ಜೂ 12ರ ಕರ್ನಾಟಕ ಬಂದ್ ಎಫೆಕ್ಟ್, NWKRTCಗೆ 97 ಲಕ್ಷ ರು. ನಷ್ಟ
ಹುಬ್ಬಳ್ಳಿ, ಜೂನ್ 20 : ಕಳಸಾ-ಬಂಡೂರಿ, ಮಹದಾಯಿ ಸೇರಿದಂತೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಜೂನ್ 12 (ಸೋಮವಾರ) ರಂದು ವಿವಿಧ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ನಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಭಾರೀ ನಷ್ಟವಾಗಿದೆ.
ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿ ಬೇಡಿಕೆ ಪ್ರಮುಖವಾಗಿದ್ದರಿಂದ ಧಾರವಾಡ ಜಿಲ್ಲೆಯಲ್ಲಿ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಅದರಲ್ಲೂ ಹುಬ್ಬಳ್ಳಿ, ನವಲಗುಂದ, ನರಗುಂದದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬರೋಬ್ಬರಿ 97 ಲಕ್ಷ ರು. ನಷ್ಟ ಸಂಭವಿಸಿದೆ.
ಸಂಸ್ಥೆಯ ವ್ಯಾಪ್ತಿಯಲ್ಲಿ ನಿತ್ಯ 2951 ಮಾರ್ಗಗಳಲ್ಲಿ ಸಂಸ್ಥೆಯ ವಾಹನಗಳು ಸಂಚರಿಸುತ್ತವೆ. ಆದರೆ, ಜೂನ್ 12 ರಂದು ಕರ್ನಾಟಕ ಬಂದ್ ಕರೆಕೊಟ್ಟಿದ್ದರಿಂದ ಬೆಳಿಗ್ಗೆ 8ಗಂಟೆ ವರೆಗೂ ಬಸ್ಗಳು ನಿರಾತಂಕವಾಗಿ ಸಂಚರಿಸಿದವು. ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ಗಳು ರಸ್ತೆಗೆ ಇಳಿಯಲಿಲ್ಲ.

ಹುಬ್ಬಳ್ಳಿ ಸಂಸ್ಥೆಗೆ 49 ಲಕ್ಷ ರು. ನಷ್ಟ
ಪ್ರತಿಭಟನೆಯ ಕಾವು ಹೆಚ್ಚಾಗಿದ್ದರಿಂದ ಸಂಚಾರ ಸಾಧ್ಯವಾಗದೆ ಹುಬ್ಬಳ್ಳಿ ನಗರವೊಂದರಲ್ಲಿಯೇ 403 ಮಾರ್ಗಗಳಲ್ಲಿ ಬಸ್ ಸಂಚಾರ ರದ್ದಾಗಿದ್ದರಿಂದ 49 ಲಕ್ಷ ರು. ನಷ್ಟವಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಗದಗ ಸಂಸ್ಥೆಗೆ ಒಟ್ಟು 20 ಲಕ್ಷ ರು. ನಷ್ಟ
ಇನ್ನೊಂದೆಡೆ ಗದಗ ಜಿಲ್ಲೆಯಲ್ಲಿಯೂ ಹೋರಾಟದ ಕಾವು ತೀವ್ರವಾಗಿದ್ದರಿಂದ ಬೆಳಿಗ್ಗೆ ಸ್ವಲ್ಪ ಹೊತ್ತು ಬಸ್ ಸಂಚರಿಸಿದವು. ಆ ನಂತರ ಸಂಚಾರ ಹಿಂತೆಗೆದುಕೊಳ್ಳಲಾಯಿತು. ಈ ಕಾರಣದಿಂದ 25 ಮಾರ್ಗಗಳು ರದ್ದಾಗಿದ್ದು, ಒಟ್ಟು 20 ಲಕ್ಷ ರು ನಷ್ಟವಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ
ವಿವಿಧ ಸಂಘಟನೆಗಳು ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಭಾಗಶ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತು, ಆದರೆ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬಂದ್ ಎಫೆಕ್ಟ್ ಜೋರಾಗಿತ್ತು. ಕಳಸಾ-ಬಂಡೂರಿ, ಮಹದಾಯಿ ಹೋರಾಟಗಾರರು ರಸ್ತೆ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಿಸಿದ್ದವು.

ಪ್ರತಿಭಟನೆಗಳಿಗೆ ಫಲವಿಲ್ಲ
ಕಳಸಾ-ಬಂಡೂರಿ, ಮಹದಾಯಿ ವಿವಾವನ್ನು ಬಗೆಹರಿಸುವಂತೆ ಹಲವು ದಿನಗಳಿಂದ ನಾನಾ ರೀತಿಯ ಹೋರಾಟಗಳು ನಡೆಯುತ್ತಿವೆ. ದುರದೃಷ್ಟ ಹೋರಾಟಗಳಿಗೆ ಫಲ ಸಿಗುತ್ತಿಲ್ಲ. ಕಳಸಾ-ಬಂಡೂರಿ, ಮಹದಾಯಿಗಾಗಿ ತೀವ್ರ ಸ್ವರೂಪ ಪ್ರತಿಭಟನೆಗಳು ನಡೆದರೂ ಸಹ ಕೇಂದ್ರ ಸರ್ಕಾರ ಕಣ್ಣೆತ್ತಿಯೂ ನೀಡುತ್ತಿಲ್ಲ. ಇದು ಇಲ್ಲಿನ ಜನರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications