ಹುಬ್ಬಳ್ಳಿಯಲ್ಲಿ ಜಗ್ಗಲಗಿ ಹಬ್ಬದ ಲೋಗೋ ಬಿಡುಗಡೆ ಮಾಡಿದ ಕೇಂದ್ರ ಸಚಿವ, ಈ ಹಬ್ಬದ ವಿಶೇಷತೆ ಏನು?
ಹುಬ್ಬಳ್ಳಿ, ಮಾರ್ಚ್, 05: ಪ್ರತಿ ವರ್ಷ ಹೋಳಿ ಅಂಗವಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಜಗ್ಗಲಗಿ ಹಬ್ಬವನ್ನು ವಿಜೃಂಭಣೆಯಿಂದಾಗಿ ಆಚರಣೆ ಮಾಡುತ್ತಾರೆ. ಅದೇ ರೀತಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಗ್ಗಲಗಿ ಹಬ್ಬದ ಲೋಗೋವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಿಸಿ ಪಾಟೀಲ್, ಮಹೇಶ್ ಟೆಂಗಿನಕಾಯಿ ಅವರು ಬಿಡುಗಡೆ ಮಾಡಿದರು.
ಜಗ್ಗಲಗಿ ಹಬ್ಬದ ಲೋಗೋ ಲಾಂಚ್ ಮಾಡಿ ಮಾತನಾಡಿದ ಪ್ರಲ್ಹಾದ್ ಜೋಶಿ, ಜಗ್ಗಲಿಗಿ ಹಬ್ಬವನ್ನು ಮಾರ್ಚ್ 9 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಮೂರು ಸಾವಿರಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲರನ್ನು ಒಗ್ಗೂಡಿಸಲು ಇಂತಹ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ನಮ್ಮ ಸಂಪ್ರದಾಯವನ್ನು ಯಾವತ್ತೂ ಮರೆಯಬಾರದು. ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಜಗ್ಗಲಗಿ ಹಬ್ಬವನ್ನು ಹಮ್ಮಿಕೊಂಡಿದ್ದೇವೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಹಬ್ಬದಲ್ಲಿ ಭಾಗವಹಿಸಿ ತಿಳಿಸಿದರು.

ಕಾಂಗ್ರೆಸ್ನವರಿಗೆ ಭಯ ಹುಟ್ಟಿದೆ
ಪ್ರಧಾದಿ ನರೇಂದ್ರ ಮೋದಿ, ಅಮಿತ್ ಶಾ ರಾಜ್ಯಕ್ಕೆ ಬರುತ್ತಿರುವುದಕ್ಕೆ ಕಾಂಗ್ರೆಸ್ನವರಿಗೆ ಭಯ ಹುಟ್ಟಿದೆ. ಲೋಕಾಯುಕ್ತವನ್ನು ಬಲಗೊಳಿಸಿದ್ದೆ ಬಿಜೆಪಿ, ಹೀಗಾಗಿ ಯಾವುದೇ ಪಕ್ಷದ ನಾಯಕರು ತಪ್ಪು ಮಾಡಿದರೂ ಸಹ ಅವರ ವಿರುದ್ಧ ಕ್ರಮ ಆಗಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಮಾಡ್ಯಾರ ಅವರ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವು ಮಾಡಿತ್ತು. ಇದೀಗ ನಮ್ಮ ಕಾಲದಲ್ಲಿಯೇ ಲೋಕಾಯುಕ್ತವನ್ನು ಬಲಗೊಳಿಸಿದ್ದೇವೆ. ಯಾರು ಕಳಂಕಿಳಿಯುತ್ತಾರೆಯೋ ಅವರ ವಿರುದ್ಧ ಕ್ರಮ ಆಗಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ
ರಾಜ್ಯಕ್ಕೆ ಮೋದಿ, ಅಮಿತ್ ಶಾ ಬಂದರೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದರೆ ಸಿದ್ದರಾಮಯ್ಯ ಅವರಿಗೆ ಭಯ ಆಗದೇ ಇರದು. ಆದರೆ ಅವರು ಹಾಗೇ ಹೇಳಲು ಸಾಧ್ಯವಿಲ್ಲ. ಈ ಹಿಂದೆ ನರೇಂದ್ರ ಮೋದಿ ಅವರು ರಾಷ್ಟ್ರೀಯ ರಾಜಕಾರಣದ ಪ್ರವೇಶದ ನಂತರ ರಾಜ್ಯಕ್ಕೆ ಆಗಮಿಸಿದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಯಿತು. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿಯೂ ಸೋಲು ಅನುಭವಿಸಿದ್ದರು. ಮೂರು ಬಾರಿ ಸೋತವರು ರಾಜಕಾರಣವನ್ನು ಬಿಟ್ಟು ಹೋಗಬೇಕಿತ್ತು. ಆದರೆ ಕೊನೆಯ ಬಾರಿ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೊಮ್ಮೆ ಸಿಎಂ ರೇಸ್ನಲ್ಲಿದ್ದಾರೆಂದು ಕುಟುಕಿದರು.

ಇನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿ, ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನಮ್ಮ ಪರವಾಗಿ ಮತ ಚಲಾವಣೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿ ಪರವಾದ ಒಲವು ಇದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಮತ್ತೊಮ್ಮೆ ಮಾರ್ಚ್ 12ರಂದು ಆಗಮಿಸುತ್ತಿದ್ದು, ಅಂದು ಅವರು ಮಂಡ್ಯದ ಮದ್ದೂರಿನಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 2ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಧಾರವಾಡ ಐಐಟಿ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು.












Click it and Unblock the Notifications