ಹುಬ್ಬಳ್ಳಿಯಲ್ಲಿ ಏಳು ಕಡೆ ಐಟಿ ರೇಡ್ : ಚಿನ್ನ, ನಗದು ವಶ
ಉತ್ತರ ಕರ್ನಾಟಕದ ಎರಡನೇ ರಾಜಧಾನಿ ಮತ್ತು ಛೋಟಾ ಬಾಂಬೆ ಎಂದೇ ಪರಿಚಿತವಾದ ಹುಬ್ಬಳ್ಳಿಯು ವ್ಯಾಪಾರದಿಂದ ವಾಣಿಜ್ಯ ನಗರಿ ಎಂದೇ ಕರೆಯಿಸಿಕೊಳ್ಳುತ್ತದೆ. ಸಹಜವಾಗಿ ನೋಟುಗಳ ಅಕ್ರಮ ಚಲಾವಣೆಯೂ ಭರ್ಜರಿಯಾಗಿ ನಡೆಯುತ್ತಿದೆ.
ಹುಬ್ಬಳ್ಳಿ, ಡಿಸೆಂಬರ್, 10 : ನಗರದ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗಾರದ ಅಂಗಡಿ ಮತ್ತು ಕೆಲ ವ್ಯಾಪಾರಸ್ಥರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಸಂಜೆ ದಾಳಿ ನಡೆಸಿದ್ದಾರೆ.
ಬಂಗಾರದ ಅಂಗಡಿಗಳಿಂದ ಸಾಕಷ್ಟು ಪ್ರಮಾಣದ ದಾಖಲೆ ಇಲ್ಲದ ಬಂಗಾರದ ಆಭರಣಗಳು ಮತ್ತು ವ್ಯಾಪಾರಿಗಳಿಂದ ಹೊಸ 2000 ರೂ.ಗಳ ನೋಟನ್ನು ಈ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಎಲ್ಲೆಲ್ಲಿ ದಾಳಿ : ಸ್ಥಳೀಯ ದೇಶಪಾಂಡೆನಗರದಲ್ಲಿರುವ ಸಿಲ್ವರ್ ಪ್ಯಾಲೇಸ್ ಅಪಾರ್ಟ್ಮೆಂಟ್ ಸುಂದರ ಸಿಂಗ್ ಎಂಬುವವರ ಮನೆ ಮೇಲೆ ಮತ್ತು ನಗರದ ಜವಳಿ ಸಾಲನಲ್ಲಿರುವ ಸಾಗರ್ ಫೈನಾನ್ಸ್ ಹಾಗೂ ಬಂಗಾರದ ಅಂಗಡಿ. [ಹೈದರಾಬಾದ್ : ಐಟಿ ದಾಳಿ, 17 ಲಕ್ಷ ಅಕ್ರಮ ಹಣ ವಶ]
ಇನ್ನೂ ದಾಳಿ ಪ್ರಗತಿಯಲ್ಲಿದ್ದು, ನಾಳೆ ಮತ್ತೊಂದಿಷ್ಟು ಭ್ರಷ್ಟ ಕುಳಗಳ ಮನೆಗೆ ಮತ್ತು ಕೆಲವೊಂದು ರಾಜಕಾರಣಿಗಳ ಮನೆಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಯುವ ಸಾಧ್ಯತೆ ಇದೆ.
ಛೋಟಾ ಬಾಂಬೆ : ಉತ್ತರ ಕರ್ನಾಟಕದ ಎರಡನೇ ರಾಜಧಾನಿ ಮತ್ತು ಛೋಟಾ ಬಾಂಬೆ ಎಂದೇ ಪರಿಚಿತವಾದ ಹುಬ್ಬಳ್ಳಿಯು ವ್ಯಾಪಾರದಿಂದ ವಾಣಿಜ್ಯ ನಗರಿ ಎಂದೇ ಕರೆಯಿಸಿಕೊಳ್ಳುತ್ತದೆ. ದೂರದ ಬಿಜಾಪುರ, ಬಾಗಲಕೋಟೆ, ಶಿರಸಿ, ಕಾರವಾರ, ಹಾವೇರಿ, ರಾಣಿಬೆನ್ನೂರ ಬೆಳಗಾವಿ ಸೇರಿದಂತೆ ಅನೇಕ ಕಡೆಗಳಿಂದ ವ್ಯಾಪಾರಿಗಳು ಹುಬ್ಬಳ್ಳಿಗೆ ವ್ಯವಹಾರಕ್ಕೆಂದು ನಗರಕ್ಕೆ ಆಗಮಿಸುತ್ತಾರೆ.
ಇಲ್ಲಿಯ ಎಪಿಎಂಸಿಗೆ ಉತ್ತರ ಕರ್ನಾಟಕದ ಎಲ್ಲ ಊರುಗಳಿಂದ ರೈತರು ತಮ್ಮ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ತರುತ್ತಾರೆ. ಇನ್ನು ಇಡೀ ಉತ್ತರ ಕರ್ನಾಟಕದ ಬಹಳಷ್ಟು ಜನರು ಮದುವೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಹುಬ್ಬಳ್ಳಿಯಿಂದಲೇ ಬಂಗಾರದ ಆಭರಣಗಳನ್ನು ಖರೀದಿಸುತ್ತಾರೆ.
ನಗರದಲ್ಲಿ ಐದಕ್ಕೂ ಹೆಚ್ಚು ಬೃಹತ್ ಶಾಪಿಂಗ್ ಮಾಲ್ ಗಳು ಇರುವುದರಿಂದ ಮತ್ತು ಎಲ್ಲವೂ ಹುಬ್ಬಳ್ಳಿಯಲ್ಲಿ ಸಿಗುವುದರಿಂದ ಜನರು ನಗರಕ್ಕೆ ಖರೀದಿಗೆಂದು ಬರುತ್ತಾರೆ. ಇನ್ನೂ ಐದು ಶಾಪಿಂಗ್ ಮಾಲ್ ಗಳು ನಗರದಲ್ಲಿ ನಿರ್ಮಾಣವಾಗುತ್ತಿವೆ.