ಮಗನನ್ನು ಕೊಂದು, ತಾನೇ ದೂರು ದಾಖಲಿಸಿದ ತಾಯಿ
ಹುಬ್ಬಳ್ಳಿ, ಜುಲೈ 5: ಆಸ್ತಿಗಾಗಿ ತಾಯಿ ಹಾಗೂ ತಮ್ಮನಿಂದಲೇ ಯುವಕನ ಹತ್ಯೆಯಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಜೂನ್ 29ರಂದು ದೇವಿಕೊಪ್ಪ ಗ್ರಾಮದ ಬಳಿ ಕೊಲೆ ನಡೆದಿತ್ತು.
ಚೆನ್ನಪ್ಪ ಹೊಸಮನಿ (28) ಕೊಲೆಯಾದವರು. ದೇವಿಕೊಪ್ಪ ಗ್ರಾಮದ ಈಚನಹಳ್ಳಿ ಕ್ರಾಸ್ ಬಳಿ ಕೊಲೆಯಾಗಿತ್ತು. ಮೃತನ ತಾಯಿ ಮಲ್ಲವ್ವ ಹೊಸಮನಿ ಸ್ವತಃ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದಾಗ ಕೊಲೆಗೆ ಕಾರಣ ಏನು ಎಂಬುದು ಬೆಳಕಿಗೆ ಬಂದಿತ್ತು. ಹೆತ್ತ ತಾಯಿಯೇ ತನ್ನ ಕಿರಿ ಮಗ ಹಾಗೂ ಇಬ್ಬರು ಸುಪಾರಿ ಹಂತಕರ ಜೊತೆ ಸೇರಿ ಕೊಲೆ ಮಾಡಿದ್ದಳು.
ಕೊಲೆಯಲ್ಲಿ ಭಾಗಿಯಾದ ತಾಯಿ ಮಲ್ಲವ್ವ ಹೊಸಮನಿ (50), ಕಿರಿಯ ಮಗ ಬಸವರಾಜ ಹೊಸಮನಿ (25), ಸುಪಾರಿ ಹಂತಕರಾದ ಗಲಗಿನಕಟ್ಟಿ ಗ್ರಾಮದ ನಾಗಯ್ಯ ಹಿರೇಮಠ (30), ಬೆಂಡಲಗಟ್ಟಿ ಗ್ರಾಮದ ಚನ್ನಬಸಪ್ಪ ಹಿರೇಮಠ (37) ಎಂಬುವರನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಸುತ್ತಿಗೆ, ಕಬ್ಬಿಣದ ರಾಡು, ಬೈಕ್ ಸೇರಿದಂತೆ ಇತರೆ ವಸ್ತುಗಳನ್ನು ಬಂಧಿತರಿಂದ ಜಪ್ತಿ ಮಾಡಲಾಗಿದೆ.