ದಾಖಲೆ ಸೃಷ್ಟಿಸಿದ ರಾಜಕಾರಣಿ ಜಗದೀಶ್ ಶೆಟ್ಟರ್ಗೆ "ಲಂಗು ಲಗಾಮು" ಹಾಕಲು ಮುಂದಾದ ಹೈಕಮಾಂಡ್
ಹುಬ್ಬಳ್ಳಿ, ಏಪ್ರಿಲ್, 12: ರಾಜ್ಯ ರಾಜಕಾರಣದಲ್ಲಿ ಎಲ್ಲರ ದೃಷ್ಟಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದತ್ತ ನೆಟ್ಟಿದೆ. ಆರು ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ನಾಯಕನಿಗೆ ಈಗ ಟಿಕೆಟ್ ನೀಡಲು ಬಿಜೆಪಿ ಮೀನಾಮೇಷ ಏಣಿಸುತ್ತಿದೆ. ಮತ್ತೊಂದೆಡೆ ಶತಾಯ ಗತಾಯ ಟಿಕೆಟ್ ಪಡೆದೇ ತೀರುತ್ತೇನೆ ಎಂಬ ಮಹದಾಸೆಯೊಂದಿಗೆ ಸೆಣಸಾಟ ನಡೆಸಿರುವ "ಆ" ನಾಯಕನ ಇತಿಹಾಸವನ್ನು ಇಲ್ಲಿ ತಿಳಿಯಿರಿ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಡೆದು ಬಂದು ದಾರಿಯೇ ಅದೊಂದು ರೋಚಕ ಕಾಲಘಟ್ಟವಾಗಿದೆ. ಹೌದು, 1990ರಲ್ಲಿ ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ಘಟಕದ ಅಧ್ಯಕ್ಷ, 1994ರಲ್ಲಿ ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಾಜಕಾರಣ ಜೀವನ ಆರಂಭಿಸಿದ ನಾಯಕ ಜಗದೀಶ್ ಶೆಟ್ಟರ್ ಆಗಿದ್ದಾರೆ.

ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಶೆಟ್ಟರ್
ಇನ್ನು 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಮೂಲಕ ಅವರು ಜನಸೇವೆಗೆ ಆಯ್ಕೆ ಆದರು. ಅಲ್ಲದೇ 1999ರಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ ಮಾಡಿರುವ ಕೀರ್ತಿಯನ್ನು ಹೊಂದಿದ್ದಾರೆ. ಮತ್ತೆ 1999ರಲ್ಲಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು.
1999ರಲ್ಲಿ 11ನೇ ವಿಧಾನಸಭೆಯ ವಿರೋದ ಪಕ್ಷದ ನಾಯಕನಾಗಿ ಆಯ್ಕೆಯಾದರು. 2004ರಲ್ಲಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದು, 2005 ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೂಡ ಜವಾಬ್ದಾರಿ ಕರ್ತವ್ಯವನ್ನು ನಿಭಾಯಿಸಿದ್ದಾರೆ. 2006ರಲ್ಲಿ ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ) ಆಗಿ ಕಾರ್ಯ ನಿರ್ವಿಸಿದ್ದಾರೆ.

2008ರಲ್ಲಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಶೆಟ್ಟರ್, 2008ರಲ್ಲಿ 13ನೇ ವಿಧಾನಸಭೆ ಸಭಾದ್ಯಕ್ಷರಾಗಿ ಉತ್ತರ ಕರ್ನಾಟಕದ ಗೌರವ ಹೆಚ್ಚಿಸಿದ ನಾಯಕರಾಗಿದ್ದಾರೆ. 2009ರಲ್ಲಿ ಗಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿಯೂ ಕೂಡ ಜವಾಬ್ದಾರಿ ನಿಭಾಯಿಸಿದ್ದಾರೆ.
2012 ಜುಲೈ 12 ರಂದು ಗುರುವಾರ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಜಗದೀಶ್ ಶೆಟ್ಟರ್, 2013ರಲ್ಲಿ ಐದನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು. 2013ರಲ್ಲಿ ವಿಧಾನಸಭೆಯ ವಿರೋದ ಪಕ್ಷದ ನಾಯಕನಾಗಿ ಜವಾಬ್ದಾರಿ ನಿಭಾಯಿಸಿದ ಶೆಟ್ಟರ್, 2018ರಲ್ಲಿ 6ನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ.
2019ರಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿ ಕೆಲಸ ನಿರ್ವಸಿರುವ ಜಗದೀಶ್ ಶೆಟ್ಟರ್ ನಾಯಕತ್ವ ಬದಲಾವಣೆಯಲ್ಲಿ ಸಚಿವ ಸ್ಥಾನ ಧಿಕ್ಕರಿಸಿದ ನಾಯಕರಾಗಿದ್ದಾರೆ.
ಜಗದೀಶ್ ಶೆಟ್ಟರ್ ಬಾಂಬ್
ಕರ್ನಾಟಕ ರಾಜಕಾರಣವು ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಾಂಬ್ವೊಂದನ್ನು ಸಿಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಮುನಿಸಿಕೊಂಡಿರುವ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದಾರೆ. ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಹೊಸ ಪ್ರಯೋಗ ಮಾಡಿ ಬಿಜೆಪಿ ಯಶಸ್ವಿಯಾಗಿತ್ತು. ಅದೇ ಮಾದರಿಯನ್ನು ಕರ್ನಾಟಕ ಸೇರಿದಂತೆ ಮುಂದಿನ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾನಣೆಯಲ್ಲಿ ಪ್ರಯೋಗಿಸಲು ಬಿಜೆಪಿ ಹೈಕಮಾಂಡ್ ಸಜ್ಜಾಗಿದೆ.
ಈ ಬಾರಿ ಹಲವು ಹಿರಿಯ ಶಾಸಕರಿಗೆ ಕರ್ನಾಟಕ ಚುನಾವಣೆಯಲ್ಲಿ ಟಿಕೆಟ್ ನೀಡದೇ ಇರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಹಿರಿಯ ನಾಯಕರಾದ ಸೋಮಣ್ಣ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಸೇರಿ ಪಕ್ಷದ ಇನ್ನೂ ಹಲವರಿಗೆ ನಿವೃತ್ತಿ ಘೋಷಣೆ ಬಗ್ಗೆ ಹೈಕಮಾಂಡ್ ಖಡಕ್ ಸಂದೇಶ ನೀಡಿದೆ ಅಂತ ಇತ್ತೀಚೆಗಷ್ಟೇ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications