ಉತ್ತರ ಕರ್ನಾಟಕದೆಲ್ಲಡೆ ರಂಜಾನ್ ಸಂಭ್ರಮ
ಹುಬ್ಬಳ್ಳಿ, ಜೂನ್ 26 : ನಗರವೂ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತ್ರ್ (ರಂಜಾನ್)ನ್ನು ಸಂಭ್ರಮದಿಂದ ಆಚರಿಸಲಾಯಿತು.
29 ದಿನಗಳ ಉಪವಾಸ ಅಂತ್ಯದ ಬಳಿಕ ಸೋಮವಾರ ಬೆಳಿಗ್ಗೆ ಹೊಸ ಉಡುಗೆಗಳನ್ನು ತೊಟ್ಟು ಮುಸಲ್ಮಾನ ಬಾಂಧವರು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ಮಾಡಿದರು. ಅಲ್ಲದೆ, ಮೂರುಸಾವಿರ ಮಠದ ಶ್ರೀಗಳಾದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ವೀರಶೈವ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಮುಸ್ಲಿಮರಿಗೆ ಶುಭ ಕೋರಿದರು (ಈದ್ ಮುಬಾರಕ್).

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದ ನವಾಯತರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಈದ್ಗಾ ಮುಂದೆ ನಮಾಜು ಸಲ್ಲಿಸಿದರು. ವಿಜಾಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲೂ ಮುಸ್ಲಿಮರು ರಂಜಾನ್ ವ್ರತಕ್ಕೆ ಕೊನೆಹಾಡಿ ಹಬ್ಬದ ಸಂಭ್ರಮದಲ್ಲಿ ನಿರತರಾಗಿದ್ದರು.

ನಮಾಜ್ ಬಳಿಕ ಏರ್ಪಡಿಸಿದ್ದ ಧಾರ್ಮಿಕ ಸಭೆಗಳಲ್ಲಿ ಮಾತನಾಡಿದ ಮೌಲ್ವಿಗಳು ರಂಜಾನ್ ಮಾಸದ ಪಾವಿತ್ರ್ಯ, ಆತ್ಮಶುದ್ಧಿಯ ಸಂಕೇತ. ಈ ಹಬ್ಬದ ಅಂಗವಾಗಿ ಕೊಡುವ ಜಕಾತ್ (ದಾನ) ಮಹತ್ವವನ್ನು ವಿವರಿಸಿದರು.

ಹಬ್ಬದ ಅಂಗವಾಗಿ ಸಿಹಿ ಖಾದ್ಯ ಸುರಕುಂಬಾ ಸವಿದರಲ್ಲದೇ ಹಣ್ಣು ಹಂಪಲುಗಳನ್ನು ಸೇವಿಸಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂತಸ ಹಂಚಿಕೊಂಡರು.












Click it and Unblock the Notifications