ಪೆಟ್ರೋಲ್ ಬಂಕ್ ಅಳತೆ ಮೋಸದ ಹಿಂದಿನ ಹುಬ್ಬಳ್ಳಿ ಪ್ರಶಾಂತ ಎಂಥ ಕಿಲಾಡಿ
ಹುಬ್ಬಳ್ಳಿ, ಜುಲೈ 13: ದೇಶದಾದ್ಯಂತ ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ದೊಡ್ಡ ಜಾಲಕ್ಕೆ ಸೂತ್ರಧಾರ ಹುಬ್ಬಳ್ಳಿಯ ಪ್ರಶಾಂತ್ ನೂಲ್ಕಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಖತರ್ನಾಕ್ ಪ್ರಶಾಂತ್ ನನ್ನು ಮುಂಬೈನ ಪೊಲೀಸರು ಬಲೆಗೆ ಕೆಡವಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಈತನ ಸಹಚರ- ಸಾಫ್ಟ್ ವೇರ್ ಎಂಜಿನಿಯರ್ ವಿವೇಕ್ ಶೆಟ್ಟಿಯೂ ಸೇರಿದ ಹಾಗೆ ಇಪ್ಪತ್ಮೂರು ಆರೋಪಿಗಳನ್ನು ಜೈಲಿಗೆ ಗದುಮಿದ್ದಾರೆ. ಅಂದಹಾಗೆ ಈ ಜಾಲದ ಮಾಸ್ಟರ್ ಮೈಂಡ್ ಪ್ರಶಾಂತ್ ಪೆಟ್ರೋಲ್ ಹಾಗೂ ಡೀಸೆಲ್ ಪಂಪ್ ಗಳ ತಯಾರಿಕಾ ಕಂಪೆನಿಯೊಂದರ ಮಾಜಿ ಉದ್ಯೋಗಿ.
ಇಂಥ ಜಾಲವೊಂದರಲ್ಲಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬ ಮುಖ್ಯ ಪಾತ್ರ ವಹಿಸುತ್ತಿದ್ದ ಎಂಬ ಸಂಗತಿ ತಿಳಿದ ಇಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಪ್ರಶಾಂತ್ ಮತ್ತು ತಂಡ ಪೆಟ್ರೋಲ್ ಬಂಕ್ ಗಳಲ್ಲಿ ಹೇಗೆ ವಂಚನೆ ಜಾಲವನ್ನು ರೂಪಿಸುತ್ತಿತ್ತು ಎಂಬ ಸಂಗತಿಯೇ ಕುತೂಹಲಕರವಾಗಿದೆ.
ಪೆಟ್ರೋಲ್ ಪಂಪ್ ಗಳಲ್ಲಿ ಬಳಸುತ್ತಿದ್ದ ಇಂಟಿಗ್ರೇಟೆಡ್ ಸರ್ಕಿಟ್-ಐಸಿಗಳ ಜಾಗದಲ್ಲಿ ನಕಲಿ ಚಿಪ್ಗಳನ್ನು ಅಳವಡಿಸುತ್ತಿತ್ತು ಈ ತಂಡ. ಹೀಗೆ ಮಾಡುತ್ತಿದ್ದರಿಂದ ಪಂಪ್ ಗಳ ಮೀಟರ್ನಲ್ಲಿ ತೋರಿಸುವ ಪೆಟ್ರೋಲ್ ಅಥವಾ ಡೀಸೆಲ್ ಪ್ರಮಾಣಕ್ಕಿಂತ ಕಡಿಮೆ ಇಂಧನ ಹೊರಬರುತ್ತಿತ್ತು. ಆ ಮೂಲಕ ಗ್ರಾಹಕರಿಗೆ ವಂಚಿಸುತ್ತಿದ್ದರು ಎಂದು ತನಿಖೆ ವೇಳೆ ದೃಢಪಟ್ಟಿದೆ.
ಈ ಖದೀಮರು ಎಂಥ ಕಿಲಾಡಿಗಳೆಂದರೆ ಇಪ್ಪತ್ತು ಮಿಲಿ ಲೀಟರ್ ಮಾತ್ರ ಕಡಿಮೆ ಆಗುವಂತೆ ಮಾಡುತ್ತಿದ್ದರು. ವಂಚನೆಯಿಂದ ಲಾಭವೂ ಆಗಬೇಕು. ಅದೇ ವೇಳೆ ಗ್ರಾಹಕರಿಗೆ ಅನುಮಾನವೂ ಬರಬಾರದು ಎಂಬುದು ಇವರ ಲೆಕ್ಕಾಚಾರವಾಗಿತ್ತು.

ಬ್ರಹ್ಮಾಂಡ ಮೋಸದ ರೂವಾರಿ ಪ್ರಶಾಂತ್
ಎಂಜಿನಿಯರಿಂಗ್ ಪದವೀಧರನಾದ ಪ್ರಶಾಂತ್ ನೂಲ್ಕಾರ್ ಪೆಟ್ರೋಲ್ ಹಾಗೂ ಡೀಸೆಲ್ ವಂಚನೆ ಜಾಲದ ರೂವಾರಿ. ಈತ ಪೆಟ್ರೋಲ್ ಬಂಕ್ ಗಳಿಗೆ ಅಳವಡಿಸುವ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಗಳನ್ನು ತಯಾರಿಸುವ ಮಿಡ್ಕೊ ಎಂಬ ಕಂಪೆನಿಯ ಮಾಜಿ ಉದ್ಯೋಗಿ.
ಹೀಗಾಗಿ ಈ ಪಂಪ್ ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಚೆನ್ನಾಗಿ ಬಲ್ಲವನಾಗಿದ್ದ. ಈ ಅನುಭವದಿಂದಲೇ ಪೆಟ್ರೋಲ್ ಬಂಕ್ ಮಾಲೀಕರಿಗೆ ಅನುಕೂಲವಾಗುವಂತೆ ನಕಲಿ ಚಿಪ್ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ. ದೇಶದ ಸಾವಿರಾರು ಪೆಟ್ರೋಲ್ ಬಂಕ್ ಗಳಲ್ಲಿ ಇಂಥ ಚಿಪ್ಗಳನ್ನು ಅಳವಡಿಸಿರುವುದಾಗಿ ಪ್ರಶಾಂತ್ ಬಾಯ್ಬಿಟ್ಟಿದ್ದಾನೆ.

ವಿವೇಕ್ ಶೆಟ್ಟಿಯಿಂದ ನಕಲಿ ಐಸಿ ತಯಾರಿಕೆ
ಪ್ರಶಾಂತ್ ಈ ನಕಲಿ ಚಿಪ್ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ. ಈ ನಕಲಿ ಚಿಪ್ಗಳಿಗೆ ಮತ್ತೊಬ್ಬ ಆರೋಪಿ, ಸಾಫ್ಟ್ ವೇರ್ ಎಂಜಿನಿಯರ್ ಮಹಾರಾಷ್ಟ್ರದ ದೊಂಬಿವಾಲಿ ನಿವಾಸಿ ವಿವೇಕ್ ಶೆಟ್ಟಿ ಸಾಪ್ಟವೇರ್ ಬದಲಾಯಿಸಿಕೊಡುತ್ತಿದ್ದ.
ನಕಲಿ ಐಸಿಗಳ ಸಾಪ್ಟವೇರ್ ಅನ್ನು ಪೆಟ್ರೋಲ್ ಬಂಕ್ ಮಾಲೀಕರಿಗೆ ಅನುಕೂಲವಾಗುವಂತೆ ಬದಲಾಯಿಸಿ ಅಳವಡಿಸುತ್ತಿದ್ದರು. ಅಂದಹಾಗೆ ವಿವೇಕ್ ನನ್ನು ಮೇ ತಿಂಗಳಲ್ಲಿ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು.

ಲೀಟರ್ ಪೆಟ್ರೋಲ್ಗೆ 20 ಎಂಎಲ್ ಕಡಿಮೆ
ಬಂಕ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಮಾಡುವ ಪಂಪ್ ಗಳಿಗೆ ಒಂದು ಬಾರಿ ಈ ನಕಲಿ ಚಿಪ್ಗಳನ್ನು ಅಳವಡಿಸಿದರೆ ಮುಗಿಯಿತು. ನಂತರ ಗ್ರಾಹಕರು ಖರೀದಿಸುವ ಪ್ರತಿ ಲೀಟರ್ ಇಂಧನದಲ್ಲಿ 20 ಎಂಎಲ್ ಕಡಿಮೆ ಪೂರೈಕೆಯಾಗುತ್ತಿದ್ದು, ಮೀಟರ್ ಮಾತ್ರ ಸರಿಯಾದ ಅಳತೆ ತೋರಿಸುತ್ತದೆ.
ಇದರಿಂದ ಬಂಕ್ ಗಳು ವಂಚನೆ ಮಾಡುತ್ತಿವೆ ಎಂದು ಸಾಬೀತು ಮಾಡಲು ಗ್ರಾಹಕರಿಗೆ ಆಸ್ಪದವೇ ಇರುವುದಿಲ್ಲ. ನಕಲಿ ಚಿಪ್ ಬಳಕೆಯಿಂದ ಪ್ರತಿ ಬಂಕ್ ಗಳಲ್ಲಿ ದಿನಕ್ಕೆ ನೂರಾರು ಲೀಟರ್ ಇಂಧನ ವಂಚನೆಯಾಗುತ್ತಿತ್ತು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಹುಬ್ಬಳ್ಳಿಯಲ್ಲಿಯೂ ವಂಚನೆ ಜಾಲ
ಪ್ರಶಾಂತ್ ಹುಬ್ಬಳ್ಳಿಯವನೇ ಆಗಿರುವುದರಿಂದ ಈ ವಂಚನೆಯ ಜಾಲ ಇಲ್ಲಿಯೂ ಹರಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಹಿಂದೆಯೂ ಇಂಥದೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಈಗ ಅದಕ್ಕೆ ಮತ್ತೆ ಪುಷ್ಟಿ ಸಿಕ್ಕಿದೆ. ದೇಶದ ಎಷ್ಟು ಹಾಗೂ ಯಾವ ಪೆಟ್ರೋಲ್ ಬಂಕ್ ಗಳಿಗೆ ಇಂಥ ಚಿಪ್ಗಳನ್ನು ಅಳವಡಿಸಿ ಗ್ರಾಹಕರಿಗೆ ವಂಚಿಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.












Click it and Unblock the Notifications