ರಸ್ತೆ ಅವ್ಯವಸ್ಥೆ, ಅನಾಥ ರಸ್ತೆ ಎಂದು ನಾಮಕರಣ ಮಾಡಿ ವಿಭಿನ್ನ ಪ್ರತಿಭಟನೆ
ಹುಬ್ಬಳ್ಳಿ, ಡಿ. 03: ಉತ್ತರ ಕರ್ನಾಟಕದಲ್ಲಿ ಶಿಕ್ಷಣಕ್ಕೆ ವಿದ್ಯಾ ಕಾಶಿ ಧಾರವಾಡ ಹಾಗೂ ವಾಣಿಜ್ಯಕ್ಕೆ ಹುಬ್ಬಳ್ಳಿ ನಗರ ಬಹಳ ಪ್ರಸಿದ್ಧಿಯನ್ನು ಪಡೆದಿವೆ. ಆದರೆ, ಇಲ್ಲಿನ ರಸ್ತೆಗಳ ಸ್ಥಿತಿ ನೋಡಿದರೇ ಮಾತ್ರ, ಯಾವುದೋ ಕುಗ್ರಾಮದಲ್ಲಿ ಇದ್ದೇವೆ ಎನಿಸದೆ ಇರದು.
ಐತಿಹಾಸಿಕ ಮಠ ಸರ್ವ ಧರ್ಮಗಳ ಸಮನ್ವಯದ ಕೇಂದ್ರ ಶ್ರೀ ಸಿದ್ಧರೂಢ ಮಠ, ಬಸವೇಶ್ವರರು ಸಾಮಾಜಿಕ ಸಮಾನತೆ ಕ್ರಾಂತಿ ದೀಪ ಹಚ್ಚಿದ ನಾಡು ಇದು. ಇನ್ನು ಐಐಐಟಿ, ಐಐಟಿ, ಬಿಆರ್ಟಿಎಸ್, ರಾಜ್ಯದ ಏಕೃಕ ಕಾನೂನು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಹೀಗೇ ಹತ್ತು ಹಲವಾರು ಪ್ರತಿಷ್ಠಿತೆಗೆ ಹೆಸರುವಾಸಿಯಾಗಿದೆ. ಆದರೆ ಅದಕ್ಕೆ ಅಪವಾದ ಎಂಬಂತೆ ಇಲ್ಲಿನ ರಸ್ತೆಗಳ ಸ್ಥಿತಿ ಅಯ್ಯೋಮಯವಾಗಿವೆ.
99 ಸಾವಿರ ನಕಲಿ ಮತಗಳನ್ನು ಡಿಲೀಟ್ ಮಾಡಿದ್ದೇವೆ: ಹುಬ್ಬಳ್ಳಿ ಜಿಲ್ಲಾಧಿಕಾರಿ ಸ್ಪಷ್ಟನೆ
ಪ್ರಮುಖ ನಗರವಾಗಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಸುತ್ತಮುತ್ತಲಿನ ಸಾಕಷ್ಟು ಜನರು ಜಿಲ್ಲೆಯ ಜನ ಭೇಟಿ ಕೊಡುತ್ತಾರೆ. ಆದರೆ ಇಲ್ಲಿನ ರಸ್ತೆ ಗುಂಡಿಗಳು ಅವರನ್ನು ಸ್ವಾಗತ ಮಾಡುತ್ತಿವೆ. ಅವಳಿ ನಗರದ ಕೆಟ್ಟ ರಸ್ತೆಗಳಿಂದ ನಗರ ವಾಸಿಗಳು ಬೇಸತ್ತು ಹೋಗಿದ್ದಾರೆ. ಇಂತಹ ನಗರದಲ್ಲಿನ ರಸ್ತೆಯನ್ನ ನೋಡಿದರೆ ನರಕವಾಗಿದೆ.

ಆನಂದನಗರದ ರಸ್ತೆಗೆ ಅನಾಥ ರಸ್ತೆ ಎಂದು ನಾಮಕರಣ!
ಕನ್ನಡಪರ ಸಂಘಟನೆಗಳು, ವಿವಿಧ ಸೇವಾ ಸಂಸ್ಥೆಗಳು, ಸಮಾಜ ಸೇವಕರು, ಹಲವಾರು ಪಕ್ಷದ ಮುಖಂಡರು ಪ್ರತಿಭಟನೆ ಮನವಿ ಮಾಡಿದರೂ ಸಹ ಈ ರಸ್ತೆಗಳ ದುರಸ್ತಿಗೆ ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುತಿಲ್ಲ. ಆದ್ದರಿಂದ ಅವರ ನಿರ್ಲಕ್ಷ್ಯ ಖಂಡಿಸಿ ನಗರದ ಶ್ರೀ ಸಿದ್ದಾರೂಢರ ಸನ್ನಿದಿಗೆ ಕೂಗಳತೆ ಇರುವ ಹಳೆ ಹುಬ್ಬಳ್ಳಿಯ ಆನಂದನಗರದ ರಸ್ತೆಗೆ ಅನಾಥ ರಸ್ತೆಗೆ ಸ್ವಾಗತ ಎಂದು ಬೋರ್ಡ್ ಹಾಕಿ ಪ್ರತಿಭಟನೆ ಮಾಡಲಾಯಿತು.
ಆನಂದ್ ನಗರದ ನಿವಾಸಿಗಳು ಹಾಗೂ ಹಲವಾರು ಸಂಘಟನೆಗಳ ಮುಖಂಡರು ನೇತೃತ್ವ ವಹಿಸಿದ್ದರು. ಆನಾಥ ರಸ್ತೆಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಮಲಗಿ ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದ ಜನ!
ಕಳೆದ ಹತ್ತು ವರ್ಷಗಳಿಂದ ರಸ್ತೆ ದುರಸ್ಥಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ರಸ್ತೆಯಲ್ಲಿ ಮಲಗಿ ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದರು. ನಮ್ಮ ಮತ ಶಾಸಕರಿಗೆ , ಕಾರ್ಪೋರೇಟರ್ಗಳಿಗೆ ಹಿತ, ಜನರಿಗೆ ವಿಷ ಎಂದು ಬೋರ್ಡ್ ಹಾಕಿದರು. ಕೈಯಲ್ಲಿ ಅನಾಥ ರಸ್ತೆ ಎಂದು ಬೋರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಆನಂದ್ ನಗರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಇದಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಅವ್ಯವಸ್ಥೆ
ಹುಬ್ಬಳ್ಳಿ ನಗರದಲ್ಲಿ ರಸ್ತೆಗಳು ಗುಂಡಿಗಳು ಬಾಯ್ತೆರೆದು ಕುಳಿತಿದ್ದು ಯಾವಾಗ ಯಾರನ್ನು ಬಲಿ ತೆಗೆದುಕೊಳ್ಳುತ್ತಿವೆ ಗೊತ್ತಿಲ್ಲ. ಸರ್ಕಾರ, ಹುಬ್ಬಳ್ಳಿ ಧಾರವಾಡ ಮಹಾನಗರ, ಸ್ಥಳೀಯ ಮುಖಂಡರ ವಿರುದ್ಧ ದೀಪ ಹಚ್ಚಿ ಜನರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಗಳು ಗುಂಡಿಗಳ ಬಗ್ಗೆ ಎಷ್ಟೇ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದರು ಏನೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ರಸ್ತೆಯನ್ನು ಇನ್ನು ಮುಂದೆ ಅನಾಥ ರಸ್ತೆ ಎಂದು ಕರೆಯಲು ಜನರಿಗೆ ಮನವಿ ಮಾಡಿದರು. ಇದೇ ವೇಳೆ ಸ್ಥಳೀಯ ಮುಖಂಡರು ಅಸಮಾಧಾನ ಹೊರಹಾಕಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವಂತೆ ಆಗ್ರಹ ಹುಬ್ಬಳ್ಳಿ ನಗರ ನಿವಾಸಿಗಳು ರಸ್ತೆ ಗುಂಡಿ ದುರಸ್ತಿ ಕಾರ್ಯ ಮಾಡದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ರಸ್ತೆಗುಂಡಿಗಳಿಂದ ಹುಬ್ಬಳ್ಳಿಯಲ್ಲಿ ಹಲವು ಅಪಘಾತಗಳು
ರಸ್ತೆ ಗುಂಡಿಗಳಿಂದ ವಾಹನ ಸವಾರರ ಜೀವ ಅಪಾಯದಲ್ಲಿದೆ. ಗುಂಡಿ ಬಿದ್ದ ರಸ್ತೆಗಳಿಂದ ಹಾಗೂ ಹಾಳಾದ ರಸ್ತೆಗಳಿಂದ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳಲ್ಲಿ ಪ್ರಯಾಣಿಸುವವರ ಆರೋಗ್ಯ ಸ್ಥಿತಿ ಕೆಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಸಂಬಂಧಪಟ್ಟ ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವುದರೊಂದಿಗೆ ರಸ್ತೆಗಳ ಗುಣಮಟ್ಟ ಹಾಳಾಗದಿರುವ ಬಗ್ಗೆ ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.