ತಾಯಿ, ಹಸುಗೂಸುಗಳ ಮರಣ ಮೃದಂಗ: ಆತಂಕಕಾರಿ ವಿಷಯ ಬಿಚ್ಚಿಟ್ಟ ಕಿಮ್ಸ್
ಹುಬ್ಬಳ್ಳಿ, ನವೆಂಬರ್9 : ತುಮಕೂರು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯದಿಂದ ನಡೆದ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣ ರಾಜ್ಯಾದ್ಯಂತ ಎಲ್ಲರನ್ನೂ ದಂಗು ಬಡಿಸಿತ್ತು. ಈ ಪ್ರಕರಣ ರಾಜ್ಯ ಸರ್ಕಾರ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ಎಚ್ಚರಿಕೆ ಗಂಟೆ ನೀಡಿತ್ತು.
ಈ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದೆ. ಕರ್ನಾಟಕದಲ್ಲಿ ಬಾಣಂತಿಯರು ಹಾಗೂ ನವಜಾತ ಮಕ್ಕಳ ಮರಣ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಕಿಮ್ಸ್ ಆಸ್ಪತ್ರೆ ತಿಳಿಸಿದೆ.
ಉತ್ತರ ಕರ್ನಾಟಕದಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಹೆಚ್ಚಾಗಿದೆ ಎನ್ನುವ ಹೇಳಿಕೆಯನ್ನು ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರೆಯಿಸಿಕೊಳ್ಳುವ ಕಿಮ್ಸ್ ಬಿಡುಗಡೆ ಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕ ತಾಯಿ ಮತ್ತು ಮಗು ಸಾವಿನ ಪ್ರಮಾಣದಲ್ಲಿ ಅಕ್ಕಪಕ್ಕದ ರಾಜ್ಯಗಳನ್ನು ಮೀರಿಸಿದೆ ಎಂಬ ಸುದ್ದಿ ಎಲ್ಲರನ್ನೂ ಕಂಗೆಡುವಂತೆ ಮಾಡಿದೆ.

ಏಳು ತಿಂಗಳಲ್ಲಿ 200ಕ್ಕೂ ಹೆಚ್ಚು ಶಿಶುಗಳ ಸಾವು
ತಾಯಿ ಮತ್ತು ನವಜಾತ ಶಿಶುವಿನ ಸಾವಿನಲ್ಲಿ ಕೇರಳ ಮತ್ತು ಮಹಾರಾಷ್ಟ್ರ, ತಮಿಳುನಾಡನ್ನು ಹಿಂದಿಕ್ಕಿರುವ ಉತ್ತರ ಕರ್ನಾಟಕದಲ್ಲಿ ಏಳು ತಿಂಗಳಲ್ಲಿ 200ಕ್ಕೂ ಹೆಚ್ಚು ನವಜಾತ ಶಿಶುಗಳ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ. ಅಪೌಷ್ಟಿಕತೆಯ ಕೊರತೆಯಿಂದ ತಾಯಿ ಮಕ್ಕಳ ಸಾವು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಆರೋಗ್ಯಕರ ಸಮಾಜ ಸೃಷ್ಟಿ ಮಾಡುವ ನಿಟ್ಟಿನಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯಕ್ಕಾಗಿ ರಾಜ್ಯ ಸರ್ಕಾರ ನೂರಾರು ಕೋಟಿ ಅನುದಾನವನ್ನು ಖರ್ಚು ಮಾಡುತ್ತಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ನಿಯಂತ್ರಿಸಲು ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಸಹ ಪ್ರಯೋಜನವಾಗುತ್ತಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ತಾಯಿ ಮತ್ತು ಮಗುವಿನ ಮರಣ ದೇಶದ ಹೆಚ್ಚಾಗುರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಏಪ್ರಿಲ್ನಿಂದ ಈವರೆಗೆ 41 ಬಾಣಂತಿಯರು ಸಾವು
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಕಿಮ್ಸ್) ದಾಖಲಾದ ಅಂಕಿ ಅಂಶಗಳು ಬಾಣಂತಿ ಮತ್ತು ಶಿಶುಗಳಿಗೆ ಸುರಕ್ಷತೆಯಿಲ್ಲ ಎಂಬುವುದನ್ನು ಸಾಬೀತು ಪಡಿಸಿದೆ. ಕಿಮ್ಸ್ ಅಂಕಿ ಅಂಶಗಳ ಪ್ರಕಾರ ಈ ವರ್ಷದ ಏಪ್ರಿಲ್ನಿಂದ ಇಲ್ಲಿಯವರೆಗೆ 206 ಶಿಶುಗಳು ಹಾಗೂ 41 ಬಾಣಂತಿಯರು ಮೃತಪಟ್ಟಿದ್ದಾರೆ. ಈ ಪೈಕಿ ಧಾರವಾಡ ಜಿಲ್ಲೆ ಒಂದರಲ್ಲಿಯೇ 17 ತಾಯಂದಿರು ಹಾಗೂ 122 ಶಿಶುಗಳು ಸಾವನ್ನಪ್ಪಿದೆ ಎನ್ನಲಾಗಿದೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಅಂದರೆ ಗದಗ, ಹಾವೇರಿ, ಕೊಪ್ಪಳ,ಕಾರವಾರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯಿಂದ ತುರ್ತು ಸಂದರ್ಭಗಳಲ್ಲಿ ಬಂದ ಪ್ರಕರಣಗಳು ಈ ಅಂಕಿ ಅಂಶಗಳಲ್ಲಿ ಸೇರಿದೆ. ಈ ಸಾವಿನ ಪ್ರಮಾಣದಿಂದ ವೈದ್ಯಕೀಯ ಲೋಕದಲ್ಲಿ ಕಳವಳ ಶುರುವಾಗಿದೆ.

ಆಹಾರ ಪದ್ಧತಿಯಿಂದಲೂ ಅಪಾಯ
ಈ ಪ್ರಮಾಣದ ಸಾವಿಗೆ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರು ಮತ್ತು ಕುಟುಂಬಸ್ಥರ ನಿರ್ಲಕ್ಷ್ಯ, ಅನಕ್ಷರಸ್ಥತೆ ಮತ್ತು ಮೂಢ ನಂಬಿಕೆ ಮೂಲ ಕಾರಣ ಎನ್ನಲಾಗುತ್ತಿದೆ. ಇದರ ಜೊತೆಗೆ ಅಪೌಷ್ಟಿಕತೆ ಆಹಾರ ಪದ್ದತಿಯಿಂದ, ಬಿಪಿ, ಮೂರ್ಚೆರೋಗ, ಡೆಂಗ್ಯೂ ಜ್ವರ, ರಕ್ತದ ಕಣಗಳು ಕಡಿಮೆಯಾಗುವುದು ಗರ್ಭಿಣಿಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದರಿಂದ ಶಿಶು ಮತ್ತು ತಾಯಿಯರ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶಿಶು ಮತ್ತು ತಾಯಿಯರ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ.

ಮಾರ್ಗಮಧ್ಯೆದಲ್ಲಿ ಅನೇಕ ತಾಯಿ-ಮಗು ಸಾವು
ಇತ್ತೀಚಿನ ದಿನಗಳಲ್ಲಿ ಎದೆ ಹಾಲು ಬಿಟ್ಟು ಬೇರೆ ಆಹಾರ ನೀಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಇದು ಸಹ ಸಾವಿನ ಪ್ರಮಾಣ ಜಾಸ್ತಿಯಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರ ಜೊತೆಗೆ ಹೆರಿಗೆ ಸಮಯದಲ್ಲಿ ಗಂಭೀರ ಸ್ವರೂಪದ ಸಮಯದಲ್ಲಿ ಬೇರೆ ಬೇರೆ ಜಿಲ್ಲೆಗಳ ವೈದ್ಯರು ಚಿಕಿತ್ಸೆ ನೀಡಲು ಹೆದರಿ, ಅಂತಹ ಪ್ರಕರಣಗಳನ್ನು ಕಿಮ್ಸ್ಗೆ ಕಳುಹಿಸುತ್ತಾರೆ. ಇದರಿಂದಾಗಿ ಮಾರ್ಗಮಧ್ಯದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಜನರ ನಿರ್ಲಕ್ಷ್ಯ ಮತ್ತು ಆರೋಗ್ಯ ಇಲಾಖೆಯ ಜಾಣ ಕುರುಡನಕ್ಕೆ ಕಣ್ಣುಬಿಡುವ ಮೊದಲೇ ಹಸು ಕಂದಮ್ಮಗಳ ಬಲಿಯಾಗುತ್ತಿವೆ. ಈ ವಿಚಾರವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.












Click it and Unblock the Notifications