ಹಣ ಇದ್ದವರಿಗೆ ಬಿಜೆಪಿ ಟಿಕೆಟ್: ಚಂದ್ರಶೇಖರ ಗೋಕಾಕ್ ಬೆಂಬಲಿಗರ ಬೃಹತ್ ಪ್ರತಿಭಟನೆ
ಹುಬ್ಬಳ್ಳಿ, ಏಪ್ರಿಲ್ 12: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಮುನ್ನೆಲೆಗೆ ಬಂದಿದೆ. ಚಂದ್ರಶೇಖರ ಗೋಕಾಕ್ ಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಚಂದ್ರಶೇಖರ ಗೋಕಾಕ್ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಹೈ ಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಚಂದ್ರಶೇಖರ ಗೋಕಾಕ ಅಭಿಮಾನಿಗಳು, ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ರಸ್ತೆಯಲ್ಲಿಯೇ ಕುಳಿತು, ಗೋಕಾಕ್ ಭಾವಚಿತ್ರ ಹಿಡಿದು ಟಿಕೆಟ್ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದು, ಚಂದ್ರಶೇಖರ್ ಗೋಕಾಕ್ ಸಂಘ ಪರಿವಾರದಿಂದ ಬಂದವರು. ಟಿಕೆಟ್ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಅವರು ಪರಾಭವಗೊಂಡರು, ಇದೊಂದು ಬಾರಿಗೆ ಚಂದ್ರಶೇಖರ ಗೋಕಾಕ್ ಅವರಿಗೆ ನೀಡಬೇಕು. ಬಿಜೆಪಿ ಹೈಕಮಾಂಡ ಹಣ ಇದ್ದ ಡಾ.ಕ್ರಾಂತಿ ಕಿರಣ ಅವರಿಗೆ ಟಿಕೆಟ್ ನೀಡಿದೆ. ಅದನ್ನು ಬದಲಾವಣೆ ಮಾಡಿ ಚಂದ್ರಶೇಖರ ಗೋಕಾಕ್ ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಡ ಹಾಕಿದ್ದಾರೆ.
ಧಾರವಾಡ ಬಿಜೆಪಿಯಲ್ಲೂ ಭುಗಿಲೆದ್ದ ಭಿನ್ನಮತ
ಧಾರವಾಡ: ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇ ಮಾಡಿದ್ದು, ಆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಲಕ್ಷ್ಮಣ ಸವದಿಯಂತಹ ಘಟಾನುಘಟಿ ನಾಯಕರೇ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರಾಮದುರ್ಗ, ಬೈಲಹೊಂಗಲ, ಕುಂದಗೋಳ ಸೇರಿದಂತೆ ಅನೇಕ ಕಡೆಗಳಲ್ಲಿ ಭಿನ್ನಮತ ಸ್ಫೋಟಗೊಂಡು ಟಿಕೆಟ್ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.
ಇನ್ನು ರಾಜ್ಯದ ವಿವಿಧ ಕ್ಷೇತ್ರಗಳಿಗಿಂತ ಹೈವೋಲ್ಟೇಜ್ ಕ್ಷೇತ್ರವಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ಪ್ರಭಾವಿ ಮುಖಂಡರಾಗಿರುವ ತವನಪ್ಪ ಅಷ್ಟಗಿ ಪ್ರಸಕ್ತ ವರ್ಷ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ಬದಲು ಮರಳಿ ಹಾಲಿ ಶಾಸಕ ಅಮೃತ ದೇಸಾಯಿ ಅವರಿಗೆ ಟಿಕೆಟ್ ಸಿಕ್ಕಿದ್ದಕ್ಕೆ ತವನಪ್ಪ ಅಷ್ಟಗಿ ಬಿಜೆಪಿ ಮೇಲೆ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಗೆ ಈ ಕ್ಷೇತ್ರದಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತು ಬಿಜೆಪಿಯ ಹಾಲಿ ಶಾಸಕ ಅಮೃತ ದೇಸಾಯಿ ಅವರು ತವನಪ್ಪ ಅಷ್ಟಗಿ ಮನೆಗೆ ಹೋಗಿ ಅವರ ಮನವೊಲಿಸುವ ಕೆಲಸವನ್ನು ಮಾಡಿದ್ದಾರೆ. ಆದರೆ, ಅವರ ಮಾತಿಗೆ ಒಪ್ಪದ ತವನಪ್ಪ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಇನ್ನೆರಡು ದಿನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ತಮ್ಮ ಮುಂದಿನ ನಡೆ ಏನು ಎಂಬುದನ್ನು ಪ್ರಕಟಿಸಲಿದ್ದಾರೆ. ಇವರ ಈ ಬೆಳವಣಿಗೆ ನೋಡದರೆ ತವನಪ್ಪ ಪಕ್ಷೇತರರಾಗಿ ಹಾಲಿ ಶಾಸಕ ದೇಸಾಯಿ ವಿರುದ್ಧ ತೊಡೆ ತಟ್ಟುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಶಾಸಕ ಅಮೃತ ದೇಸಾಯಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಮತ್ತೊಮ್ಮೆ ಚುನಾಯಿತರಾಗಿ ಬರುವ ಹುಮ್ಮಸ್ಸಿನಲ್ಲಿದ್ದಾರೆ. ಪಕ್ಷದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ವಿಜಯ ಪತಾಕೆ ಹಾರಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಅಮೃತ ದೇಸಾಯಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ತವನಪ್ಪ ಅಷ್ಟಗಿ ಅಲ್ಲದೇ ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ಮುಖಂಡರು ಈ ಎಲ್ಲ ಮುನಿಸು, ಮನಸ್ತಾಪಗಳನ್ನು ಹೇಗೆ ಬಗೆಹರಿಸಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತಾರೋ ಕಾದು ನೋಡಬೇಕಿದೆ.











Click it and Unblock the Notifications