಹೇಳಿ ಶವದ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಸಂಬಂಧಿಕರಿಗೆ ತಿಳಿಸಿದ್ದರು.
ಅತ್ತ, ಮನಗುಂಡಿ ಗ್ರಾಮದಲ್ಲಿ ಶವವನ್ನು ಸುಡಲು ಕಟ್ಟಿಗೆಯನ್ನು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಅಷ್ಟರಲ್ಲಿ ಆ್ಯಂಬುಲೆನ್ಸ್ ಸಾಗುತ್ತಿದ್ದ ಹಾದಿಯಲ್ಲಿ ಹಲವಾರು ಗುಂಡಿಗಳಿದ್ದ ಕಾರಣ ವಾಹನದ ಅಲುಗಾಟಕ್ಕೆ ಬಾಲಕ ಗಕ್ಕನೆ ಎದ್ದು ಕುಳಿತುಬಿಟ್ಟಿದ್ದಾನೆ.
ಎದ್ದ ಕೂಡಲೇ ವಾಂತಿ ಮಾಡಿಕೊಂಡ ಆತ ಮತ್ತೆ ದೀರ್ಘ ಉಸಿರಾಟ ಆರಂಭಿಸಿದ್ದಾನೆ. ಇದರಿಂದ ಎಚ್ಚೆತ್ತುಕೊಂಡ ಸಂಬಂಧಿಕರು ತಕ್ಷಣವೇ ಆ್ಯಂಬುಲೆನ್ಸ್ ನಿಲ್ಲಿಸಿದ್ದಾರೆ. ಪರೀಕ್ಷೆ ಮಾಡಲಾಗಿ ಆತನ ನಾಡಿ ಮಿಡಿತ, ಉಸಿರಾಟ ಕೊಂಚ ಏರಿಕೆಯಾಗಿದ್ದು ಕಂಡಿದೆ. ತಕ್ಷಣವೇ ಆ್ಯಂಬುಲೆನ್ಸ್ ತಿರುಗಿಸಿಕೊಂಡು ಧಾರವಾಡ ನಗರಕ್ಕೆ ಆಗಮಿಸಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಆತನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಆದರೂ, ಬಾಲಕನ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ. [ಹುಬ್ಬಳ್ಳಿ: ಸಿದ್ಧಾರೂಢಮಠದಲ್ಲಿ ಸ್ವಾಮೀಜಿಗಳ ಧರಣಿ]












Click it and Unblock the Notifications