ಬಸವರಾಜ್ ಹೊರಟ್ಟಿಗೆ ನಿಲುಕದ ಹೂವಾದ ಪರಿಷತ್ ಸಭಾಪತಿ ಸ್ಥಾನ
ಹುಬ್ಬಳ್ಳಿ, ಸೆಪ್ಟೆಂಬರ್ 22: ಉತ್ತರ ಕರ್ನಾಟಕ ಭಾಗದ ಯಾವುದೇ ಮುಖಂಡರಿಗೆ ರಾಜ್ಯ ಸರಕಾರದ ಮಟ್ಟದಲ್ಲಿ ಗುರುತರ ಸ್ಥಾನಮಾನ ಸಿಗಬೇಕಾದಲ್ಲಿ ಹೋರಾಟ ಮಾಡಿಯೇ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ವಿಶ್ವದಾಖಲೆಯ ವಿಧಾನ ಪರಿಷತ್ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅಂತಹವರಿಗೂ ಸಹ ವಿಧಾನಸಭಾಪತಿ ಸ್ಥಾನ ನೀಡುವ ವಿಚಾರದಲ್ಲಿ ಮೂಲ-ವಲಸೆ ಎನ್ನುವ ತಗಾದೆ ತೆಗೆಯಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಹೊರಟ್ಟಿ ಅವರ ಬೆನ್ನಿಗೆ ನಿಲ್ಲಬೇಕಾದ ಸ್ಥಳೀಯ ಮುಖಂಡರೂ ಸಹ ಮೌನಕ್ಕೆ ಶರಣಾಗಿರುವದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಇದೇ ಸೆಪ್ಟೆಂಬರ್ 21ರಂದು ವಿಧಾನ ಪರಿಷತ್ ಸಭಾಪತಿ ಆಯ್ಕೆಗೆ ದಿನ ನಿಗದಿ ಮಾಡಲಾಗಿತ್ತು. ಆ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ಸ್ವತಃ ಬಸವರಾಜ ಹೊರಟ್ಟಿ ಅವರೂ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಮಲತಾಯಿ ಧೋರಣೆ ತಾಳಿದ್ದರ ಪರಿಣಾಮ ನಿರೀಕ್ಷೆ ಉಲ್ಪಾ ಆಗಿದೆ. ಆಯ್ಕೆ ಪ್ರಕ್ರಿಯೆ ಮುಂದೂಡಿದ್ದರಿಂದ ಹೊರಟ್ಟಿಗೆ ಸಭಾಪತಿ ಸ್ಥಾನ ಕೈತಪ್ಪುವ ಎಲ್ಲ ಲಕ್ಷಣಗಳೂ ಗೋಚರಿಸಿವೆ.
ಎಲ್ಲಾ ಶಾಸಕರು ಸೇರಿ 'ಪೇಸಿಎಂ' ಪೋಸ್ಟರ್ ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ: ಡಿ.ಕೆ. ಶಿವಕುಮಾರ್
ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಗೆದ್ದು ಬೀಗುತ್ತಿರುವ ಬಿಜೆಪಿ, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಮಾತ್ರ ಖಾತೆಯನ್ನೇ ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಪ್ರತಿ ಚುನಾವಣೆಯಲ್ಲಿಯೂ ಏನೇ ಸರ್ಕಸ್ ಮಾಡಿದರೂ ಗೆಲುವು ಮರೀಚಿಕೆಯಾಗಿತ್ತು. ಕೊನೆಗೆ ಗೆಲುವಿನ ಸರದರಾ ಹೊರಟ್ಟಿಯನ್ನೇ ಪಕ್ಷಕ್ಕೆ ಸೆಳೆಯುವ ಮೂಲಕ ಗೆಲುವು ಸಾಧಿಸಿತ್ತು. ಆದರೆ ಈ ಸಂಭ್ರಮಕ್ಕೆ ಕಾರಣರಾದವರನ್ನೆ ಪಕ್ಷ ಮರೆತು ಬಿಟ್ಟಿದೆ.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸೇರಿರುವ ಹೊರಟ್ಟಿ
ಬಸವರಾಜ ಹೊರಟ್ಟಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವನ್ನ ಇಟ್ಟುಕೊಂಡವರು. ಇದೇ ಕಾರಣಕ್ಕೆ ಎಂಟು ಬಾರಿ ಪರಿಷತ್ ಪ್ರವೇಶ ಮಾಡಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಇಂತಹ ಹಿರಿಯ ನಾಯಕರಿಗೆ ಸಭಾಪತಿ ಸ್ಥಾನ ನೀಡದೇ ಬಿಜೆಪಿ ಅನ್ಯಾಯ ಮಾಡಿದೆ. ಬಿಜೆಪಿ ಸೇರ್ಪಡೆಗೊಂಡರೆ ಸಭಾಪತಿ ಸ್ಥಾನ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಮಾತು ಕೊಟ್ಟಿತ್ತು. ಅದರಂತೆ ಬಸವರಾಜ ಹೊರಟ್ಟಿ ಜಿಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.
ಕರ್ನಾಟಕಕ್ಕೆ 2 ರಿಂದ 3 ವಂದೇ ಭಾರತ್ ರೈಲಿಗಾಗಿ ಕೇಂದ್ರ ಸಚಿವರ ಬೇಡಿಕೆ
ಮಾತು ತಪ್ಪಿದ ಹೈಕಮಾಂಡ್
ಬಿಜೆಪಿ ಸೇರಿದ ಬಳಿಕ ಪಶ್ಚಿಮ ಶಿಕ್ಷಕರ ಪರಿಷತ್ ಚುನಾವಣೆಯಲ್ಲಿ ಗೆಲುವು ಸಹ ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಪಕ್ಷದ ವರ್ಚಸ್ಸಿಗಿಂತ ವೈಯಕ್ತಿಕ ವರ್ಚಸ್ಸಿನ ಮೇಲೆ ಬಸವರಾಜ ಹೊರಟ್ಟಿ ಗೆದ್ದು ಬೀಗಿದ್ದರು. ಆದರೆ ಚುನಾವಣೆಯ ಫಲಿತಾಂಶ ಬಂದ ಮಾರನೆಯ ದಿನವೇ ಸಭಾಪತಿ ಸ್ಥಾನಕ್ಕೆ ಪಟ್ಟ ಕಟ್ಟುತ್ತೇವೆಂದು ಬಿಜೆಪಿ ಹೈಕಮಾಂಡ್ ಮಾತು ಕೊಟ್ಟಿತ್ತು. ಅದೇ ಒಂದು ಕಂಡಿಷನ್ ಮೇಲೆ ಬಸವರಾಜ ಹೊರಟ್ಟಿ ತೆನೆ ಇಳಿಸಿ ಕಮಲದ ಹೂವು ಹಿಡಿದ್ದಿದ್ದರು. ಆದರೆ ಈಗ ಚುನಾವಣೆ ಮುಗಿದು ಎರಡೂ ತಿಂಗಳು ಕಳೆದರೂ ಬಸವರಾಜ ಹೊರಟ್ಟಿಯವರನ್ನು ಬಿಜೆಪಿ ಸಭಾಪತಿ ಮಾಡಿಲ್ಲ. ಇದು ಹೊರಟ್ಟಿ ಸೇರ್ಪಡೆ ಪಕ್ಷದಲ್ಲಿ ಆಂತರಿಕ ಅಸಮಾಧಾನ ಇರಬಹುದಾ ಎಂಬ ಅನುಮಾನ ಶುರುವಾಗಿದೆ.
ಸಭಾಪತಿ ಮಾಡಲು ಬಿಜೆಪಿ ಮೀನಾಮೇಷ
ಬಸವರಾಜ ಹೊರಟ್ಟಿ ಪರಿಷತ್ನ ಹಿರಿಯ ಸದಸ್ಯ ಕೂಡ ಹೌದು. ಇಂತಹ ಹಿರಿಯ ಸದಸ್ಯನಿಗೆ ಬಿಜೆಪಿ ಕೊಟ್ಟ ಮಾತನ್ನ ಉಳಿಸಿಕೊಳ್ಳದೇ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಗೆ ಅನ್ಯಾಯ ಮಾಡುತ್ತಿದೆ. ಇನ್ನೂ ಹಂಗಾಮಿ ಸಭಾಪತಿಯ ಮೇಲೆ ಸದನ ನಡೆಯುತ್ತಿದೆ. ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಮಾಡಲು ಬಿಜೆಪಿ ಮೀನಾಮೇಷ ಎಣಿಸುತ್ತಾ, ಸುಳ್ಳು ನೆಪ ಹೇಳಿಕೊಂಡು ದಿನ ದೂಡೂತ್ತಿದೆ. ಮೊದ ಮೊದಲು ಸೆಪ್ಟೆಂಬರ್ 19ಕ್ಕೆ ಸಭಾಪತಿ ಸ್ಥಾನಕ್ಕೆ ಚುನಾವಣೆ ಎನ್ನಲಾಗಿತ್ತು. ನಂತರ ದಿನಗಳಲ್ಲಿ ಸೆಪ್ಟೆಂಬರ್ 22ಕ್ಕೆ ಎಂದು ಹೇಳಲಾಗಿತ್ತು. ಈಗ ಮತ್ತೆ ಡಿಸೆಂಬರ್ ತಿಂಗಳಲ್ಲಿ ಸಭಾಪತಿ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ಸಭಾಪತಿ ಸ್ಥಾನಕ್ಕಾಗಿ ಪಕ್ಷ ತೊರೆದ ಹೊರಟ್ಟಿಗೆ ಸದ್ಯಕ್ಕೆ ಸಭಾಪತಿ ನಿಲುಕದ ಹೂವಾಗಿದೆ.
ಮೌನಕ್ಕೆ ಶರಣಾದ ಉತ್ತರ ಕರ್ನಾಟಕ ಬಿಜೆಪಿ ನಾಯಕರು
ಬಸವರಾಜ ಹೊರಟ್ಟಿಯನ್ನು ಬಿಜೆಪಿಗೆ ಕರೆತರುವ ಕಾಲಕ್ಕೆ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡಿಸುವ ಮಾತುಕತೆ ಮಾಡಲಾಗಿತ್ತಂತೆ. ಈ ಕಾರಣಕ್ಕಾಗಿಯೇ ಹೊರಟ್ಟಿ ಅವರು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು. ಹೊರಟ್ಟಿ ಅವರ ಗುಣಧರ್ಮಕ್ಕೆ ಬಿಜೆಪಿ ಹೊಂದುವುದಿಲ್ಲ ಎನ್ನಲಾಗಿತ್ತು. ಆದರೆ ತಮ್ಮ ಹಾಗೂ ಮಗನ ರಾಜಕೀಯ ಭವಿಷ್ಯ ಅರಸಿ ಅವರು ಬಿಜೆಪಿ ಬಂದರು. ಅದರಲ್ಲೂ ಪ್ರಹ್ಲಾದ ಜೋಶಿ ಅವರ ಒತ್ತಾಸೆಯ ಮೇರೆಗೆ ಬಿಜೆಪಿ ಸೇರಿದರು. ಮುಂದಿನ ಸಭಾಪತಿ ಸ್ಥಾನ ಸಿಗಲಿದೆ ಎನ್ನುವ ಆಶಾಭಾವನೆಯಿಂದಲೇ ಅವರು ಬಿಜೆಪಿ ಸೇರಿದ್ದಂತ್ತೂ ಸತ್ಯ. ಈ ವಿಚಾರ ಮುನ್ನೆಲೆಗೆ ಬಂದರೂ ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರಾಗಲಿ, ಹೊರಟ್ಟಿ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಮುಂಚೂಣಿ ವಹಿಸಿದ ಪ್ರಲ್ಹಾದ್ ಜೋಶಿ ಅವರಾಗಲಿ ಈಗ ತುಟಿಪಿಟಿಕ್ ಎನ್ನುತ್ತಿಲ್ಲ.
ಹಾಗೆ ನೋಡಿದರೆ ಮುತುವರ್ಜಿ ವಹಿಸಿ ಹಿರಿತನ, ಅನುಭವದ ಮೇಲೆ ಬಸವರಾಜ ಹೊರಟ್ಟಿ ಅವರನ್ನು ಗೌರವದಿಂದಲೇ ಚುನಾವಣೆ ಪ್ರಕ್ರಿಯೆ ನಡೆಸದೇ ಸ್ಪೀಕರ್ ಮಾಡಬೇಕಿತ್ತು. 8 ಬಾರಿ ಆಯ್ಕೆಯಾಗಿ ಗಿನ್ನಿಸ್ ದಾಖಲೆ ಮಾಡಿರುವ ಹೊರಟ್ಟಿ ಅವರನ್ನು ಅನಾಯಾಸವಾಗಿ ಸ್ಪೀಕರ್ ಮಾಡಿದ್ದೇ ಆದಲ್ಲಿ ಬಿಜೆಪಿಗೂ ಗೌರವ ಪ್ರಾಪ್ತಿಯಾಗುತ್ತಿತ್ತು. ಆದರೆ ಬಿಜೆಪಿಗೆ ಕರೆತಂದು ಎಲ್ಲೋ ಕಡೆಗಣಿಸುತ್ತಿರುವುದು ಸಹಜವಾಗಿ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಮುಖ್ಯವಾಗಿ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್, ಅರವಿಂದ ಬೆಲ್ಲದರಂತಹ ಈ ಭಾಗದ ಪ್ರಮುಖ ನಾಯಕರು ಬಸವರಾಜ ಹೊರಟ್ಟಿ ಅವರ ಬೆನ್ನಿಗೆ ನಿಲ್ಲದೇ ಇರುವುದು ಏಕೆ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.