ಹೊರಟ್ಟಿಗೆ ಜೀವ ಬೆದರಿಕೆ, ತನಿಖೆ ಆರಂಭಿಸಿದ ಪೊಲೀಸ್
ಹುಬ್ಬಳ್ಳಿ, ನವೆಂಬರ್ 9 : ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹೊರಟ್ಟಿ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರಟ್ಟಿ ಅವರಿಂದ ಮಾಹಿತಿಗಳನ್ನು ಪಡೆದುಕೊಂಡರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಪತ್ರದಲ್ಲಿ ಕೆಲವು ಜೀವ ಬೆದರಿಕೆ ಪದಗಳ ಪ್ರಸ್ತಾಾಪ ಆಗಿದೆ. ಹೊರಟ್ಟಿ ಅವರ ಮನೆಗೆ ಭದ್ರತೆ ನೀಡಲಾಗಿದೆ. ಪತ್ರ ಬಂದ ಬಗ್ಗೆ ಡಿಸಿಪಿ ರೇಣುಕಾ ಸುಕುಮಾರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ' ಎಂದರು.
ಬೆದರಿಕೆ ಪತ್ರ ಬಂದಿರುವ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ ಅವರು, 'ಯಾರ ಗೊಡ್ಡು ಬೆದರಿಕೆಗೂ ಹೆದರುವುದಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಿಂದ ನಾನು ಹಿಂದೆ ಸರಿಯುವುದಿಲ್ಲ. 38 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಇಂತಹ ಪತ್ರ ಬಂದಿದೆ' ಎಂದರು.
'ಈಗಾಗಲೇ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ನನಗೆ ಯಾವುದೇ ಹೆಚ್ಚಿನ ಭದ್ರತೆ ಬೇಡ ಎಂದಿದ್ದೇನೆ. ಆದರೆ, ಪೊಲೀಸ್ ಇಲಾಖೆ ಭದ್ರತೆಯನ್ನು ಹೆಚ್ಚು ಮಾಡಿದ್ದಾರೆ. ಯಾರ ಬೆದರಿಕೆಗೂ ಹೆದರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಕೊನೆಯ ಉಸಿರು ಇರುವವರೆಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಇರುತ್ತೇನೆ' ಎಂದು ಸ್ಪಷ್ಟಪಡಿಸಿದರು.












Click it and Unblock the Notifications